ಪ್ರಗತಿವಾಹಿನಿ ಸುದ್ದಿ, ಧಾರವಾಡ
ಧಾರವಾಡದ ಕುಮಾರೇಶ್ವರ ನಗರದಲ್ಲಿ ಕುಸಿದಿರುವ ಬಹುಮಹಡಿ ಕಟ್ಟಡದ ಅಡಿ ಸಿಲುಕಿರುವವರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ.
ಕೆಲವರು 50ಕ್ಕೂ ಹೆಚ್ಚು ಜನರು ಸಿಲುಕಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸುತ್ತಿದ್ದು, ಹಲವರು ಊಟಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿತ
5 ಮಹಡಿ ಕಟ್ಟಡ ಇದಾಗಿದ್ದು, ಕಟ್ಟಡ ಕಾಮಗಾರಿ ಪೂರ್ಣವಾಗುವ ಮುನ್ನವೇ ನೆಲಮಹಡಿ ಮತ್ತು ಮೊದಲ ಮಹಡಿ ಮಳಿಗೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ನೀಡಲಾಗಿದೆ. ಕಿರಾಣಿ ಅಂಗಡಿ, ಔಷಧಿ ಅಂಗಡಿ, ಹೊಟೆಲ್ ಮತ್ತಿತರ ಮಳಿಗೆಗಳಿವೆ. 50ಕ್ಕೂ ಹೆಚ್ಚು ಜನರು ಈ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದರು.
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾವನಿಗೆ ಸೇರಿದ ಕಟ್ಟಡ ಇದು ಎಂದು ಹೇಳಲಾಗುತ್ತಿದೆ. 4 ಜನ ಪಾಲುದಾರರಿದ್ದಾರೆ ಎಂದೂ ಹೇಳಲಾಗುತ್ತಿದೆ.
ಕಳಪೆ ಕಾಮಗಾರಿಯೇ ಕಟ್ಟಡ ಕುಸಿತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜೆಸಿಬಿ ಬಳಸಿ ಸ್ಥಳೀಯರು ಹಾಗೂ ಪೊಲೀಸರು ಕಟ್ಟಡ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿ 10ಕ್ಕೂ ಹೆಚ್ಚು ಅಂಬುಲೆನ್ಸಗಳಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಬೆಂಗಳೂರಿನಿಂದ ರಕ್ಷಣಾ ಕಾರ್ಯಕ್ಕೆ ವಿಶೇಷ ವಿಮಾನದಲ್ಲಿ ತಜ್ಞ ಸಿಬ್ಬಂದಿ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.