Kannada NewsKarnataka NewsLatest

*ಸ್ವಾತಂತ್ರ್ಯೋತ್ತರ ಭಾರತದ ಸಾಧನೆ ತರೆದಿಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಉಡುಪಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮೀ ಯೋಜನೆಗೆ ರಾಜ್ಯದಲ್ಲಿ ಈತನಕ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದು, 1.14 ಕೋಟಿ ಫಲಾನುಭವಿಗಳ ಖಾತೆಗೆ ತಲಾ 2 ಸಾವಿರ ರೂ.ಗಳನ್ನು ವರ್ಗಾಯಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ತೊಡುಕನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಗೌರವ ರಕ್ಷೆ ಸ್ವೀಕರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಾಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವೇದಿಕೆ ಮೇಲಿರುವ ಎಲ್ಲಾ ಗಣ್ಯರೆ, ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳೇ, ಅಧಿಕಾರಿಗಳೇ, ನಾಗರಿಕ ಬಂಧುಗಳೇ, ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರಿಗೆ, ನನ್ನ ನೆಚ್ಚಿನ ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಸ್ನೇಹಿತರಿಗೆ 75 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದರು.

ಸಚಿವರ ಭಾಷಣದ ವಿವರ:

1950 ಜನವರಿ 26 ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಅಂದು ಸ್ವತಂತ್ರ ಭಾರತಕ್ಕೆ ತನ್ನದೇ ಆದ ಒಂದು ಸಂವಿಧಾನವನ್ನು ಅನುಷ್ಠಾನಕ್ಕೆ ತಂದ ದಿನ.
ಆಗಸ್ಟ್ 15, 1947 ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ 29 ರಂದು ಡಾ. ಬಿ.ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ನೇಮಕ ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ 4, 1947 ರಂದು ಶಾಸನ ಸಭೆಯಲ್ಲಿ ಮಂಡಿಸಿತು. ನವೆಂಬರ್ 24, 1949 ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26, 1950 ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ 26, 1929 ರಂದು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊಂಡಿತು. ಲಾಹೋರ್‌ನಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡ ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಯಿತು. ಈ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರದ ಭಾರತದ ಸಂವಿಧಾನವನ್ನು ಈ ದಿನದಂದು ಜಾರಿಗೆ ತರಲಾಯಿತು.
ಡಾ. ಬಿ.ಆರ್ ಅಂಬೇಡ್ಕರ್‌ರವರು ತಮ್ಮ ಅನುಭವ ಜ್ಞಾನ, ಅಧ್ಯಯನ, ದೂರದೃಷ್ಟಿಯ ಒಳನೋಟಗಳಿಂದ ಸಮಾಜದ ಎಲ್ಲಾ ಶೋಷಿತ ಜನ ಸಮುದಾಯದ ಏಳಿಗೆಗೆ, ಸಹಬಾಳ್ವೆಗೆ, ಮುಖ್ಯ ವಾಹಿನಿಗೆ ಬಂದು ಎಲ್ಲರಂತೆ ಬದುಕುವ ಅವಕಾಶಗಳನ್ನು ಕಲ್ಪಿಸುವ ಶ್ರೇಷ್ಠ ಸಂವಿಧಾನವನ್ನು ರಚಿಸಿದ್ದಾರೆ. ಆ ಮೂಲಕ ಮಾನವತೆಯ ಉಳಿವು, ಏಳಿಗೆ ಹಾಗೂ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ.
ನಮ್ಮ ಸಂವಿಧಾನವು ನಮಗೆ ಮುಕ್ತ, ಪ್ರಜಾಪ್ರಭುತ್ವ, ರಾಷ್ಟ್ರದ ನಾಗರಿಕ ಹಕ್ಕುಗಳನ್ನು ನೀಡಿದೆ. ಆದರೆ, ನಮ್ಮ ಪ್ರಜಾಪ್ರಭುತ್ವದ ಕೇಂದ್ರ ತತ್ವಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವವನ್ನು ಯಾವಾಗಲೂ ಅನುಸರಿಸುವ ಜವಾಬ್ದಾರಿಯನ್ನು ನಮ್ಮ ಮೇಲೆ ಇರಿಸಿದೆ.
ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಮೌಲ್ಯಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡರೆ ಈ ಸಾಂವಿಧಾನಿಕ ಆದರ್ಶಗಳನ್ನು ಅನುಸರಿಸಲು ನಮಗೆ ಸುಲಭವಾಗುತ್ತದೆ.
ಇಂದು ನಾವು ಉತ್ಸಾಹದಿಂದ ಆಚರಿಸುತ್ತಿರುವ ಗಣರಾಜ್ಯೋತ್ಸವದ ರಾಷ್ಟ್ರೀಯ ಹಬ್ಬ, ರಾಷ್ಟ್ರಧ್ವಜದ ಮೇಲಿನ ನಮ್ಮ ಗೌರವವನ್ನು ಮತ್ತು ಸಂವಿಧಾನದ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸುತ್ತದೆ.
ಕಳೆದ ಏಳುವರೆ ದಶಕಗಳಲ್ಲಿ ನಾವು ಹೆಮ್ಮೆ ಪಡಬಹುದಾದ ಸಂಗತಿಗಳಾಗಿವೆ. ನಮ್ಮ ದೇಶದ ಆರ್ಥಿಕತೆಯು ವಿಶ್ವದ ನಾಲ್ಕನೆಯ ದೊಡ್ಡ ಆರ್ಥೀಕತೆಯಾಗಿದೆ. ಸಾಕ್ಷರತೆ ಪ್ರಮಾಣವು ನಾಲ್ಕು ಪಟ್ಟಿಗಿಂತ ಹೆಚ್ಚಾಗಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿ, ಆಹಾರ ಧಾನ್ಯದ ನಿವ್ವಳ ರಪ್ತುದಾರರಾಗಿದ್ದೇವೆ. ಬಡತನ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಸಾಧಿಸಲಾಗಿದೆ. ಶ್ವೇತ ಕ್ರಾಂತಿಯು ನಮ್ಮನ್ನು ವಿಶ್ವದ ಅತಿದೊಡ್ಡ ಹಾಲು ಉತ್ಪಾದಿಸುವ ರಾಷ್ಟ್ರವನ್ನಾಗಿ ಮಾಡಿದೆ. ನಾವು ವಿಶ್ವದಲ್ಲಿ ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದ್ದೇವೆ.
ನಮ್ಮ ವಿಜ್ಞಾನಿಗಳ ಸಾಧನೆ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಈ ಬಗ್ಗೆ ಭಾರತ ಹೆಮ್ಮೆ ಪಡುತ್ತಿದೆ. ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಳಿಸಿ, ಅಧ್ಯಯನ ಪ್ರಾರಂಭಿಸಿದ್ದಾರೆ ಹಾಗೂ ಚಂದ್ರಯಾನ -೩ ಮಿಷನ್ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವುದರೊಂದಿಗೆ ಅದರ ಕಾರ್ಯವನ್ನು ಪ್ರಾರಂಭಿಸಿದೆ. ಈ ಕಾರ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗವನ್ನು ಪಡೆಯಲಿದೆ. ಬಾಹ್ಯಕಾಶ ಯಾನ ಕಾರ್ಯಕ್ರಮಗಳನ್ನು ರಾಷ್ಟ್ರವು ಉತ್ಸುಕತೆಯಿಂದ ಎದುರು ನೋಡುತ್ತಿದೆ.
ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ನಮ್ಮ ಗಡಿ ಕಾಯುವ ಹಾಗೂ ದೇಶಕ್ಕಾಗಿ ಯಾವುದೇ ತ್ಯಾಗಕ್ಕಾಗಿ ಸಿದ್ಧರಾಗಿರುವ ನಮ್ಮ ಯೋಧರಿಗೆ ನನ್ನ ವಿಶೇಷ ಮೆಚ್ಚುಗೆಯನ್ನು ತಿಳಿಸುತ್ತೇನೆ. ಇದರೊಂದಿಗೆ ಕರ್ತವ್ಯದ ವೇಳೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ಅರೆಸೇನಾ ಹಾಗೂ ಪೊಲೀಸ್ ಪಡೆಗಳ ಎಲ್ಲಾ ಧೈರ್ಯ ಶಾಲಿಗಳಿಗೆ ನಾನು ವಂದಿಸುತ್ತೇನೆ.
ವಿಶಾಲವಾದ ಮತ್ತು ವೈವಿಧ್ಯಮಯ ಬಹು ಸಂಖ್ಯೆಯ ಜನರು ಅಭೂತಪೂರ್ವವಾಗಿ ಒಂದು ರಾಷ್ಟ್ರವಾಗಿ ಉಳಿದು ನಾವೆಲ್ಲರೂ ಭಾರತೀಯರು ಎಂದು ನಾವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದೇವೆ. ಏಕೆಂದರೆ ಹಲವಾರು ಧರ್ಮ ಹಾಗೂ ಹಲವಾರು ಭಾಷೆಗಳು ನಮ್ಮನ್ನು ವಿಭಜಿಸಿಲ್ಲ. ಅವು ನಮ್ಮನ್ನು ಒಗ್ಗೂಡಿಸಿವೆ. ಅದು ಭಾರತದ ಸತ್ಯ.
ದೇಶದಲ್ಲಿ ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತದಂತೆ ಮಾಡುವುದರ ಜೊತೆಗೆ ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಕೋಮು ಗಲಭೆಗಳಿಗೆ ಅವಕಾಶಕೊಡದೇ ಸರ್ವ ಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಇಂದು ಪ್ರತಿಜ್ಞೆ ಮಾಡಬೇಕಾಗಿದೆ.
ನಾವು ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾದ ಪಂಚ ಗ್ಯಾರಂಟಿಗಳ ಭರವಸೆಯಂತೆ ಈಗಾಗಲೇ ಎಲ್ಲ ಐದು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದರೊಂದಿಗೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ.
ರಾಜ್ಯ ಸರ್ಕಾರದ ಯೋಜನೆಗಳು ಸರ್ವರಿಗೂ ಅನುಕೂಲವಾಗುವಂತಿರಬೇಕು ಎಂಬ ದೃಷ್ಟಿಯಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮ, ಲಿಂಗಬೇಧಗಳಿಲ್ಲದೇ ಸರ್ವರಿಗೂ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆ ಮೆರೆಯಲಿದೆ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವ ನೈಪುಣ್ಯತೆಯನ್ನು ಜನರು ಬೆಳೆಸಿಕೊಳ್ಳಬೇಕು.
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸು ಹೆಮ್ಮೆಯ ಸಂಗತಿಯಾಗಿದೆ.
ಗೃಹಲಕ್ಷ್ಮೀ ಯೋಜನೆಗೆ ರಾಜ್ಯದಲ್ಲಿ ಈತನಕ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದು, 1.14 ಕೋಟಿ ಫಲಾನುಭವಿಗಳ ಖಾತೆಗೆ ತಲಾ 2 ಸಾವಿರ ರೂ.ಗಳನ್ನು ವರ್ಗಾಯಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ತೊಡುಕನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 2,16,563 ಲಕ್ಷ ನೋಂದಾವಣಿಯಾಗಿ 2,01,338 ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ಈವರೆಗೆ ರಾಜ್ಯದಲ್ಲಿ ಒಟ್ಟಾರೆ 99.75 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯದ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 71,31,581 ಮಹಿಳಾ ಪ್ರಯಾಣಿಕರು ಪ್ರಯೋಜನ ಪಡೆದಿದ್ದಾರೆ. 26,59 ಕೋಟಿ ರೂ. ಗಳನ್ನು ಸರ್ಕಾರದ ವತಿಯಿಂದ ಭರಿಸಲಿದೆ. ಹೆಚ್ಚಿನ ಬಸ್ ಸೌಲಭ್ಯಗಳನ್ನು ಒದಗಿಸಲು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ೮೨೫ ಸಾಮಾನ್ಯ ಹಾಗೂ ೧೮೫ ವಿದ್ಯುತ್ ಚಾಲಿತ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಗೃಹಜ್ಯೋತಿ ಯೋಜನೆಯಡಿ 48 ಯೂನಿಟ್ ಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ 10 ಅರ್ಹತಾ ಯೂನಿಟ್ ವಿದ್ಯುತ್ ಒದಗಿಸಲಾಗುವುದು. ಗೃಹಜ್ಯೋತಿ ಯೋಜನೆಯಡಿ ಈವರೆಗೆ ರಾಜ್ಯದಲ್ಲಿ 1.62 ಕೋಟಿ ಜನರು ನೋಂದಾಯಿಸಿಕೊಂಡಿದ್ದು, 1.56 ಕೋಟಿಗೂ ಅಧಿಕ ಕುಟುಂಬಗಳಿಗೆ ಈ ಯೋಜನೆಯ ಸೌಲಭ್ಯ ದೊರಕಿದೆ. ಈ ಸಂಬಂಧ 2900 ಕೋಟಿ ರೂ. ಭರಿಸಲಾಗಿದೆ. ಜಿಲ್ಲೆಯಲ್ಲಿ 3,11,652 ಜನ ನೋಂದಾಯಿಸಿಕೊಂಡಿದ್ದು, ಈವರೆಗೆ 76.54 ಕೋಟಿ ರೂ. ಗಳಷ್ಟು ಭರಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ 1,12,55,968 ಪಡಿತರ ಕಾರ್ಡಿನ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಒಟ್ಟು 638.51 ಕೋಟಿ ರೂ. ಮೊತ್ತವನ್ನು ವರ್ಗಾಯಿಸಲಾಗಿದೆ. ಜಿಲ್ಲೆಯಲ್ಲಿ 28,280 ಅಂತ್ಯೋದಯ ಕಾರ್ಡ್ ಹಾಗೂ 1,67,947 ಆದ್ಯತಾ ಪಡಿತರ ಚೀಟಿ ಸೇರಿ 6,75,831 ಫಲಾನುಭವಿಗಳಿದ್ದು, ಪ್ರತಿಯೊಬ್ಬರಿಗೂ 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಈವರೆಗೆ 72.83 ಕೋಟಿ ರೂ. ಪಾವತಿಸಲಾಗಿದೆ.
ರಾಜ್ಯಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ರಾಜ್ಯಾದ್ಯಂತ 1,03,283 ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1781 ಜನ ಅರ್ಹ ಫಲಾನುಭವಿಗಳ ನೋಂದಣಿಯಾಗಿದೆ. ಇವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ.
ರಾಜ್ಯದಾದ್ಯಂತ ತೀವ್ರ ಮಳೆಯ ಕೊರತೆಯಿಂದಾಗಿ ಬರಗಾಲದ ಛಾಯೆ ಆವರಿಸಿದೆ. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿದ್ದು, ಈ ಜಿಲ್ಲೆಯ ಮೂರು ತಾಲೂಕುಗಳಲ್ಲೂ ಬರದ ಛಾಯೆ ಆವರಿಸಿದ್ದು, ಜಿಲ್ಲೆಯ ಹೆಬ್ರಿ, ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಈಗಾಗಲೇ ಸೇರಿಸಲಾಗಿದೆ. ಬರ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸರ್ಕಾರಿ ಅಧಿಕಾರಿಗಳು ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸರ್ಕಾರದ ನಾನಾ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದು, ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲಿ ಬಗೆಹರಿಸಲು ಪ್ರಾರಂಭಿಸಿರುವ ಜನತಾ ದರ್ಶನಕ್ಕೆ ಈವರೆಗೆ ೪೦೩ ಅರ್ಜಿಗಳನ್ನು ಜಿಲ್ಲೆಯಲ್ಲಿ ಸಾರ್ವಜನಿಕರು ಸಲ್ಲಿಸಿದ್ದು, ಅವುಗಳಲ್ಲಿ ೪೦೧ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಎರಡು ಅರ್ಜಿಗಳು ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ. ಅದನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು.
ನಮ್ಮ ಕರ್ನಾಟಕವು ಜೈವಿಕ ತಂತ್ರಜ್ಞಾನದಲ್ಲಿ ಭಾರತದ ರಫ್ತು ಮತ್ತು ಉತ್ಪಾದನೆಯಲ್ಲಿ ಶೇ. ೬೦ ಕೊಡುಗೆ ನೀಡುತ್ತಿದೆ. ಇದು ಇಪ್ಪತ್ತು ಶತಕೋಟಿ ಮೌಲ್ಯಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಬಯೋಟೆಕ್ ಪಾಲಿಸಿಯನ್ನು ಜಾರಿಗೆ ತಂದಿದ್ದೇವೆ. ರಾಜ್ಯದಲ್ಲಿ ತಾಂತ್ರಿಕ ಆವಿಷ್ಕಾರ ಮತ್ತು ಆರ್ಥಿಕ ಅಭಿವೃದ್ಧಿ ಕೇಂದ್ರವನ್ನಾಗಿಸಲು ನೆರವಾಗುವ ಭಾರತದಲ್ಲಿಯ ಮೊದಲ ರಾಜ್ಯವಾಗಿ ಎ.ವಿ.ಜಿ.ಸಿ (ಅನಿಮೇಷನ್ ವಿಜ್ಯುಯಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್) ಪಾಲಿಸಿಯನ್ನು ಜಾರಿಗೆ ತರಲಾಗಿದೆ.
ಅಕ್ರಮ ಸಾಗುವಳಿ ಮಂಜೂರಿಗೆ ಡಿಜಿಟಲ್ ಸ್ಪರ್ಶ ನೀಡಲು ನಮ್ಮ ಸರ್ಕಾರ ಬಗರ್‌ಹುಕುಂ ಎಂಬ ವಿನೂತನ ತಂತ್ರಾಂಶವೊಂದನ್ನು ರೂಪಿಸುವ ಮೂಲಕ ಭೂ ಮಂಜೂರಾತಿ ಸಮಿತಿಯ ತಾಂತ್ರಿಕ ನೆರವಿನಿಂದಲೂ ರೈತರ ಸಾಗುವಳಿ ಪರಿಶೀಲನೆ ಮಾಡುವ ಮೂಲಕ ಭೂ ಮಂಜೂರಾತಿ ಪ್ರಕ್ರಿಯೆಗೆ ಮೊದಲ ಬಾರಿಗೆ ಹೊಸ ಆಯಾಮ ನೀಡಲಾಗಿದೆ.
ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ರೈತರ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲು ಕ್ರಮವಹಿಸಲಿದ್ದೇವೆ ಎಂದು ಮಾನ್ಯ ಮುಖ್ಯಮಂತ್ರಿಗಳು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಘೋಷಿಸಿದ್ದಾರೆ
ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ಮಂಡಿಚಿಪ್ಪು, ಹೃದಯ ಕವಾಟ ಬದಲಾವಣೆಯಂತಹ ಶಸ್ತ್ರ ಚಿಕಿತ್ಸೆಗಳು ದುಬಾರಿಯಾಗಿರುವುದರಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಿದ್ದು, 2021-22 ರಲ್ಲಿ 13.16 ಲಕ್ಷ ಗಳಿದ್ದರೆ, 2022-23 ನೇ ಸಾಲಿನಲ್ಲಿ 21.97 ಲಕ್ಷ ವಾಗಿದೆ. ರಾಜ್ಯದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಹಾಗೂ ಚಿಕಿತ್ಸೆ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
ರಾಜ್ಯದಲ್ಲಿ ಉದ್ಯೋಗ ಸೃಜನೆಗೆ ಆದ್ಯತೆ ನೀಡಲಾಗುತ್ತಿದ್ದು, ಹೂಡಿಕೆ ಮಾಡುವಂತ ಕಂಪನಿಗಳನ್ನು ಸೆಳೆಯಲಾಗುತ್ತಿದೆ. ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನ ಸಮಿತಿಯಲ್ಲಿ 73 ಯೋಜನೆಗಳಿಗೆ ಅನುಮೋದನೆ ನೀಡುವುದರೊಂದಿಗೆ 3935 ಕೋಟಿ ಬಂಡವಾಳ ಹೂಡಿಕೆಯಾಗಿ ಅಂದಾಜು 14,500 ಉದ್ಯೋಗಗಳು ಸೃಷ್ಠಿಯಾಗಲಿದೆ.
ಬರ ಸಮೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 4,103 ಹೆ, ಹೆಬ್ರಿ 1,283 ಹೆ, ಬ್ರಹ್ಮಾವರದಲ್ಲಿ 8,551 ಹೆ. ಸೇರಿದಂತೆ ಒಟ್ಟು 13,937 ಹೆ. ನಷ್ಟು ಭತ್ತದ ಬೆಳೆ ಹಾನಿ ಅಂದಾಜಿಸಲಾಗಿದ್ದು, 11.85 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದಿಂದ ಮೊದಲನೇ ಕಂತಿನಲ್ಲಿ 19,071 ರೈತರಿಗೆ 2.64 ಕೋಟಿ ರೂ. ಪರಿಹಾರವನ್ನು ಪಾವತಿಸಲಾಗಿದೆ. ಜಿಲ್ಲೆಯ 997 ರೈತರ ತಾಕುಗಳಿಗೆ ತುಂತುರು ನೀರಾವರಿ ಘಟಕಗಳಿಗೆ 193.7 ಲಕ್ಷ ರೂ. ಸಹಾಯಧನ ಒದಗಿಸಲಾಗಿದೆ.
ಉಡುಪಿ ಜಿಲ್ಲೆ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ವಕೀಲರ ಭವನ ಹಾಗೂ ಎ.ಡಿ.ಆರ್ ಸಂಕೀರ್ಣವನ್ನು ಒಳಗೊಂಡ ಅನೆಕ್ಸ್ ನ್ಯಾಯಾಲಯ ನಿರ್ಮಾಣಕ್ಕೆ 15.14 ಕೋಟಿ ರೂ. ಗಳ ಅನುಮೋದನೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯ ಹಾಗೂ ವಸತಿ ಶಾಲೆಗಳಿಗೆ 6036 ವಿದ್ಯಾರ್ಥಿಗಳು ದಾಖಲಾಗಿದ್ದು, ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. 2567 ವಿದ್ಯಾರ್ಥಿಗಳಿಗೆ 145.64 ಲಕ್ಷ ರೂ. ಗಳ ಶುಲ್ಕ ವಿನಾಯಿತಿ ಮಂಜೂರು ಮಾಡಲಾಗಿದ್ದು, ಬಾರ್ಕೂರು ಹಾಗೂ ಕುಂದಾಪುರಗಳಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ತಲಾ 50 ಕೋಟಿ ರೂ. ಗಳಂತೆ 100 ಕೋಟಿ ರೂ. ಮಂಜೂರು ಮಾಡಲಾಗಿದೆ.
ಮೀನುಗಾರಿಕೆಯಲ್ಲಿ ತೊಡಗಿರುವ ಯಾಂತ್ರೀಕೃತ ದೋಣಿಗಳಿಗೆ 73,808 ಕಿಲೋ ಲೀಟರ್ ಮಾರಾಟ ಕರರಹಿತ ಡೀಸೆಲ್, 5074 ಪರ್ಮಿಟ್ ಹೊಂದಿರುವ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು, ಜೀವ ರಕ್ಷಕ ಕಿಟ್ಟುಗಳು ಸೇರಿದಂತೆ ಮೀನುಸಾಗಾಟ ವಾಹನಕ್ಕೆ ಸಹಾಯಧನ ಒದಗಿಸಲಾಗಿದೆ.
ಜಿಲ್ಲೆಯ ಹೆಬ್ರಿ ತಾಲೂಕು ಕೆರೆಬೆಟ್ಟು, ಶಿವಪುರ ಗ್ರಾಮದಲ್ಲಿ 113.89 ಎಕ್ರೆ ಹಾಗೂ ಕಾರ್ಕಳದ ನಿಟ್ಟೆಯಲ್ಲಿ 50.42 ಎಕ್ರೆ ಜಮೀನಿನಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಕಾಪು ತಾಲೂಕಿನ ಎಲ್ಲೂರು ಹಾಗೂ ಸಾಂತೂರು ಗ್ರಾಮದಲ್ಲಿ 941.98 ಎಕ್ರೆ ಸ್ಥಳ ಪರಿಶೀಲನೆ ಮಾಡಿ, ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕೈಗಾರಿಕೆ ಸ್ಥಾಪನೆಯ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಿ, ಮುಂದಿನ ದಿನಗಳಲ್ಲಿ ಸ್ಥಳೀಯ ಜನರಿಗೆ ಉದ್ಯೋಗ ಲಭಿಸುವಂತೆ ಮಾಡಲು ಸೂಚನೆ ನೀಡಲಾಗಿದೆ.
ಜಿಲ್ಲೆಯ ಸುಂದರ ಪ್ರಕೃತಿ ತಾಣಗಳು, ಕಡಲ ತೀರಗಳ ಧಾರ್ಮಿಕ ಕೇಂದ್ರಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರವಾಸಿಗರನ್ನು ಆಕರ್ಷಿಸಿದೆ. ಇಲ್ಲಿ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಡಿಸೆಂಬರ್ ಅಂತ್ಯಕ್ಕೆ 3740 ನೋಂದಣಿಯಾಗಿ ಶೇ. 84 ರಷ್ಟು ಪ್ರಗತಿ ಸಾಧಿಸಲಾಗಿದೆ. ಎರಡು ಹೆಣ್ಣು ಮಗುವುಳ್ಳ ಫಲಾನುಭವಿಗಳಲ್ಲಿ 2016 ನೋಂದಣಿಯಾಗಿ ಶೇ. 127 ರಷ್ಟು ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 48.30 ಲಕ್ಷ ಅನುದಾನ , 59,238 ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಲು 171.34 ಲಕ್ಷ, ಅತಿಥಿ ಶಿಕ್ಷಕರಿಗೆ 202.8 ಲಕ್ಷ ಹಾಗೂ ವಿವೇಕ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಈವರೆಗೆ 1848.13 ಲಕ್ಷ ಅನುದಾನ ನೀಡಲಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ 9 ಲಕ್ಷ ಮಾನವ ದಿನಗಳನ್ನು ಗುರಿಯಾಗಿರಿಸಿ, ಈವರೆಗೆ 6.64 ಲಕ್ಷ ಮಾನವ ದಿನಗಳನ್ನು ಸೃಜನಿಸಿ, 37.7 ಕೋಟಿ ರೂ. ಪಾವತಿಸಿ, 5069 ಶಾಶ್ವತ ಆಸ್ತಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೃಜನಿಸಲಾಗಿದೆ.
ಸಂವಿಧಾನ ಜಾರಿಗೆ ಬಂದ 75 ವರ್ಷಾಚರಣೆಯ ಹಿನ್ನೆಲೆ, ಸಂವಿಧಾನದ ಮೌಲ್ಯ ಹಾಗೂ ಧ್ಯೇಯಗಳನ್ನು ಜನಸಾಮಾನ್ಯರಿಗೆ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧಚಿತ್ರಕ್ಕೆ ಇಂದು ನಾನೇ ಚಾಲನೆ ನೀಡಿದ್ದೇನೆ. ಜಾಥಾವು ಜಿಲ್ಲೆಯ ೧೫೫ ಗ್ರಾಮ ಪಂಚಾಯತಿಗಳಲ್ಲಿ ಸಾಗಿ, ಜನಸಾಮಾನ್ಯರಲ್ಲಿ ಜಾಗೃತ ಮೂಡಿಸಲಿದೆ. ಕಳೆದ ಸೆಪ್ಟಂಬರ್ ಮಾಹೆಯಲ್ಲಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮವನ್ನು ಶಾಲಾ-ಕಾಲೇಜುಗಳಲ್ಲಿ ಯಶಸ್ವಿಯಾಗಿ ಜಿಲ್ಲೆಯಲ್ಲಿ ನಡೆಸಲಾಗಿದೆ.


ದೇಶದ ನಾಗರೀಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಜಾತಿ, ಭಾಷೆ, ಪಂಗಡ, ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವು ನೀವುಗಳೆಲ್ಲರೂ ಒಟ್ಟಾಗಿ ಸೇರಿ ಶ್ರಮಿಸೋಣ ಎಂಬ ಮಾತನ್ನು ಈ ಸಂದರ್ಭದಲ್ಲಿ ತಮಗೆಲ್ಲರಿಗೂ ತಿಳಿಸುತ್ತಾ, ನನ್ನ ಪ್ರಿಯ ನಾಗರಿಕರಿಗೆ ನಾನು ಮತ್ತೊಮ್ಮೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button