Karnataka News

ಇಲ್ಲಿಗೆ ಬಂದಾಗ ಮಗಳು ತವರು ಮನೆಗೆ ಬಂದ ಹಾಗೇ ಆಗುತ್ತದೆ – ಬೊಮ್ಮಾಯಿ

ಆದಿ ಬಣಜಿಗರ ಸಮುದಾಯ ಅಭಿವೃದ್ಧಿಯತ್ತ ಸಾಗಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಆದಿ ಬಣಜಿಗರ ಸಮುದಾಯ ಕಾಯಕ ನಿಷ್ಠ ಸಮುದಾಯ. ಈ ಸಮುದಾಯದ ಮಕ್ಕಳು ಶಿಕ್ಷಣ ಪಡೆದು ಬುದ್ದಿವತಂರಾಗಬೇಕು. ಆದಿ ಬಣಜಿಗರ  ಸಮುದಾಯವೂ ಅಭಿವೃದ್ಧಿಯತ್ತ ಸಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹುಬ್ಬಳ್ಳಿಯಲ್ಲಿ ಆದಿ ಬಣಜಿಗ ಸಮುದಾಯವನ್ನು  ಪ್ರವರ್ಗ 2ಡಿ ಗೆ  ಸೇರಿಸಿರುವುದಕ್ಕೆ ಸಮುದಾಯದ ವತಿಯಿಂದ ಅವರು ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು.

ಹುಬ್ಬಳ್ಳಿಗೆ ಬಂದಾಗ ಮಗಳು ತವರು ಮನೆಗೆ ಬಂದ ಹಾಗೇ ಆಗುತ್ತದೆ. ನಮ್ಮ ತಂದೆಯವರು ಈ ಊರಿನ ಜೊತೆಗಿನ ಸಂಬಂಧ, ಆತ್ಮೀಯತೆ ಎಲ್ಲವೂ ಚೆನ್ನಾಗಿತ್ತು, ಅದೆಲ್ಲವೂ ನನಗೆ ನೆನಪಾಗುತ್ತಿದೆ. ನಾನು ಇಂದು ಬಹಳ ಭಾವನಾತ್ಮಕವಾಗಿದ್ದೇನೆ. ಹಿಂದೆ ಸಾಮಾಜಿಕ ನ್ಯಾಯ ಅಂತ ಭಾಷಣ ಮಾಡುತ್ತ ಹಲವಾರು ಸಮುದಾಯಗಳನ್ನು ಮುಖ್ಯ ವಾಹಿನಿಯಿಂದ ದೂರ ಇಡಲಾಗಿತ್ತು. ಜನರನ್ನು ಒಬ್ಬ ನಾಗರಿಕರಾಗಿ ನೋಡದೆ, ಮತಬ್ಯಾಂಕ್ ಆಗಿ ನೋಡುತ್ತಿದ್ದರು. ಚುನಾವಣೆ ನಂತರ 5 ವರ್ಷ ದೂರ ಇಡುವ ಪ್ರವೃತ್ತಿ ಇತ್ತು. ಇಷ್ಟು ವರ್ಷ ಮೀಸಲಾತಿ ಸಿಗದೆ ಇರೋದು ದುರಂತ ಎಂದರು.

ಮೀಸಲಾತಿ ಹಂಚಿಕೆಗೆ ಕಾನೂನು ವಿಧಿ ವಿಧಾನಗಳಿದ್ದವು. 2016ರಲ್ಲಿ ಪ್ರಧಾನಮಂತ್ರಿ ಸರ್ವ ಸಮ್ಮತಿ ಅಧಿಕಾರವನ್ನ ನೀಡಿದರು. ಕಳೆದ 15-20 ವರ್ಷದಿಂದ ಅರ್ಜಿಗಳನ್ನು ನೀಡುತ್ತ ಬಂದಿದ್ದರು. ಆದರೆ ಆದರೆ ಯಾವುದೇ ಕ್ರಮ ಆಗಿರಲಿಲ್ಲ. ನಾನು ಬಂದ ಮೇಲೆ ಆಯೋಗಗಳನ್ನು ಸ್ಟಡಿ ಮಾಡಿ ರಿಪೋರ್ಟ್ ತರಿಸಲಾಗಿದೆ. ಅದರ ಅನ್ವಯ ಈಗ ಮೀಸಲಾತಿ ಹಂಚಿಕೆ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ನಿರ್ಣಯ ಸರ್ಕಾರದಲ್ಲಿ ಆಗಬೇಕಾದರೆ ಸಮಯ ಬೇಕು ಎಂದರು.

ಈ ಸಮುದಾಯದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರೆಸಿ. ಅವರು ನಮ್ಮಂತೆ ಬುದ್ಧಿವಂತರಿದ್ದಾರೆ. ನಮಗಿಂತ ಹೆಚ್ಚು ಹೆಣ್ಣು ಮಕ್ಕಳು ಪ್ರಾಮಾಣಿಕರಿದ್ದಾರೆ. ಸಂಸ್ಥೆಗಳು ಶಾಶ್ವತವಾಗಿರುತ್ತವೆ, ವ್ಯಕ್ತಿಗಳು ಇರಲ್ಲ. ಶಿಕ್ಷಣ ಸಂಸ್ಥೆ ಸೇರಿ ಬ್ಯಾಂಕಿಂಗ್ ಸಂಸ್ಥೆ ಕಟ್ಟುವ ಕೆಲಸ ಬಹಳ ದಿನಗಳ ಹಿಂದೆಯೇ ಆಗಬೇಕಿತ್ತು. ಆದರೆ ತಡವಾಗಿದೆ, ನನ್ನ ಕಾಲದಲ್ಲಿ ಆಗಿದೆ ಎಂದರು.

ಈ ಸಂದರ್ಭದಲ್ಲಿ  ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಶಶಿಕಲಾ ಜೋಲ್ಲೆ, ಶಾಸಕರಾದ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ಮತ್ತಿತರರು ಹಾಜರಿದ್ದರು.

https://pragati.taskdun.com/cm-basavaraj-bommaihublireservation/
https://pragati.taskdun.com/301-candidates-in-the-fray/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button