
ಭಾರತೀಯ ಸೈನ್ಯದಲ್ಲಿ ಬೆಳಗಾವಿ ಪ್ರದೇಶದ ಸೈನಿಕರು ಮುಂಚೂಣಿಯಲ್ಲಿದ್ದಾರೆ – ಚನ್ನರಾಜ ಹಟ್ಟಿಹೊಳಿ ಪ್ರಶಂಸೆ
Soldiers from Belgaum region are at the fore in Indian Army - Channaraja Hattiholi praise


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಹಳ್ಳಿ ಹಳ್ಳಿಗಳ ಪಾತ್ರದ ಕುರಿತು ಇನ್ನಷ್ಟು ದಾಖಲೆಗಳನ್ನು ಹೊರತೆಗೆಯಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಖಾನಾಪುರ ತಾಲೂಕಿನ ಅವರೊಳ್ಳಿ- ಬಿಳಕಿಯಲ್ಲಿ ಹಮ್ಮಿಕೊಳ್ಳಲಾಗಿದ್ದ 75ನೇಯ ಸ್ವಾತಂತ್ರ್ಯ ಚಳುವಳಿಯ ಅಮೃತ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 1857 ರಲ್ಲಿ ಜರುಗಿದ ಸಿಪಾಯಿ ದಂಗೆಯನ್ನು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಕರೆಯಲಾಗುತ್ತದೆ. ಆದರೆ ಇದಕ್ಕಿಂತ 25 ವರ್ಷಗಳ ಮೊದಲು ಕಿತ್ತೂರು ನಾಡಿನ ವೀರರಾಣಿ ಚನ್ನಮ್ಮ ಬ್ರಿಟಿಷ ಸರಕಾರದ ವಿರುದ್ಧ ಬಂಡಾಯ ಸಾರಿದ್ದರು. ಇಂದಿಗೂ ಭಾರತೀಯ ಸೈನ್ಯದಲ್ಲಿ ಬೆಳಗಾವಿ ಪ್ರದೇಶದ ಸೈನಿಕರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.
ನಮ್ಮೂರು -ನಿಮ್ಮೂರುಗಳಲ್ಲಿಯೂ ಸ್ವಾತಂತ್ರ್ಯ ಹೋರಾಟದ ರಣಕಹಳೆ ಮೊಳಗಿದ್ದವು. ಭಾರತದ ಯಾವ್ಯಾವುದೋ ಮೂಲೆಗಳಲ್ಲಿ ನಡೆದ ಹೋರಾಟಗಳನ್ನು ನೆನಪಿಸಿಕೊಳ್ಳುವ ನಾವು ನಮ್ಮ ಕರ್ನಾಟಕದಲ್ಲಿ, ನಮ್ಮ ಜಿಲ್ಲೆ, ನಮ್ಮ ತಾಲ್ಲೂಕಿನಲ್ಲೇ ನಡೆದ ಹೋರಾಟಗಳನ್ನು ಮರೆತಿದ್ದೇವೆ. ಕೋಟ್ಯಂತರ ಜನರು ಪಾಲ್ಗೊಂಡ, ತ್ಯಾಗ-ಬಲಿದಾನಗಳಿಂದ ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ ಇಂಥ ಜನಸಂಗ್ರಾಮಗಳ ದಾಖಲಾತಿ ಇತಿಹಾಸಕಾರರಿಗೆ ಸದಾ ಸವಾಲಾಗಿದೆ ಎಂದು ಚನ್ನರಾಜ ಹೇಳಿದರು.
ಕರ್ನಾಟಕದ ಪ್ರತಿ ಊರು, ಪ್ರತಿ ಊರಿನ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ ಅವರೆಲ್ಲ ಅನಕ್ಷರಸ್ಥರಾಗಿದ್ದರು. ಹೇಗೆ ದಾಖಲಿಸಬೇಕೆನ್ನುವುದು ಗೊತ್ತಿರಲಿಲ್ಲ. ಸ್ವತಃ ತಮ್ಮ ಮನೆಯವರೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಇತರರಿಗೆ ತಿಳಿಯುತ್ತಿರಲಿಲ್ಲ. ಹಾಗಾಗಿ ಎಷ್ಟೋ ಹಳ್ಳಿಯ ಕುರಿತು, ಎಷ್ಟೋ ಹೋರಾಟಗಾರರ ಕುರಿತು ದಾಖಲೆಯೇ ಇಲ್ಲ. ಹಾಗಾಗಿ ಈ ಬಗ್ಗೆ ಇನ್ನಷ್ಟು ಅಧ್ಯಯನಗಳಾಗಿ ಅಂತಹ ಹಳ್ಳಿಗಳನ್ನು, ಅಂತಹ ಮಹನೀಯರನ್ನು ಗುರುತಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮುಂಚೂಣಿ ನಾಯಕರು ವಿದ್ಯಾವಂತರು, ಚೆನ್ನಾಗಿ ಓದಿಕೊಂಡವರು ಆಗಿದ್ದರು. ಆದರೆ ಅವರ ಬೆನ್ನಿಗೆ ನಿಂತು ಬಲ ತುಂಬಿದವರಲ್ಲಿ ಬಹುತೇಕರು ಜೀವನಾನುಭವದಿಂದ ಬಾಳು ಬೆಳಗಿಸಿಕೊಂಡ ಜೀವಗಳು. ಆದರೆ ಅಕ್ಷರ ಜ್ಞಾನದಿಂದ ದೂರವಿದ್ದವರು. ಭಾರತದ ಇತಿಹಾಸದಲ್ಲಿ ಕೆಲವೇ ನಾಯಕರ, ಕೆಲವೇ ಊರುಗಳ ಹೆಸರು ಪ್ರಸ್ತಾಪವಾಗಲು, ಅಗಣಿತ ಜನರು ಇತಿಹಾಸದ ದಾಖಲೆಗಳಿಂದ ದೂರ ಉಳಿಯಲು ಈ ಅಂಶವೇ ಮುಖ್ಯ ಕಾರಣ. ಪಂಜಾಬ್ನ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಷ್ಟೇ ಭೀಕರವಾಗಿ ನಡೆದದ್ದು ಗೌರಿಬಿದನೂರು ತಾಲ್ಲೂಕು ವಿದುರಾಶ್ವತ್ಥ ಹತ್ಯಾಕಾಂಡ. ಬರ್ಡೋಲಿಯಲ್ಲಿ ನಡೆದ ಕರನಿರಾಕರಣ ಚಳವಳಿಗೆ ಸರಿಸಮನಾಗಿ ನಡೆದದ್ದು ಉತ್ತರ ಕನ್ನಡ ಜಿಲ್ಲೆಯ ಕರನಿರಾಕರಣ ಹೋರಾಟ ಎಂದರು.
ಕಳೆದ 75 ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆಳಿದ ಸರಕಾರಗಳು ದೇಶವನ್ನು ಪುನರ್ ನಿರ್ಮಾಣ ಮಾಡುವ ಮೂಲಕ ಜನರಿಗೆ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಟ್ಟಿದೆ. ಸಾವಿರಾರು ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಕೊಟ್ಯಂತರ ಎಕರೆ ಜಮೀನಿಗೆ ನೀರಾವರಿ ಮಾಡಲಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಆರ್ಥಿಕ ಶಿಸ್ತು ತರಲಾಗಿದೆ. ಲಕ್ಷಾಂತರ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲಾಗಿದೆ. ಲಕ್ಷಾಂತರ ಆ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ. ದೇಶಾದ್ಯಂತ ಕೋಟ್ಯಂತರ ಯುವಕರಿಗೆ ಉದ್ಯೋಗ ನೀಡಲಾಗಿದೆ. ಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡಲಾಗಿದೆ. ಲಕ್ಷಾಂತರ ಕಿಮೀ ಉದ್ದದ ರಸ್ತೆಗಳ ನಿರ್ಮಾಣವಾಗಿದೆ. ರಸ್ತೆ ಸಾರಿಗೆ, ರೈಲು, ವಿಮಾನಯಾನ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಹಳ್ಳಿ ಹಳ್ಳಿಗೆ ಮೂಲಭೂತ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ವ್ಯವಸ್ಥೆಗಳು ಉಳಿದು ಇನ್ನಷ್ಟು ಬಲಗೊಳ್ಳಬೇಕಿದೆ. ಇದಕ್ಕಾಗಿ ಯುವಕರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಮುಂದಾಗಬೇಕಿದೆ ಎಂದು ಚನ್ನರಾಜ ಕರೆ ನೀಡಿದರು.

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ