ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಿದ್ದು, ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಈ ನಡುವೆ ಕೊರೊನಾ ಭೀತಿ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕೊಪ್ಪ ತಾಲೂಕಿನ 53 ವರ್ಷದ ವ್ಯಕ್ತಿಗೆ ಅನಾರೋಗ್ಯ ಕಂಡುಬಂದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಜ್ವರ ಇರುವುದರಿಂದ ಕೊರೊನಾ ಶಂಕೆ ಹಿನ್ನಲೆಯಲ್ಲಿ ವೈದ್ಯರು ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು ಕೊವಿಡ್ ಟೆಸ್ಟ್ ಗೆ ಕಳುಹಿಸಿದ್ದರು.
ಗಂಟಲು ದ್ರವ, ರಕ್ತದ ಮಾದರಿ ವರದಿ ಇನ್ನೂ ಬಂದಿರಲಿಲ್ಲ. ಆದರೆ ತನಗೆ ಕೊರೊನಾ ಸೋಂಕು ಬಂದಿರಬಹುದೆಂದು ಭಯದಿಂದ ವ್ಯಕ್ತಿ ಆಸ್ಪತ್ರೆಯ ಶೌಚಾಲಯದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.