*23.19 ಲಕ್ಷ ಜನರು ಅನರ್ಹರು: ಪಿಂಚಣಿ ಪಟ್ಟಿಯಿಂದ ತೆಗೆದುಹಾಕಲು ಮುಂದಾದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಅರ್ಹರಲ್ಲದವರು, ಕಡಿಮೆ ವಯಸ್ಸಿನವರು, ಶ್ರೀಮಂತರು, ತೆರಿಗೆ ಪಾವತಿದಾರರು, ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಈ ಹಿನ್ನೆಲೆ, ಪಿಂಚಣಿ ಪಡೆಯುತ್ತಿದ್ದ 23.19 ಲಕ್ಷ ಜನರನ್ನು ಅನರ್ಹರು ಎಂದು ಗುರುತಿಸಿದೆ.
ಪಿಂಚಣಿ ಪಡೆಯುತ್ತಿದ್ದ 23.19 ಲಕ್ಷ ಜನರನ್ನು ಅನರ್ಹರು ಎಂದು ಗುರುತಿಸಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಂಡಿದ್ದು, ಅವರನ್ನು ಪಿಂಚಣಿ ಪಟ್ಟಿಗಳಿಂದ ತೆಗೆದುಹಾಕಲು ಮುಂದಾಗಿದೆ.
ಸಾಂತ್ವನಕಾರಿ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ ಮತ್ತು ವೃದ್ಧಾಪ್ಯ ವೇತನ ಯೋಜನೆಗಳ ಮೂಲಕ ರಾಜ್ಯವು ಹಿರಿಯ ನಾಗರಿಕರಿಗೆ ಮಾಸಾಶನ ನೀಡುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಅಥವಾ ಮೇಲ್ಪಟ್ಟ ವಯೋಮಾನದವರಿಗೆ ತಿಂಗಳಿಗೆ ₹1,000 ವೃದ್ದಾಪ್ಯ ವೇತನ ಯೋಜನೆಯಡಿ 60 ವರ್ಷ ಅಥವಾ ಮೇಲ್ಪಟ್ಟವರಿಗೆ ₹800 ಮಾಸಾಶನ ನೀಡಲಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ವೃದ್ದಾಪ್ಯ ವೇತನ ಯೋಜನೆಯಲ್ಲಿ 21.87 ಲಕ್ಷ ಫಲಾನುಭವಿಗಳು ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ 31.33 ಲಕ್ಷ ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಆದರೆ, ಅಧಿಕೃತ ದತ್ತಾಂಶಗಳೊಂದಿಗೆ ಫಲಾನುಭವಿಗಳ ಮಾಹಿತಿ ಹೋಲಿಕೆ ಮಾಡಿದಾಗ, ನಿಜಕ್ಕೂ ಅರ್ಹರಿಗಿಂತ ಹೆಚ್ಚು ಜನರು ಈ ಯೋಜನೆಗಳ ಪ್ರಯೋಜನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಸರ್ಕಾರವು ಕುಟುಂಬದ ದತ್ತಾಂಶ, ಆದಾಯ ತೆರಿಗೆ ಪಾವತಿದಾರರ ವಿವರಗಳು, ಎಪಿಎಲ್ ಕಾರ್ಡ್ ಹಾಗೂ ನಿವೃತ್ತ ಅರೆ ಸರ್ಕಾರಿ ನೌಕರರ ಮಾಹಿತಿ ಹೋಲಿಕೆ ಮಾಡಿದೆ. ಇದರಿಂದಾಗಿ ವೃದ್ಧಾಪ್ಯ ವೇತನ ಯೋಜನೆಯಡಿಯಲ್ಲಿ ಸುಮಾರು 9.04 ಲಕ್ಷ ಅನರ್ಹರು ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ 14.15 ಲಕ್ಷ ಅನರ್ಹರು ಪತ್ತೆಯಾಗಿದ್ದಾರೆ.