ಪ್ರವಾಹದಿಂದ ಬೆಳೆ ನಷ್ಟ: ರೈತ ಆತ್ಮಹತ್ಯೆ
ಪ್ರಗತಿವಾಹಿನಿ ಸುದ್ದಿ, ಮಾಂಜರಿ –
ಇತ್ತೀಚೆಗೆ ಬಂದ ಕೃಷ್ಣಾ ನದಿ ಪ್ರವಾಹದಲ್ಲಿ ತನ್ನ ಎರಡು ಎಕರೆ ಜಮೀನಿನಲ್ಲಿ ಸಂಪೂರ್ಣ ಬೆಳೆ ನಷ್ಟ ಆಗಿದ್ದರಿಂದ ಮನನೊಂದು ಚಿಕ್ಕೋಡಿ ತಾಲ್ಲೂಕಿನ ಯಡೂರವಾಡಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಮದೇವ್ ರಾಮಕೃಷ್ಣ ಪಿರಾಜಿ (45) ಇಂದು ಮಧ್ಯಾಹ್ನ ತನ್ನ ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಂಕಲಿ ಪೊಲೀಸ್ ಠಾಣೆಯ ಪಿಎಸ್ಐ ಗಣಪತಿ ಕೊಗನೋಳಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ರೈತ ನಾಮದೇವ ಪಿರಾಜೆ ಗ್ರಾಮದ ವಿವಿಧ ಸಹಕಾರಿ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳಿಂದ ತನ್ನ ಕೃಷಿ ವ್ಯವಸಾಯಕ್ಕಾಗಿ ಸುಮಾರು ನಾಲ್ಕು ಲಕ್ಷ ರೂ. ಸಾಲ ಪಡೆದಿದ್ದರು. ಆದರೆ ಇತ್ತೀಚೆಗೆ ಬಂದ ಪ್ರವಾಹದಲ್ಲಿ ತನ್ನ ಹೊಲದಲ್ಲಿದ್ದ ಎಲ್ಲ ಬೆಳೆ ನಷ್ಟ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಮೂರು ಹೆಣ್ಣು ಮಕ್ಕಳು, ಒಂದು ಗಂಡು ಮಗ ಮತ್ತು ಹೆಂಡತಿ ಇದ್ದಾರೆ.