Latest

ಬೆಣ್ಣೆಯಷ್ಟು ಮೃದು, ವಜ್ರದಂತೆ ಕಠಿಣ

ಮಹಿಳಾ ದಿನಾಚರಣೆ ವಿಶೇಷ

ನೀತಾ ರಾವ್

ಅವತ್ತು ಆಕೆ ತನ್ನ ಕಷ್ಟದ ದುಡಿಮೆಯ ಮೂರು ಸಾವಿರ ರೂಪಾಯಿಗಳನ್ನು ಅಪರೂಪಕ್ಕೆಂಬಂತೆ ಮನೆಯಲ್ಲಿಯೇ ಇಟ್ಟುಬಿಟ್ಟಿದ್ದಳು. ತಾನು ಹಿಡಿದ ಅಷ್ಟೂ ಮನೆಗಳ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗಿ ನೋಡಿದರೆ ಆ ಮೂರು ಸಾವಿರ ರೂಪಾಯಿಯೂ ಇಲ್ಲ, ಗಂಡನೂ ನಾಪತ್ತೆ. ಅವಳ ದುಡ್ಡನ್ನು ಹಾಗೆ ತೆಗೆದುಕೊಂಡು ಹೋದವನು ಎರಡು ದಿನಗಳಾದರೂ ಪತ್ತೆಯಿಲ್ಲ. ಮುದುಡಿದ ಮುಖದಿಂದಲೇ ಈ ಸುದ್ದಿಯನ್ನು ನನಗೆ ತಿಳಿಸಿದ ನನ್ನ ಮನೆಗೆಲಸದವಳಿಗೆ ಹೇಗೆ ಸಮಾಧಾನ ಹೇಳಬೇಕೋ ನನಗೆ ತಿಳಿಯಲಿಲ್ಲ. ಆದರೆ ಮರುದಿನವೂ ಮತ್ತೆ ತನ್ನ ಟೈಮಿಗೆ ಸರಿಯಾಗಿ ಹಾಜರಾದವಳ ಕರ್ತವ್ಯಪ್ರಜ್ಞೆಯನ್ನು ನೋಡಿ ನನಗಂತೂ ವಿಪರೀತ ಅಚ್ಚರಿ. ಇಂಥ ವಿಷಮ ಪರಿಸ್ಥಿತಿಯಲ್ಲೂ ತನ್ನ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ನಮ್ಮ ಮನೆಗಳ ಕೆಲಸಕ್ಕೆ ತಪ್ಪದೇ ಹಾಜರಾದವಳನ್ನು “ಇವತ್ತೊಂದು ದಿನ ಬರದೇ ಇದ್ದಿದ್ದರೆ ನಡೆಯುತ್ತಿತ್ತಲ್ಲ” ಎಂದರೆ ಅವಳು, “ಮನೆಯಲ್ಲಿ ಕುಳಿತಾದರೂ ಮಾಡುವುದೇನಿದೆ ಬಿಡಿ, ಪೋಲಿಸ್ ಕಂಪ್ಲೆಂಟ ಕೊಟ್ಟಾಗಿದೆ. ಅದಕ್ಕೂ ಹೆಚ್ಚಾಗಿ ಕೈಯಲ್ಲಿನ ದುಡ್ಡು ಮುಗಿಯುವ ತನಕ ಕುಡಿಯುತ್ತಾನೆ, ಆಮೇಲೆ ಬರಬಹುದು” ಎಂದಳು. ಹಾಗಂತ ಅವಳಾಗಲಿ ಅವಳ ಹೆಣ್ಣುಮಕ್ಕಳಾಗಲಿ ತಮ್ಮ ಪ್ರಯತ್ನವನ್ನೇನು ಬಿಟ್ಟಿರಲಿಲ್ಲ. ತಮ್ಮ ನೆಂಟರೆಲ್ಲರ ಮನೆಗಳಿಗೆ ಫೋನು ಮಾಡಿದ್ದರು, ಕೆಲವು ಕಡೆ ತಾವೇ ಹೋಗಿಬಂದಿದ್ದರು. ಬಾಯಿ ಬಿಟ್ಟು ಹೇಳದಿದ್ದರೂ ಅವಳ ಮ್ಲಾನವದನವೇ ಅವಳ ಮನಸ್ಸಿನ ದುಗುಡವನ್ನು ಹೇಳುತ್ತಿತ್ತು. “ದಿನಾಲೂ ಮನೆಯಲ್ಲಿ ಸುಮ್ಮನಿದ್ದು ಅಷ್ಟೋ ಇಷ್ಟೋ ಕುಡಿದು ಸುಮ್ಮನಿದ್ದರೆ ಸಾಕು, ಮಕ್ಕಳು ತುಂಬ ಬೇಸರಪಟ್ಟುಕೊಂಡಿದ್ದಾರೆ” ಎಂದು ಹೇಳುವಷ್ಟರಲ್ಲಿ ಅವಳ ಗಂಟಲು ಕಟ್ಟಿತ್ತು. ಕೊನೆಗೆ ಅವಳ ಗಂಡ ದುಡ್ಡನ್ನೆಲ್ಲ ಮುಗಿಸಿಕೊಂಡೇ ಬಂದಾಯಿತು,  ಅವರ ಜೀವನ ಎಂದಿನಂತೆ ಮತ್ತೆ ತನ್ನ ಹಳಿಯ ಮೇಲೆ ಹೊರಟಿತು.

ಇವಳಿಗಿಂತಲೂ ಮೊದಲೊಮ್ಮೆ ನನ್ನ ಮನೆಯಲ್ಲಿ ಇನ್ನೊಬ್ಬ ಕೆಲಸದವಳಿದ್ದಳು. ತುಂಬ ಪಾಪದವಳು.   ಅವಳ ಗಂಡ ಏನೇ ಆದರೂ ಮನೆಯಲ್ಲಿ ಗ್ಯಾಸ್  ಸಿಲಿಂಡರ್‍  ಇಟ್ಟುಕೊಳ್ಳಲು ಕೊಡುವುದಿಲ್ಲ ಎಂದು ಹಟ ಹಿಡಿದು ಕುಳಿತುಬಿಟ್ಟಿದ್ದ. ಇವಳಿಗೆ ಬತ್ತಿ ಸ್ಟೋವ್  ಮೇಲೆ ಮನೆಯ ಎಲ್ಲ ಅಡುಗೆ ಮಾಡಿ ಇತರರ ಮನೆಗಳಿಗೆ ಕೆಲಸಕ್ಕೆ ಬರುವುದೆಂದರೆ  ಸಾಕಾಗುತ್ತಿತ್ತು. ಅವಳ ಬಹಳಷ್ಟು ಸಮಯ ಮನೆಯ ಅಡುಗೆಗೇ ಹೋಗುತ್ತಿತ್ತು. ಆದರೆ ಅನುಕೂಲ ಮಾಡಿಕೊಳ್ಳಬೇಕೆಂದರೆ ಗಂಡ ಬಿಡುತ್ತಿಲ್ಲ. ಅದನ್ನು ಹೇಳಿ ಹೇಳಿ ದಿನಾಲೂ ಅವಳು ನಮ್ಮೆಲ್ಲರ ಮುಂದೆ ಹಲಬುವಳು. ಇಂಥ ಕೆಲವು ವಿಷಯಗಳಲ್ಲಿ ನಾವಾದರೂ ಮೂಗು ತೂರಿಸುವುದು ಬಹಳ ಕಷ್ಟ. ಅವರವರ ದುಃಖಗಳನ್ನು ಅವರೇ ಸಹಿಸಬೇಕು, ಅವಶ್ಯಕತೆ ಬಿದ್ದಾಗ ಎದ್ದು ನಿಂತು ವಿರೋಧಿಸಬೇಕು. ಅದಕ್ಕೆ ಧೈರ್ಯವನ್ನಷ್ಟೇ ತುಂಬುವ ಕೆಲಸವನ್ನು ನಾವೆಲ್ಲ ಮನೆಯವರು ಆವಾಗೀವಾಗೊಮ್ಮೆ ಮಾಡುತ್ತಿದ್ದೆವು. ಕೊನೆಗೆ ಅವಳ ಹದಿನೇಳು ವರ್ಷದ ಮಗ ತಂದೆಯ ವಿರುದ್ಧ ತಿರುಗಿಬಿದ್ದ. ನಿನಗೆ ಬೇಡವಾದರೆ ನೀನು ಮನೆಯಿಂದ ಹೊರಗೆ ನಡಿ, ಅವಳು ಮಾತ್ರ ಇನ್ನು ಮೇಲೆ ಗ್ಯಾಸ್ ಒಲೆಯ ಮೇಲೆಯೇ ಅಡುಗೆ ಮಾಡುವುದು ಎಂದು ದಬಾಯಿಸಿದ ಮೇಲೆ ಅಪ್ಪ ಥಣ್ಣಗಾದ.

Home add -Advt

ಇಂಥ ಬಹುತೇಕ ಸ್ತ್ರೀಯರ ಒಂದು ದೊಡ್ಡ ನೋವೆಂದರೆ ಅವರ ಗಂಡಂದಿರೇ! ತಾವು ಸರಿಯಾಗಿ ದುಡಿದು ಮನೆಯನ್ನು ಆರ್ಥಿಕವಾಗಿ ಸಧೃಡ ಮಾಡುವುದಂತೂ ದೂರ ಉಳಿಯಿತು. ಇವರನ್ನು ಕಟ್ಟಿಕೊಂಡ ತಪ್ಪಿಗೆ ತಾವೇ ಒಂದೇ ಸಮನೆ ದುಡಿದು, ಒಂಟಿಯಾಗಿ ಸಂಸಾರದ ನೊಗ ಹೊತ್ತು ಮುಂದೆ ಸಾಗಿರುವ ಅವರಿಗೆ ಇನ್ನೂ ಇನ್ನೂ ಕಷ್ಟ ನೀಡಿ, ಅವರು ದುಡಿದು ತಂದು ಮಕ್ಕಳ ಶಾಲೆಯ ಫೀ ಕಟ್ಟಲೆಂದು ಇಟ್ಟ ದುಡ್ಡನ್ನೇ ಎಗರಿಸುವ ಭಂಡ ಗಂಡಸರನ್ನೂ ಕ್ಷಮಿಸಿ ಮತ್ತೆ ಉಡಿಯಲ್ಲಿ ಹಾಕಿಕೊಂಡು ನಡೆಯುವ ಅನೇಕಾನೇಕ ಹೆಣ್ಣುಮಕ್ಕಳ ಧೈರ್ಯ, ಆತ್ಮಗೌರವಕ್ಕೊಂದು ದೊಡ್ಡ ನಮಸ್ಕಾರ.

ಈ ಜೀವನದ ಜೋಳಿಗೆಯಲ್ಲಿ ಇಂಥ ಅನೇಕ ಉದಾಹರಣೆಗಳು ತುಂಬಿಹೋಗಿವೆ. ಇಷ್ಟು ವರ್ಷಗಳಲ್ಲಿ ಸಾಕಷ್ಟು ಹೆಣ್ಣುಮಕ್ಕಳು ತಮ್ಮ  ಅಂತರಂಗದ ನೋವನ್ನು ಇನ್ನು ಸಾಧ್ಯವೇ ಇಲ್ಲ ಎನ್ನುವಾಗ ನನ್ನೆದುರು ತೋಡಿಕೊಂಡಿದ್ದಾರೆ.  ಅವರಿಗೆಲ್ಲ ಯಾವುದೇ ಪರಿಹಾರವನ್ನು ಕೊಡುವುದು ನನ್ನಿಂದ ಸಾಧ್ಯವಾಗಿಲ್ಲ. ಅವರಿಗೂ ಅದು ಬೇಕಿಲ್ಲ. ಬೇಕಿರುವುದು ಆ ಆತಂಕ, ಕಷ್ಟದ ಸಮಯಕ್ಕೊಂದು ಸುಮ್ಮನೇ ಕೇಳಿಸಿಕೊಳ್ಳುವ ಒಂದು ಕಿವಿ, ಮತ್ತೆ ಒಂದು ಸಣ್ಣ ಸಾಂತ್ವನ. ಒಮ್ಮೆ ದುಃಖವನ್ನು ತೋಡಿಕೊಂಡು ನಿರಾಳವಾದ ಅವರ ಮನಸ್ಸು ಮತ್ತೆ ಚಿಗುರುತ್ತದೆ. ಮತ್ತೆ ಮೊದಲಿನಂತೇ ಮನೆಗೆಲಸಗಳನ್ನು ಮಾಡಲು ಒಂದಾದ ಮೇಲೊಂದರಂತೆ ಎಲ್ಲರ ಮನೆಗಳ ಫಿರ್ತಿ ಶುರುವಾಗುತ್ತದೆ. ಇವರೆಲ್ಲರಿಗೆ ದೇವರು ಅದೆಂಥ ಅದಮ್ಯ ಚೈತನ್ಯವನ್ನು ಕೊಟ್ಟಿರಬಹುದೆಂದು ನನಗೆ ಆಶ್ಚರ್ಯವಾಗುತ್ತದೆ. ಚಿವುಟಿದಷ್ಟೂ ಚಿಗುರೊಡೆಯುವ ಹೂಬಳ್ಳಿಗಳಂತೆ ಅವರು ಕಷ್ಟ, ನಷ್ಟಗಳನ್ನನುಭವಿಸಿಯೂ ಚಿಗುರೊಡೆಯುತ್ತಲೇ ಇರುತ್ತಾರೆ.

ನಮ್ಮೆಲ್ಲರ ಆರ್ಥಿಕ ಸ್ಥಿತಿಗಳು ಬೇರೆ ಬೇರೆ ಇರಬಹುದು, ಸಾಮಾಜಿಕ ಸ್ಥರಗಳೂ ಬೇರೆ ಇರಬಹುದು. ಆದರೆ ನಮ್ಮೆಲ್ಲರ ಮನಸ್ಸುಗಳು ಒಂದೇ ಆಗಿವೆ. ಕೆಲ ಮಹಿಳೆಯರು ತಮ್ಮ ದುಃಖವನ್ನು ಹಂಚಿಕೊಂಡು ನಿರುಮ್ಮಳರಾಗುತ್ತಾರೆ. ಕೆಲವರು ಒಳಗೊಳಗೇ ಇಟ್ಟುಕೊಂಡು ಕೊರಗುತ್ತಾರೆ. ಮನೆಗೆಲಸದವಳ ಕಷ್ಟಕ್ಕೆ ನಾನು ಸಹಾನುಭೂತಿ ತೋರಿಸಿರುತ್ತೇನೆ. ಇನ್ನೊಮ್ಮೆ ನಮ್ಮ ಮನೆಯ ಮೌನ ನೋಡಿ ಅವಳು “ಇವೆಲ್ಲ ಇದ್ದದ್ದೇ ಬಿಡಿ, ನೀವು ಹೆಚ್ಚು ಕಾಳಜಿ ಮಾಡಬೇಡಿ” ಎಂದು ಹೇಳುವ ಹತ್ತಿರದ ಬಂಧುವಾಗಿಬಿಡುತ್ತಾಳೆ. ಇವರೆಲ್ಲ ಮಹಾನದಿಯಂಥವರು. ದೊಡ್ಡ ಪಾತ್ರವಾಗಿ ಹರಿದು, ಹರಿದ ನಾಡನ್ನೆಲ್ಲ ಹಸಿರು ಮಾಡುತ್ತಾರೆ. ಇನ್ನೊಮ್ಮೆ ಧುಮ್ಮಿಕ್ಕುವ ಜಲಪಾತವಾಗಿ ರುದ್ರರಮಣೀಯವಾಗಿ ಕಂಗೊಳಿಸುತ್ತಾರೆ. ಅಲ್ಲಲ್ಲಿ ಶಾಂತವಾಗಿ ಹರಿವ ತಿಳಿನೀರಿನ ಒರತೆಯಾಗಿ ನಿಮ್ಮ ಪ್ರತಿಬಿಂಬವನ್ನೇ ತೋರುವ ಕನ್ನಡಿಯಾಗುತ್ತಾರೆ. ಒಡಲಲ್ಲಿ ಧಗಧಗಿಸುವ ಬಡಬಾಗ್ನಿಯನ್ನಿಟ್ಟುಕೊಂಡೂ ಮೇಲೆ ಶಾಂತವಾಗಿ ಹರಿವ ತೊರೆಯಾಗುತ್ತಾರೆ. ಒಮ್ಮೊಮ್ಮೆ ಲುಪ್ತವಾಗಿ ಬಿಡುತ್ತಾರೆ. ತಮ್ಮ ಮನೆಯವರೊಡನೆ ಅವರ ಬೇಡಿಕೆಗಳಾದರೂ ಏನು, ಎಷ್ಟು? ಎಲ್ಲರಿಗೂ ತಂಪೆರೆಯುವ ಅವರ ಬತ್ತದ ಚಿಲುಮೆಗೆ ನಿಮ್ಮ ಪ್ರೀತಿಯ ಒಂದೆರಡು ಹನಿಗಳು. ತಾವು ಮಹಾನದಿಯಾಗಿ ಹರಿದವರು ನಿಮ್ಮ ಪ್ರೀತಿಗಾಗಿ ಬಾಯಾರಿ, ಬಾಯ್ದೆರೆದು ಕಾದಿರುವ ನಿಮ್ಮವಳೇ ಆದ ಅವಳಿಗೆ ನೀವು ಏನು ತಾನೇ ಕೊಡಬಲ್ಲಿರಿ? ಒಂದು ಚಿಕ್ಕ ನಗೆ, ಒಂದು ಪ್ರೀತಿಯ ಮಾತು, ಒಂದು ಪ್ರಶಂಸೆಯ ನೋಟ. ಇಷ್ಟಕ್ಕಾಗಿ ಅವಳು ತನ್ನ ಸರ್ವಸ್ವವನ್ನೇ ನೀಡಲು ತಯಾರಿರುತ್ತಾಳೆ. ಬೇಶರತ್ತಾಗಿ ನೀಡಿಯೂ ಇರುತ್ತಾಳೆ. ಅವಳ ತುಟಿಯಿಂದ ಬಾರದ ಮನದ ಪಿಸುಮಾತುಗಳನ್ನು ತಿಳಿದುಕೊಳ್ಳುವ ಸಹೃದಯತೆಯನ್ನು ನೀವು ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಿಮಗೆ ಬರೀ ತಪ್ಪುಗಳೇ ಕಂಡುಬರುತ್ತವೆ. ಬರುಬರುತ್ತ ಹಳೆಯ ಹೆಂಡತಿ ಸುಖಾಸುಮ್ಮನೇ ಬೇಸರ ಹುಟ್ಟಿಸುತ್ತಿದ್ದಾಳೆ ಎನಿಸುತ್ತದೆ. ನೀವವಳನ್ನು “ಟೇಕನ್ ಫಾರ್‍ ಗ್ರಾಂಟೆಡ್” ಮಾಡಿಬಿಡುತ್ತೀರಿ. ಸಮಯ ಸರಿದದ್ದು ಗೊತ್ತಾಗುವುದೇ ಇಲ್ಲ. ಬೆಣ್ಣೆಯಂತೆ ಮೃದುವಾಗಿದ್ದವಳಿಗೆ ವಜ್ರದಂತೆ ಕಠಿಣವಾಗಲೂ ಗೊತ್ತಿರುತ್ತದೆ. ಅಸಡ್ಡೆ ಮಿತಿಮೀರಿದರೆ ಬೆಣ್ಣೆಯು ವಜ್ರವಾಗಲು ಬಹಳ ಸಮಯ ಹಿಡಿಯುವುದಿಲ್ಲ. ಆದರೆ ಅಂಥ ವಿಪತ್ತು ಬರುವುದಕ್ಕಿಂತ ಮುಂಚಿತವಾಗಿ ಅನೇಕ ಸಲ ನಿಮ್ಮ ಹೃದಯದ ಗಂಟೆಯನ್ನು ಅವಳು ಜೋರಾಗಿ ಬಾರಿಸಿರುತ್ತಾಳೆ, ಎಚ್ಚರಿಕೆಯನ್ನು ನೀಡಿರುತ್ತಾಳೆ. ನೀವು ಅದನ್ನು ಅಲಕ್ಷಿಸಿರುತ್ತೀರಿ. ಇನ್ನೂ ತಡವಾಗಿಲ್ಲ, ತಿದ್ದಿಕೊಳ್ಳಲು ಸಮಯ ಇದೆ. ಅವಳು ಕ್ಷಮಯಾ ಧರಿತ್ರಿ, ಕ್ಷಮಿಸುತ್ತಾಳೆ, ಮನ್ನಿಸುತ್ತಾಳೆ, ಮತ್ತೆ ಅದೇ ಥೇಟ ಹಳೆಯ ಧಾಟಿಯಲ್ಲೇ ಅಮ್ಮನಂತೆ ರಮಿಸುತ್ತಾಳೆ. ಒಮ್ಮೆ ಮೃದುವಾಗಿ ನೋಡಿ. ವಜ್ರವು ಮತ್ತೊಮ್ಮೆ ಬೆಣ್ಣೆಯಾಗುವುದು ಖಚಿತ.

ನಿಮ್ಮ ತಾಯಿಯಾಗಿ, ನಿಮ್ಮ ಹೆಂಡತಿಯಾಗಿ, ನಿಮ್ಮ ಗೆಳತಿಯಾಗಿ, ನಿಮ್ಮ ಮಗಳಾಗಿ, ಸೊಸೆಯಾಗಿ, ನಾನಾ ರೂಪಗಳಲ್ಲಿ ನಿಮ್ಮ ಕಣ್ಣ ಮುಂದೆಯೇ ಇರುವ ನಾರಿಶಕ್ತಿಯ ಪರಿಚಯವನ್ನು ಸರಿಯಾಗಿ ಗುರುತಿಸಿ. ಅವಳಿಲ್ಲದ ನಿಮ್ಮ ಮನೆ, ಮನ ಎಷ್ಟೊಂದು ಖಾಲಿ ಖಾಲಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಈ ವಿಶ್ವ ಮಹಿಳಾ ದಿನದಂದು ಅವಳಿಗೊಂದು ಪುಟ್ಟ ಉಡುಗೊರೆ ನೀಡಿ, ನಾನು ನಿನ್ನನ್ನು ಪ್ರೀತಿಸುತ್ತೇನೆ, ನಿನ್ನ ಕಾಳಜಿ ಮಾಡುತ್ತೇನೆ ಎನ್ನುವ ಸಂದೇಶವನ್ನು ಆ ಮೂಲಕ ಸಾರಿಬಿಡಿ. ಈ ದಿನಾಚರಣೆಗಳ ಬಗ್ಗೆ ಕೆಲವರಿಗೆ ತಕರಾರು ಇರಬಹುದು. ಎಲ್ಲಾ ದಿನಗಳೂ ಮಹಿಳೆಯರ ದಿನಗಳೇ ಎಂದು ನಕ್ಕುಬಿಡಬಹುದು. ಆದರೆ ಹಾಗಂತ ದಿನಾಲೂ ಯಾರೂ ಉಡುಗೊರೆ ಕೊಡುವುದಿಲ್ಲ, ದಿನಾಲೂ ಯಾರೂ ಟ್ರೀಟ ಕೊಡಿಸುವುದಿಲ್ಲ. ಪ್ರೀತಿ ದಿನಾಲೂ ಮನದಲ್ಲಿರಲಿ, ಆದರೆ ಕೆಲ ವಿಶೇಷ ಸಂದರ್ಭಗಳಲ್ಲಿ ವ್ಯಕ್ತವಾಗಿ ಕಾಣಿಸಿಕೊಳ್ಳಲಿ. ನೆನಪಿರಲಿ  ಉಡುಗೊರೆಯಲ್ಲೊಂದು ಸಂದೇಶವಿರುತ್ತದೆ, “ನಾನು ನಿನ್ನನ್ನು ಮುಖ್ಯವೆಂದು ಪರಿಗಣಿಸುತ್ತೇನೆ,  ಅದಕ್ಕಾಗಿಯೇ ಈ ಉಡುಗೊರೆ”.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ)

 

Related Articles

Back to top button