ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾದಿಂದ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಕ್ರಮ ಉತ್ತಮ ನಿಜ ಆದರೆ, ಈ ಲಾಕ್ಡೌನ್ ಜನರ ಬದುಕನ್ನು ಹೈರಾಣಾಗಿಸುತ್ತಿದೆ ಎಂಬುದೂ ನಮಗೆಲ್ಲರಿಗೂ ಅರಿವಿಗೆ ಬಂದಿರುವ ವಿಚಾರ. ಹೀಗಾಗಿಯೇ ಜನಹಿತದ ಲಾಕ್ಡೌನ್ ಮಾಡುವುದರತ್ತ ಸರ್ಕಾರ ಆದ್ಯತೆ ನೀಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ಜನರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್ಡೌನ್ನ ಉಸಾಬರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಜನರ ಕೈಬಿಟ್ಟಿದೆ. ಹೀಗಿರುವಾಗ ರಾಜ್ಯ ಸರ್ಕಾರ ಜನರನ್ನುನಿರ್ಲಕ್ಷಿಸಬಾರದು. ಲಾಕ್ಡೌನ್ನಲ್ಲಿ ಪರಿಹಾರ ಕ್ರಮಗಳು ಅಗತ್ಯವಾಗಿದೆ. ಸಂಕಷ್ಟಕ್ಕೀಡಾಗಿರುವ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಆಹಾರ, ಆರ್ಥಿಕ ಪ್ಯಾಕೇಜ್ ಸೇರಿದಂತೆ ಪರಿಹಾರ ಕ್ರಮಗಳನ್ನು ಸರ್ಕಾರ ಘೋಷಿಸಬೇಕು ಎಂದಿದ್ದಾರೆ.
ನೆರೆಯ ರಾಜ್ಯಗಳಲ್ಲಿ ಲಾಕ್ಡೌನ್ ಹೇಗಿದೆ, ಜನರಿಗೆ ಹೇಗೆ ನೆರವು ಸಿಗುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಅವಲೋಕಿಸಬೇಕು. ಜನರನ್ನು ಮನೆಗಳಿಂದ ಹೊರ ಬಾರದಂತೆ ತಡೆಯುವುದಷ್ಟೇ ಈ ಲಾಕ್ಡೌನ್ನ ಉದ್ದೇಶವಾಗಬಾರದು. ಜನರ ಸಹಭಾಗಿತ್ವದೊಂದಿಗೆ ವೈರಾಣುವನ್ನು ನಿಗ್ರಹಿಸುವುದು ಉದ್ದೇಶವಾಗಬೇಕು. ಅದಕ್ಕಾಗಿ ಜನರಿಗೆ ಅಗತ್ಯ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನೇ ಬೇಕಾದರೆ ಸ್ಥಗಿತಗೊಳಿಸಲಿ, ನಿಗಮ ಮಂಡಳಿಗಳನ್ನು ರದ್ದುಮಾಡಲಿ. ಆದರೆ ಜನರಿಗೆ ಆರ್ಥಿಕ ನೆರವನ್ನು ನೀಡಿ ಬದುಕಿಗೆ ದಾರಿ ತೋರಿಸಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಇಬ್ಬರು ಸಚಿವರು ಸೇರಿ ನಾಲ್ವರ ಬಂಧನ