ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೊರೋನಾ ಪಾಸಿಟಿವ್ ಬಂದು ಮೂರೇ ದಿನಕ್ಕೆ ವಿಧಾನಮಂಡಳದ ಅಧಿವೇಶನಕ್ಕೆ ಹಾಜರಾಗಿದ್ದಾರೆ.
ಸೆಪ್ಟಂಬರ್ 19ಕ್ಕೆ ತಮಗೆ ಪಾಸಿಟಿವ್ ಬಂದಿರುವುದಾಗಿ ಖರ್ಗೆ ಟ್ವೀಟ್ ಮಾಡಿದ್ದರು. ರಾತ್ರಿ 8 ಗಂಟೆಗೆ ಟ್ವೀಟ್ ಮಾಡಿ, ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ ಎಂದೂ ವಿನಂತಿಸಿದ್ದರು.
ಆದರೆ ಸೆ.22ರಂದು ವಿಧಾನಮಂಡಳ ಅಧಿವೇಶನಕ್ಕೆ ಅವರು ಹಾಜರಾಗಿದ್ದಾರೆ. ಅಧಿವೇಶನದಲ್ಲಿ ಸರಕಾರದ ವಿರುದ್ಧ ಭಾಷಣವನ್ನೂ ಮಾಡಿದ್ದಾರೆ. ಇತರೆಲ್ಲ ಶಾಸಕರೊಂದಿಗೆ ಬೆರೆತಿದ್ದಾರೆ.
ಅಧಿವೇಶನಕ್ಕೆ ಹಾಜರಾಗುವವರೆಲ್ಲ ಖಡ್ಡಾಯವಾಗಿ ನೆಗೆಟಿವ್ ರಿಪೋರ್ಟ್ ತರಬೇಕೆನ್ನುವ ನಿಯಮ ವಿಧಿಸಲಾಗಿತ್ತು.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಖರ್ಗೆ, ತಮಗೆ ಪಾಸಿಟಿವ್ ಬಂದಿರುವುದು ಲ್ಯಾಬ್ ತಪ್ಪಿನಿಂದ. ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಹಾಗಾಗಿ ಸದನಕ್ಕೆ ಹಾಜರಾಗಿದ್ದೇನೆ ಎಂದಿದ್ದಾರೆ.
ಆದರೆ ಮೊದಲು ಬಂದ ಪಾಸಿಟಿವ್ ವರದಿ ತಪ್ಪಾಗಿದೆಯೋ, ನೆಗೆಟಿವ್ ವರದಿ ತಪ್ಪಾಗಿದೆಯೋ ಎನ್ನುವುದನ್ನು ಪರೀಕ್ಷಿಸಲು 3ನೇ ಬಾರಿಗೆ ಟೆಸ್ಟ್ ಮಾಡಿಸಿಕೊಳ್ಳಬೇಕಿತ್ತು. ಅಥವಾ ಪಾಸಿಟಿವ್ ಬಂದು 3 ದಿನಕ್ಕೆ ಅದು ನೆಗೆಟಿವ್ ಆಗಿತ್ತಾ ಎನ್ನುವುದನ್ನೂ ತಿಳಿದುಕೊಳ್ಳಬೇಕಿತ್ತು. ಅದನ್ನು ಮಾಡದೆ ನೆಗೆಟಿವ್ ವರದಿ ಬಂದ ತಕ್ಷಣ ಅದನ್ನು ಹಿಡಿದು ಅವರು ಸದನಕ್ಕೆ ಹಾಜರಾಗಿದ್ದಾರೆ. ಇದರಿಂದಾಗಿ ಇಡೀ ಸದನಕ್ಕೆ ಆತಂಕ ಉಂಟಾಗುವಂತೆ ಮಾಡಿದ್ದಾರೆ.
ಕೇಂದ್ರ ,ಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ, ಶಾಸಕ ನಾರಾಯಣರಾವ್ ಕೊರೋನಾದಿಂದ ಸಾವಿಗೀಡಾಗಿ ಇಡೀ ದೇಶವೇ ಆತಂಕದಲ್ಲಿದ್ದರೂ ಶಾಸಕರೊಬ್ಬರು ಈ ರೀತಿ ಜವಾಬ್ದಾರಿ ರಹಿತವಾಗಿ ವರ್ತಿಸಿದ್ದು ವಿಪರ್ಯಾಸವಾಗಿದೆ.