ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರು ಫೆ. ೨೨ರಿಂದ ಅಬುಧಾಬಿಯಲ್ಲಿ ನಡೆಯಲಿರುವ ೧೫ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದವರಾದ ಮಹಾದೇವ, ಸದ್ಯ ಧಾರವಾಡ ಉಪ್ಪಿನ ಬೆಟಗೇರಿ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಮೂಲಕ ಹತ್ತಾರು ಒಗಟು, ಚುಟುಕು, ಅಣಕು ಗೀತೆ ಹಾಗೂ ಜೋಕ್ಸ್ಗಳನ್ನು ಹೇಳಿ ರಾಜ್ಯ, ಹೊರ ರಾಜ್ಯ ಅಲ್ಲದೇ ಹೊರ ದೇಶಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಇದೀಗ ಅಬುಧಾಬಿ ಕರ್ನಾಟಕ ಸಂಘ ಹಾಗೂ ಮಂಗಳೂರಿನ ಹೃದಯವಾಹಿನಿ ಸಹಯೋಗದಲ್ಲಿ ಫೆ. ೨೨ ಹಾಗೂ ೨೩ ರಂದು ಅಲ್ಲಿನ ಇಂಡಿಯಾ ಸೋಶಿಯಲ್ ಅಂಡ ಕಲ್ಚರಲ್ ಸೆಂಟರ್ನಲ್ಲಿ ಆಯೋಜಿಸಿರುವ ಸಮ್ಮೇಳನದಲ್ಲಿ ಹಾಸ್ಯದ ಹೊನಲು ಹರಿಸಲು ಫೆ.೨೦ ರಂದು ವಿಮಾನದ ಮೂಲಕ ಹೊರಟಿದ್ದಾರೆ.
ಸತ್ತಿಗೇರಿ ಅವರು ಈಗಾಗಲೇ ಲಂಡನ್, ಆಸ್ಟ್ರೇಲಿಯಾ, ಇಂಡೋನೇಶಿಯಾ, ಕೀನ್ಯಾ, ಐರ್ಲಂಡ್, ದುಬೈ, ಶಾರ್ಜಾ ಸೇರಿದಂತೆ ೯ ದೇಶಗಳಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.