Latest

ಅದಮ್ಯ ಜೀವನಪ್ರೀತಿಯ ಸಾರುವ ”ಕ್ಷಣ ಕ್ಷಣವೂ… ಬದುಕಬೇಕು”

ಅದ್ಭುತವೆನಿಸುವುದು ಅಂಥ ಹುಡುಗನೊಬ್ಬ ಡಾಕ್ಟರ್ ಆದ ಮೇಲೆ ಬದುಕಿದ ರೀತಿ ಮತ್ತು ಬದುಕಿನ ಬಗ್ಗೆ ಅವನಿಗಿದ್ದ ಅದಮ್ಯ ಪ್ರೀತಿ… ಆ ಲೆಕ್ಕಕ್ಕೆ ಇದೊಂದು ಸಾಮಾನ್ಯರ ಭಗವದ್ಗೀತೆಯೇ ಸರಿ…

-ನೀತಾ ರಾವ್
ಬೂಟ್ ಪಾಲಿಷ್ ಮಾಡುವ ಹುಡುಗನೊಬ್ಬ ಡಾಕ್ಟರ್ ಆದ ರೋಚಕ ಕಥೆಯನ್ನು ಹೇಳಲು ಹೊರಟರೆ ನಿಮಗೆಲ್ಲ ಖಂಡಿತ ಆಶ್ಚರ್ಯಕರವಾಗಬಹುದು, ಖುಷಿಯಾಗಬಹುದು, ಅದ್ಭುತವೆನಿಸಬಹುದು. ಆದರೆ ಅಂಥ ಹುಡುಗನೊಬ್ಬ ಡಾಕ್ಟರ್ ಆಗುವುದರಲ್ಲಿಯೇ ಅದ್ಭುತ ಅಡಗಿಲ್ಲ. ಮತ್ತದು ಅಷ್ಟೇ ಆಗಿದ್ದರೆ ನಾನು ಬರೆಯುವ ಅವಶ್ಯಕತೆಯೂ ಇರುತ್ತಿರಲಿಲ್ಲ. ಅದ್ಭುತವೆನಿಸುವುದು ಅಂಥ ಹುಡುಗನೊಬ್ಬ ಡಾಕ್ಟರ್ ಆದ ಮೇಲೆ ಬದುಕಿದ ರೀತಿ ಮತ್ತು  ಬದುಕಿನ ಬಗ್ಗೆ ಅವನಿಗಿದ್ದ ಅದಮ್ಯ ಪ್ರೀತಿ. 
        ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಹುಟ್ಟಿದ ಯಶವಂತ ಎನ್ನುವ ಕೊಳೆಗೇರಿಯ ಹುಡುಗನಿಗೆ ತಾಯಿಯ ಸಹಜವಾದ ಮಮತೆ, ಪ್ರೀತಿ ಎಂದೆಂದಿಗೂ ಸಿಗಲೇ ಇಲ್ಲ. ಸದಾ ಕುಡಿದು ಬಿದ್ದಿರುತ್ತಿದ್ದ ಅಪ್ಪನಿಗಂತೂ ಬಹುಷಃ ಈ ಭೂಮಿಯ ಮೇಲೆ ಪ್ರೀತಿ ಎನ್ನುವುದೊಂದು ಭಾವನೆ ಇರುತ್ತದೆಂಬ ಕಲ್ಪನೆಯೂ ಇದ್ದಿರಲಿಲ್ಲ. ಅಂಥ ತಾಯಿ-ತಂದೆಯರ ಹಿರಿಯ ಮಗನಾಗಿ ಹುಟ್ಟಿದ ದುರದೃಷ್ಟಕ್ಕೆ ಯಶವಂತನಿಗೆ ಪುಟ್ಟ ಹುಡುಗನಾಗಿದ್ದಾಗಲೂ ದುಡಿದು ಒಂದಿಷ್ಟು ಹಣವನ್ನು ತಂದು ತಾಯಿಯ ಕೈಗಿಡದಿದ್ದರೆ ಹೊಟ್ಟೆಗೆ ಗಂಜಿ ಬೀಳುತ್ತಿರಲಿಲ್ಲ. ಹಾಗಾಗಿ ತನಗೆ  ತಿಳಿದಂತೆ ಏನೇನೋ ಕೆಲಸಗಳನ್ನು ಮಾಡುತ್ತಲಿದ್ದ ಯಶವಂತ.
ಮುಂಬೈಯ ಕೊಳಗೇರಿ ಧಾರಾವಿ ಎಂದರೆ ಅದು ಸಾಕ್ಷಾತ್ ನರಕ. ಅಂಥಲ್ಲಿದ್ದುಕೊಂಡು ದಿನಾಲೂ ರೇಲ್ವೆ ಸ್ಟೇಷನ್ ಗಳಲ್ಲಿ ಕುಳಿತು ಬೂಟ್ ಪಾಲಿಷ್ ಮಾಡುತ್ತ, ಮಳೆಗಾಲದಲ್ಲಿ ಈ ಬಿಸನೆಸ್ ಕಡಿಮೆಯಾಗುತ್ತಿದ್ದಂತೆ ಟ್ರೇನ್ ಗಳನ್ನೇರಿ ಸಣ್ಣ ಪುಟ್ಟ ‌ವಸ್ತುಗಳನ್ನು ಮಾರಾಟ ಮಾಡುತ್ತ ಮಾಡುತ್ತ ಮುಂಬಯಿಯಿಂದ ಲೋಣಾವಳಾವರೆಗೆ ಪ್ರಯಾಣ ಬೆಳೆಸುತ್ತಿದ್ದ ಹೇಳುವವರು, ಕೇಳುವವರಿಲ್ಲದ ಪುಟ್ಟ ಪೋರ ಒಮ್ಮೆ ಚಲಿಸುವ ಟ್ರೇನ್ ನಿಂದ ಬಿದ್ದು ಆರು ತಿಂಗಳ ಕಾಲ ಆಸ್ಪತ್ರೆಯ ಪಾಲಾಗುತ್ತಾನೆ. ಬಲಗಿವಿಯ ಮೇಲ್ಭಾಗ ಪೂರಾ ಕತ್ತರಿಸಿ ಹೋದ, ಕಾಲಿನ ಮೇಲೆಯೇ ಟ್ರೇನ್ ಹರಿದು ಜರ್ಜರಿತನಾದ ಹುಡುಗನನ್ನು ನೋಡಿಕೊಳ್ಳಲು ಐದಾರು ಡಾಕ್ಟರ್ ಗಳ ತಂಡವೇ ಬರುತ್ತಿರುತ್ತದೆ. ಅವರ ಪ್ರೀತಿ, ಸೇವಾ ಮನೋಭಾವವನ್ನು ಕಂಡ ಹುಡುಗನ ಮನಸ್ಸಿನಲ್ಲಿ ಡಾಕ್ಟರ್ ವೃತ್ತಿಯ ಬಗ್ಗೆ ಗೌರವ ಬೆಳೆದು ತಾನೂ ಡಾಕ್ಟರ್ ಆಗಬೇಕು, ಜನರ ಸೇವೆ ಮಾಡಬೇಕು ಎನ್ನುವ ಮುಗ್ಧ, ಆದರೆ ಗಟ್ಟಿ ‌ಆಸೆ ಬೆಳೆಯುತ್ತದೆ.
ಹೇಗಾದರೂ ಮಾಡಿ ತಾನು ಓದಲೇಬೇಕೆಂಬ ಹಟ ತೊಟ್ಟ ಹುಡುಗ ತಾನೇ ಶಾಲೆಗೆ ಹೋಗಿ ಹೆಸರು ನೋಂದಾಯಿಸಿಕೊಂಡು ಎಲ್ಲ ಪ್ರತಿಕೂಲ‌ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಡಾಕ್ಟರ್ ಆಗುತ್ತಾನೆ. ಮನೆಯವರ ಒತ್ತಾಯ, ಒತ್ತಡಗಳಿಗೆ ಮಣಿಯದೇ ತಾಳ್ಮೆಯಿಂದಿದ್ದು ಕೊನೆಗೂ ಬಿ.ಕಾಂ. ಆದ, ಬ್ಯಾಂಕಿನಲ್ಲಿ ಕೆಲಸ ಮಾಡುವ ಹುಡುಗಿ ಮಂಗಲಾಳನ್ನು ಮದುವೆಯಾಗುತ್ತಾನೆ. ಅವನಿಗಾಗಲೇ ಮುಂಬೈ ಮಹಾನಗರ ಪಾಲಿಕೆಯಲ್ಲಿ ಡಾಕ್ಟರ್ ಕೆಲಸ ಸಿಕ್ಕಿರುತ್ತದೆ.
ಇಲ್ಲಿಂದ ಮುಂದೆ ಡಾಕ್ಟರ್ ರ ಜೀವನದಲ್ಲಿ ಬರುವ ತಿರುವು, ಪರಿವರ್ತನೆ ನಾವು ಮನಸಿಟ್ಟು ತಿಳಿದುಕೊಳ್ಳಲೇಬೇಕಾದಂಥವು. ಜೀವನದ ಬಗ್ಗೆ ಅದಮ್ಯ ಪ್ರೀತಿ, ಉತ್ಸಾಹ ಇರುವ ಡಾಕ್ಟರ್ ತಮ್ಮ ಜೀವನವನ್ನು ಅತ್ಯಂತ ಆನಂದಮಯವಾಗಿ ಪರಿವರ್ತಿಸಿಕೊಳ್ಳುತ್ತಾರೆ. ದಿನಾಲೂ ತಪ್ಪದೇ ಪುಸ್ತಕಗಳನ್ನು ಓದುತ್ತಾರೆ. ಮರಾಠಿಯ *ಜ್ಞಾನೇಶ್ವರಿ*, ವೀರ ಸಾವರ್ಕರ್ ‌ಅವರು ಬರೆದ *ಕಾಳಾಪಾನಿ* (ಕಪ್ಪು ನೀರು) ಮತ್ತು *ಮಾಝೆ ಜನ್ಮಠೇಪ* (ನನ್ನ ಜೀವಾವಧಿ ಶಿಕ್ಷೆ) ಈ ಪುಸ್ತಕಗಳು ಅವರ ಮೇಲೆ ತುಂಬಾ ಪ್ರಭಾವ ಬೀರುತ್ತವೆ.
ಅವರು ತಮ್ಮ ಸಮಯವನ್ನು ಒಂಚೂರೂ ವ್ಯರ್ಥ ಮಾಡದೇ ಕೆಲಸದ ನಂತರದ ಅಷ್ಟೂ ಸಮಯವನ್ನು ಓದಿಗಾಗಿ, ಹೆಂಡತಿ ಮಕ್ಕಳೊಂದಿಗೆ ಮತ್ತು ಸ್ನೇಹಿತರೊಂದಿಗೆ ಮಾತು, ಹರಟೆ, ಚರ್ಚೆ ಮುಂತಾದವುಗಳಲ್ಲಿ ಆನಂದಮಯವಾಗಿ ಕಳೆಯುತ್ತಾರೆ. ಪ್ರವಾಸ ಅವರ ಪ್ರೀತಿಯ ಹವ್ಯಾಸವಾಗುತ್ತದೆ. ಟ್ರೆಕ್ಕಿಂಗ್ ನಲ್ಲಿ ಅಪಾರವಾದ ಪರಿಣಿತಿಯನ್ನು ಸಾಧಿಸಿ ಅನೇಕ ಟ್ರೆಕ್ಕಿಂಗ್ ಕ್ಲಬ್ ಗಳ ಸದಸ್ಯರಾಗಿ ಟ್ರೆಕ್ಕಿಂಗ್ ಪ್ರಿಯರ ಗುಂಪುಗಳ ಕ್ಯಾಪ್ಟನ್ ಆಗಿ ಬೆಟ್ಟಗಳನ್ನು ಹತ್ತುತ್ತಾರೆ‌. ಹೆಂಡತಿ ಮಂಗಲಾಗೆ ಟ್ರೆಕ್ಕಿಂಗ್ ಮಾಡಿಸಿ ಅವಳಿಂದ ಇದು ಸಾಧ್ಯವೇ ಎಂದು ಪರೀಕ್ಷಿಸಿ ನಂತರ ಹೇಳುತ್ತಾರೆ, “ನೀನು ಇವತ್ತು ನಿಜವಾದ ಅರ್ಥದಲ್ಲಿ ನನ್ನ ಸಖಿಯಾದೆ”. ನಂತರ ಅವರಿಬ್ಬರೂ ಸೇರಿ,  ಒಮ್ಮೊಮ್ಮೆ ತಮ್ಮ ಪುಟ್ಟ  ಮಕ್ಕಳನ್ನೂ ಸೇರಿಸಿಕೊಂಡು ಭಾರತದ ಉದ್ದಗಲಕ್ಕೂ ತಿರುಗಾಟ ಮಾಡಿ, ಅನೇಕ ಬೆಟ್ಟಗಳನ್ನು ಹತ್ತುತ್ತಾರೆ.
ಈ ಎಲ್ಲ ಪ್ರವಾಸಗಳನ್ನು ಮಾಡುವಾಗ ಡಾಕ್ಟರ್ ಆಯಾ ಸ್ಥಳಗಳ ಮಾಹಿತಿಯನ್ನು ಮೊದಲೇ ಸಂಗ್ರಹಿಸಿ ಅಲ್ಲಿನ ಭಾಷೆಗಳ ಬಗ್ಗೆ ಒಂದಿಷ್ಟು ಅಭ್ಯಾಸ ಮಾಡುತ್ತಿರುತ್ತಾರೆ. ಸಾವರ್ಕರ್ ಇದ್ದ ಸೆಲ್ಯುಲರ್‌ ಜೈಲನ್ನು ನೋಡಲೆಂದೇ ಅಂದಮಾನಕ್ಕೆ ಹೋಗಿ ಅಂದಮಾನ್, ನಿಕೋಬಾರ್ ನ ಎಲ್ಲ ದ್ವೀಪಗಳನ್ನು ನೋಡುತ್ತಾರೆ. ಭಗತ್ ಸಿಂಗ್ ಮೊದಲಾದ ಮೂವರು ಹುತಾತ್ಮ, ಅಪ್ರತಿಮ ದೇಶಭಕ್ತರ ಸಮಾಧಿಗಳಿಗೆ ಭೇಟಿ ಕೊಟ್ಟಾಗ ಪತಿ-ಪತ್ನಿ ಇಬ್ಬರೂ ಭಾವಾವೇಶಕ್ಕೊಳಗಾಗಿ ಗಳಗಳನೇ ಅತ್ತುಬಿಡುತ್ತಾರೆ.
ಓದು ಮತ್ತು ಪ್ರವಾಸ ನಮ್ಮ ಜ್ಞಾನದ ಪರಿಧಿಯನ್ನು ವಿಸ್ತಾರಗೊಳಿಸುತ್ತವೆ ಎಂದು ಡಾಕ್ಟರ್ ಯಾವಾಗಲೂ ಹೇಳುತ್ತಿರುತ್ತಾರೆ. ಮಗನೆಂಬ ಪ್ರೀತಿಯನ್ನು ಒಂದೇ ಒಂದು ದಿನವೂ ತೋರಿಸದ ಪಾಲಕರನ್ನು ಕೂಡ ಕಾಶಿಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬರುತ್ತಾರೆ. 
ಮನೆಯಲ್ಲಿರುವಾಗ ಮನೆಯ ಕೆಲಸಗಳನ್ನು ಪ್ರೀತಿಯಿಂದ ಮಾಡಿಕೊಡುತ್ತಾ, ಹೆಂಡತಿ-ಮಕ್ಕಳ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಾ, “ಈ ಯಶವಂತ ಯಾರ್ಯಾರದೋ ಬಟ್ಟೆಗಳನ್ನು ಇಸ್ತ್ರಿ ಮಾಡಿದ್ದಾನೆ, ಹೆಂಡತಿ-ಮಕ್ಕಳ ಬಟ್ಟೆ ಇಸ್ತ್ರಿ ಮಾಡಿದರೆ ತಪ್ಪೇನು” ಎನ್ನುತ್ತ ಪ್ರೀತಿಯಿಂದ ಕೆಲಸ ಮಾಡುತ್ತಿರುತ್ತಾರೆ. ಹೆಂಡತಿಗೆ ಕೂಡ ” ಮಂಗಲ್ ನೀನು ಬೇರೆ ಬೇರೆ ಪ್ರಾಂತಗಳ ಖಾದ್ಯಪದಾರ್ಥಗಳನ್ನು ಮಾಡಲು ಕಲಿ.‌ ಅಂದರೆ ತಿನ್ನಲು ಖುಷಿಯಾಗುತ್ತದೆ. ಹೇಗೂ ಸಹಾಯಕ್ಕೆ ಇವನು ಇದ್ದೇ ಇದ್ದಾನಲ್ಲ!” ಎಂದು ಅವಳನ್ನೂ ಪ್ರೋತ್ಸಾಹಿಸುತ್ತಿರುತ್ತಾರೆ. ನುರಿತ ಈಜುಗಾರರಾದ ಡಾಕ್ಟರ್  ತನ್ನ ಹೆಂಡತಿ, ಮಕ್ಕಳಿಗೆ ಕೂಡ ಸ್ವತಃ ತಾವೇ ಈಜು ಕಲಿಸುತ್ತಾರೆ. 
ಈಗ ನೀವೇ ಹೇಳಿ, ಬೇಕಾದಷ್ಟು ಜನ ಬಡತನದಲ್ಲಿ ಕಲಿತು ಮುಂದೆ ಬರಬಹುದು. ಆದರೆ ಹಾಗೆ ಮುಂದೆಬಂದ ಮೇಲೆ ಯಾರ ಮೇಲೂ ದ್ವೇಷ, ಸಿಟ್ಟು, ಇಟ್ಟುಕೊಳ್ಳದೇ ಎಲ್ಲರಿಗೂ ಬರಿ ಪ್ರೀತಿಯನ್ನೇ ಹಂಚಿದ ಉದಾಹರಣೆ ಇದೆಯೇ? ಈ ಜೀವನವನ್ನು ಪ್ರತಿಕ್ಷಣವೂ ಆನಂದಮಯವಾಗಿ ಪರಿವರ್ತಿಸಬೇಕು ಎನ್ನುವ ವಿವೇಕ ನಮ್ಮಲ್ಲಿ ಎಷ್ಟು ಜನಕ್ಕಿದೆ? ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಹುಟ್ಟಿ ಬೆಳೆದರೂ ಒಳ್ಳೆಯ ಪುಸ್ತಕಗಳು, ಒಳ್ಳೆಯ ಮಿತ್ರರು, ಒಳ್ಳೆಯ ಸಂಗೀತ, ಪ್ರವಾಸ, ಬರಹ, ಮಾತುಕತೆ, ಅಂದರೆ ಎಲ್ಲ ಒಳ್ಳೆಯದನ್ನು ಆರಿಸಿ ಆರಿಸಿ ತನ್ನ ಮತ್ತು ತನ್ನ ಸುತ್ತಲಿನವರ ಜೀವನವನ್ನು ಪ್ರೀತಿ-ಪ್ರೇಮಗಳಿಂದಲೇ ತುಂಬಿ ಕೊಡುವ ತಾಕತ್ತು ಎಷ್ಟು ಜನಕ್ಕಿದೆ? ಹಾಗಾಗಿ ನನಗೆ ಡಾಕ್ಟರ್ ಜೀವನವೇ ಒಂದು ಬಹು ದೊಡ್ಡ ಮಾನವೀಯತೆಯ ಸಂದೇಶ ಎನಿಸಿತು. ಇಂಥ ದಿವ್ಯ ಚೇತನವನ್ನು ಉಳಿಸಿಕೊಳ್ಳುವ ಅದೃಷ್ಟವನ್ನು ಅವರ ಹೆಂಡತಿ-ಮಕ್ಕಳಷ್ಟೇ ಅಲ್ಲ, ನಾವು ಭಾರತೀಯರ್ಯಾರೂ ಪಡೆದು ಬಂದಿರಲಿಲ್ಲ.
ಅಕ್ಟೋಬರ್ ೨ ,೧೯೯೧ ರಂದು ಕೆಲಸದಿಂದ ಮರಳಿ ಬರುತ್ತಿದ್ದ ಡಾಕ್ಟರ್ ರ ಸ್ಕೂಟರಿಗೆ ಮಾರುತಿ ವ್ಯಾನೊಂದು ಡಿಕ್ಕಿ ಹೊಡೆದ ರಭಸಕ್ಕೆ ಡಾಕ್ಟರ್ ರ  ಮೃದುಜೀವ ತಕ್ಷಣ ಹೊರಟುಹೋಯಿತು. ಕೇವಲ ೪೩ ವರ್ಷಗಳ ಬದುಕು ಕಂಡ ಜೀವ, ಕೇವಲ ಹನ್ನೊಂದು ವರ್ಷಗಳ ದಾಂಪತ್ಯದ ಸವಿಯುಂಡ ಜೀವ, ಎರಡು ಪುಟ್ಟ ಮಕ್ಕಳ ಪ್ರೀತಿಯ ತಂದೆ, ಎಲ್ಲೆಡೆಯೂ ಮಿತ್ರರನ್ನು ಸಂಪಾದಿಸಿದ ಗೆಳೆಯ, ಈಗಷ್ಟೇ ಬಡತನದ ಪರದೆ ನಿಧಾನವಾಗಿ ಹರಿದು ಪರವಾಗಿಲ್ಲ ಎನ್ನುವಷ್ಟು ಸುಖವನ್ನು ಕಾಣುತ್ತಿದ್ದ  ಮನುಷ್ಯ……. ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಜವರಾಯ ಒಂದು ಸುಂದರ ಅಧ್ಯಾಯವನ್ನು ಅರ್ಧದಲ್ಲಿಯೇ ನಿಲ್ಲಿಸಿಬಿಟ್ಟ. 
ಡಾಕ್ಟರ್ ರ ಅಗಲಿಕೆಯ ಆಘಾತವನ್ನು ಭರಿಸುವ ಶಕ್ತಿಯಿಲ್ಲದೇ ನಲುಗಿಹೋಗಿದ್ದ ಮಂಗಲಾಳ ಜೀವಕ್ಕೆ “ಅವರ ಜೀವನದ ಬಗ್ಗೆ ನೀನಾದರೂ ಬರೆಯಲೇಬೇಕು ಮತ್ತು ಅವರ ಅದಮ್ಯ ಚೈತನ್ಯದ ಬಗ್ಗೆ ಜನರಿಗೆ ತಿಳಿಸಲೇಬೇಕು” ಎಂದು ಡಾಕ್ಟರ್ ರ ಮಿತ್ರರು ಹುರಿದುಂಬಿಸಿ ಎಬ್ಬಿಸಿದ ಮೇಲೆ ಮಂಗಲಾ ಎನ್ನುವ, ಹಿಂದೆಂದೂ ಪ್ರೀತಿಯನ್ನೇ ಕಾಣದ, ಆದರೆ ಮದುವೆಯ ನಂತರ ಗಂಡನಲ್ಲಿ ಸ್ನೇಹಿತ, ತಂದೆ, ತಾಯಿ, ಅಣ್ಣ, ಎಲ್ಲರ ಪ್ರೀತಿಯನ್ನು ಕಂಡು, ಅದರಲ್ಲೇ ಮಿಂದೆದ್ದ ಕೇವಲ ಹನ್ನೊಂದು ವರ್ಷಗಳ‌ ಚಿಕ್ಕ ಅವಧಿಯಲ್ಲೇ ಇಡೀ ಜೀವನಕ್ಕಾಗುವ ಪ್ರೀತಿಯನ್ನು ಪಡೆದ ಸ್ತ್ರೀ,  ಮೊದಲ ಬಾರಿಗೆ ಬರೆಯಲು ತೊಡಗುತ್ತಾಳೆ. ತನ್ನ ಪತಿಯನ್ನು ತಾನು ಕಂಡ ಬಗೆಯನ್ನು ಸರಳವಾಗಿ ವರ್ಣಿಸುತ್ತಾಳೆ. (ಎಲ್ಲ ಕೆಲಸಗಳನ್ನೂ ಮಾಡಿದ ಡಾಕ್ಟರರ ಒಂದು ಆಸೆ ಮಾತ್ರ ಅಪೂರ್ಣವಾಗಿಯೇ ಉಳಿಯುತ್ತದೆ. ತಾನು ಕೇವಲ ತನ್ನ  ವೈಯಕ್ತಿಕ ಬದುಕನ್ನಷ್ಟೇ ನೇರವಾಗಿಸಿಕೊಂಡಿದ್ದೇನೆ, ಸಮಾಜಕ್ಕೆ ಇನ್ನಾದರೂ ಸೇವೆ ಮಾಡಬೇಕು ಎನ್ನುವ ಅವರ ಆಸೆ ಈಡೇರಲೇ ಇಲ್ಲ. ಅದನ್ನು ತನ್ನ ಮಿತಿಯಲ್ಲಿ ಅವರ ಹೆಂಡತಿ ಮಾಡುತ್ತಿದ್ದಾರೆ.) ಅದರ ಫಲವೇ ನಾನು ನಿಮಗೆ ತಿಳಿಸಿದ *ಕ್ಣಣ ಕ್ಷಣವೂ… ಬದುಕಬೇಕು* ಎನ್ನುವ ಈ ಆತ್ಮನಿರೂಪಣೆಯ ರೂಪದ ಪುಸ್ತಕ. ಇದನ್ನು ಎಲ್ಲರೂ ಓದಲೇಬೇಕು ಎನ್ನುವುದು ನನ್ನ ಪ್ರೀತಿಯ ಆಗ್ರಹ. ಏಕೆಂದರೆ ನಾವು ನಮ್ಮ ಜೀವನದಲ್ಲಿ ಎಷ್ಟು ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಇನ್ನೊಬ್ಬರಿಗೂ ಮಾದರಿಯಾಗಬಹುದೆಂಬುದನ್ನು ನಾವು ಈ ಪುಸ್ತಕದಿಂದ ಕಲಿಯಬಹುದು. ಆ ಲೆಕ್ಕಕ್ಕೆ ಇದೊಂದು ಸಾಮಾನ್ಯರ ಭಗವದ್ಗೀತೆ ಯೇ ಸರಿ.
(ಈ ಬರಹವನ್ನು ಇತರರೊಂದಿಗೆ ಶೇರ್ ಮಾಡಿ)

Related Articles

Back to top button