ಪತ್ರಕರ್ತರ ಮಾಸಾಶನ ಸಭೆಗೆ ಕೆಯುಡಬ್ಲ್ಯೂಜೆ ಒತ್ತಾಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪತ್ರಕರ್ತರ ಮಾಸಾಶನ ಸಭೆಯನ್ನು ಕೂಡಲೇ ಕರೆಯಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಒತ್ತಾಯಿಸಿದೆ

Home add -Advt

ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಕಳೆದ ಒಂದೂವರೆ ವರ್ಷದಿಂದ ಪತ್ರಕರ್ತರ ಮಾಸಾಶನ ಸಭೆ ನಡೆದಿಲ್ಲ ಎನ್ನುವುದನ್ನು ಗಮನಕ್ಕೆ ತಂದರು.

ರಾಜ್ಯದಲ್ಲಿ ಹಲವು ಪತ್ರಕರ್ತರು ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ವಾರ್ತಾ ಇಲಾಖೆಯಲ್ಲಿ ಬಾಕಿ ಉಳಿದಿವೆ. ಸಂಕಷ್ಟದಲ್ಲಿರುವ
ಪತ್ರಕರ್ತರಿಗೆ ನೆರವಾಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.
ನಾನಾ ಕಾರಣಗಳಿಗಾಗಿ ಮಾಸಾಶನ ವಿಳಂಬವಾಗುತ್ತಿದ್ದು, ಪತ್ರಕರ್ತರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ
ಪ್ರತಿ ತಿಂಗಳು ಪತ್ರಕರ್ತರಿಗೆ ಮಾಸಾಶನ ಲಭ್ಯವಾಗುವಂತೆ ಮಾಡಬೇಕು ಎಂದು ತಗಡೂರು ಕೋರಿದ್ದಾರೆ.

ಮನವಿಗೆ ಸ್ಪಂದಿಸಿದ ಆಯುಕ್ತರಾದ ನಿಂಬಾಳ್ಕರ್ ಅವರು ಶೀಘ್ರದಲ್ಲೇ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ.

ಮಾನ್ಯತಾ ಸಮಿತಿ ಸಭೆ:
ಮಾಧ್ಯಮ ಮಾನ್ಯತಾ ಸಮಿತಿ (ಅಕ್ರಿಡಿಟೇಶನ್) ರಚನೆಯಾದ ಮೇಲೆ ಒಮ್ಮೆ ಸಭೆ ನಡೆದಿರುವುದನ್ನು ಬಿಟ್ಟರೆ ಈತನಕ ಸಭೆ ಆಗಿಲ್ಲ. ನಾನಾ ಕಾರಣಕ್ಕಾಗಿ ಹಲವು ಅರ್ಜಿಗಳು ಇಲಾಖೆಯಲ್ಲಿ ಬಾಕಿ ಉಳಿದಿವೆ. ಆದ್ದರಿಂದ ಕೂಡಲೇ ಅಕ್ರಿಡಿಟೇಶನ್ ಕಮಿಟಿ ಸಭೆ ಕರೆಯಬೇಕು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರು ಆಗ್ರಹಿಸಿದ್ದಾರೆ.

Related Articles

Back to top button