Belagavi NewsBelgaum NewsEducation

*ಮುಂದಿನ ಪೀಳಿಗೆಗೆ ಸುಸ್ಥಿರ ಸಂಪನ್ಮೂಲಭರಿತ ಪರಿಸರವನ್ನು ಕೊಡುವುದು ನಮ್ಮ ಜವಾಬ್ದಾರಿ : ಡಾ. ಫಿಲಾಟೊವ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ನಲ್ಲಿ “ಎನ್ವಿರಾನ್ ಮೆಂಟಲ್ ಸಸ್ಟೇನ್ಬಿಲಿಟಿ ಮತ್ತು ಕ್ಲೈಮೇಟ್ ಚೇಂಜ್ ಆಡಪ್ಸನ್ ಸ್ಟ್ರಾಟಜಿಸ್” (ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಾರ್ಯತಂತ್ರ)  ಎಂಬ ವಿಷಯದ ಕುರಿತು ಗುರುವಾರ ದಿನಾಂಕ ೧೩ ಮತ್ತು ೧೪ ರಂದು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ವಿ ಟಿ ಯು ನ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.

ಸಮ್ಮೇಳನದ ಉದ್ಘಾಟನಾ ಸಮಾರಂಭವು ಗುರುವಾರ ದಿನಾಂಕ ೧೩ ರಂದು ಬೆಳಿಗ್ಗೆ ೧೦:೩೦ಕ್ಕೆ ನಡೆಯಿತು. ರಷ್ಯನ್ ಅಕಾಡೆಮಿಯ ಪೆಟ್ರೊಜವೋಡ್ಸ್ಕ್ ವಾಟರ್ ಇನ್ಸ್ಟಿಟ್ಯೂಟ್ ನ ನಿರ್ದೇಶಕರಾದ ಡಾ. ಫಿಲಾಟೊವ್ ನಿಕೋಲೈ ನಿಕೊಲಾಯೆವಿಚ್ ಮುಖ್ಯ ಅತಿಥಿಗಳಾಗಿ  ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ   ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೆನಡಾದ ಇನ್ ಲ್ಯಾಂಡ್ ವಾಟರ್ಸ್ ನ ಮಾಜಿ ಹಿರಿಯ ವಿಜ್ಞಾನಿ ಡಾ. ಸಿ ಆರ್. ಮೂರ್ತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಬಿ ಶಿವಲಿಂಗಯ್ಯ, ವಿ ಟಿ ಯು ಕುಲಸಚಿವ ಪ್ರೊ ಬಿ ಈ ರಂಗಸ್ವಾಮಿ, ಮೌಲ್ಯಮಾಪನಾ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ ಹಾಗೂ ಹಣಕಾಸು ಅಧಿಕಾರಿ ಡಾ. ಪ್ರಶಾಂತ ನಾಯಕ್ ಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಫಿಲಾಟೋವ್, ನೀರು ಜೀವನಕ್ಕೆ ಅತ್ಯಗತ್ಯ, ಆದರೆ ಹವಾಮಾನ ಬದಲಾವಣೆ, ಮಾಲಿನ್ಯ, ನೀರಿನ ಅತಿಯಾದ ಬಳಕೆ ಮತ್ತು ದುರುಪಯೋಗದಿಂದಾಗಿ ಅದರ ಲಭ್ಯತೆ ಮತ್ತು ಗುಣಮಟ್ಟಅಪಾಯದಲ್ಲಿದೆ. ನಾವು ಈಗಲೇ ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದ ಪೀಳಿಗೆಗಳು ತೀವ್ರ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ನೀರಿನ ಮಹತ್ವದ ಕುರಿತು ಮಾತನಾಡಿದ ಅವರು, ನೀರು ಜೀವನದ ಅಡಿಪಾಯ. ಇದು ಪರಿಸರದಲ್ಲಿನ ವಿವಿಧ ವ್ಯವಸ್ಥೆಗಳನ್ನು ಉಳಿಸುತ್ತದೆ, ಕೃಷಿ ಹಾಗೂ ಕೈಗಾರಿಕೆಗಳಿಗೆ ಅತ್ಯವಶ್ಯ ಮತ್ತು ಮಾನವ ಸಂಕುಲ  ಉಳಿವಿಗೆ ಇದರ ಅಸ್ತಿತ್ವ ನಿರ್ಣಾಯಕವಾಗಿದೆ. ಭೂಮಿಯ ಮೇಲ್ಮೈಯಲ್ಲಿ 71% ರಷ್ಟು ನೀರು ಇದ್ದರು, ಇದರ ಕೇವಲ 2.5% ಮಾತ್ರ ಸಿಹಿನೀರು, ಮತ್ತು ಇದಕ್ಕಿಂತ ಕಡಿಮೆ  ಭಾಗವು ನೇರ ಮಾನವ ಬಳಕೆಗೆ ಲಭ್ಯವಿದೆ ಎಂದು ಹೇಳಿದರು.  ಬೆಳೆಯುತ್ತಿರುವ ಜಾಗತಿಕ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಸುಸ್ಥಿರ ನೀರು ಪೂರೈಕೆಯನ್ನು ಒದಗಿಸಿಕೊಡಬೇಕಾಗಿದ್ದು ನಮ್ಮ ಕಾಲದ ಬಹುದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಭವಿಷ್ಯದ ಪೀಳಿಗೆಗೆ ಶುದ್ಧ ಗಾಳಿ ನಿಸರ್ಗ ಮತ್ತು ಅಗತ್ಯವಾದ ನೀರನ್ನು ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಜಲಸಂಪನ್ಮೂಲ ನಿರ್ವಹಣೆಯ ಬಗ್ಗೆ ಮಾತನಾಡಿದ ಅವರು ಯುಟ್ರೊಫಿಕೇಶನ್ ಅಂದರೆ ನೀರಿನ ಆಕರಗಳಲ್ಲಿ ಪೋಷಕಾಂಶಗಳ, ಸೂಕ್ಶ್ಮಾಣು ಜೀವಿಗಳ ಕ್ರೋಡೀಕರಣಗೊಂಡು ಆಮ್ಲಜನಕದ ಕೊರತೆ ಉಂಟಾಗುವ ಪ್ರಕ್ರಿಯೆ, ಕೈಗಾರಿಕೀಕರಣದ ಮೂಲಕ ಜಲ ಮಾಲಿನ್ಯ, ಹವಾಮಾನ ತಾಪಮಾನ ಏರಿಕೆ, ಮೈಕ್ರೋಪ್ಲಾಸ್ಟಿಕ್ ಸೇರಿಕೆ ಮತ್ತು ಅನೇಕ  ಸಮಸ್ಯೆಗಳನ್ನು ಒತ್ತಿ ಹೇಳಿದರು ಮತ್ತು ಭವಿಷ್ಯದ ಪೀಳಿಗೆಗೆ ಜಲಮೂಲಗಳನ್ನು ಉಳಿಸಲು ಹವಾಮಾನ ಬದಲಾವಣೆಗೆ ತಕ್ಕಂತೆ ನಾವುಗಳು ನೈಸರ್ಗಿಕ ಸಂಪನ್ಮೂಲಗಳನ್ನು ಅದರಲ್ಲೂ ನೀರನ್ನು ಸಂರಕ್ಷಿಸಲು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ವಿ ಟಿ ಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಅವರು, ಭೂಮಿಯ ಹವಾಮಾನವು ವೇಗವಾಗಿ ಬದಲಾಗುತ್ತಿದೆ, ಇದಕ್ಕೆ ಇಂಧನ ಉಪಯೋಗ, ಅರಣ್ಯನಾಶ ಮತ್ತು ಕೈಗಾರಿಕರಣದಂತಹ  ಪ್ರಕ್ರಿಯೆಗಳಂತಹ ಮಾನವ ಚಟುವಟಿಕೆಗಳು ಕಾರಣವಾಗಿವೆ. ಈ ಕ್ರಿಯೆಗಳು ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತವೆ, ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತವೆ. ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯ ಹೊಂದಾಣಿಕೆಯು ಒಂದಕ್ಕೊಂದು ನೇರ ಸಂಬಂಧಹೊಂದಿದೆ ಎಂದು ಹೇಳಿದರು.  ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯ ಹೊಂದಾಣಿಕೆಯನ್ನು ಅರಿತು ಪರಿಣಾಮಕಾರಿ ಪರಿಹಾರಗಳನ್ನು ಅನುಸ್ಟಾನಗೊಳಿಸುವುದು ಸುಸ್ಥಿರ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು, ವಿಷಯ ತಜ್ಞರು,  ಸಂಶೋಧಕರು ಮತ್ತು ಸಂಬಂಧಪಟ್ಟ ವ್ಯಕ್ತಿಗಳು, ಜ್ಞಾನ ಮತ್ತು ಕೌಶಲ್ಯವನ್ನು ಹಂಚಿಕೊಳ್ಳುವ ಮೂಲಕ ಒಟ್ಟಾಗಿ ಕೆಲಸ ಮಾಡಬೇಕು. ಈ ಸಮ್ಮೇಳನವು ಅಂತಹ ಸಹಯೋಗಕ್ಕೆ ಅಮೂಲ್ಯವಾದ ವೇದಿಕೆಯನ್ನು ಒದಗಿಸಿದೆ. ಒಟ್ಟಾಗಿ ಕೆಲಸ ಮಾಡುತ್ತ, ನಾವೀನ್ಯತೆಯನ್ನು ಅಳವಡಿಸಿಕೊಂಡು ನಿರ್ಣಾಯಕವಾಗಿ ಕಾರ್ಯನಿರ್ವಹಿಸುವ ಮೂಲಕ, ನಾವು ಸುಸ್ಥಿರ ಮತ್ತು ಅಭಿವೃದ್ಧಿ ಹೊಂದಿದ ಭವಿಷ್ಯವನ್ನು ನಿರ್ಮಿಸಬಹುದು ಎಂದು ಹೇಳಿದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರಾದ  ಡಾ. ಬಿ. ಶಿವಲಿಂಗಯ್ಯ ಮಾತನಾಡಿ, ಹವಾಮಾನ ಬದಲಾವಣೆಯು ದೂರ ಉಳದಿಲ್ಲ ಅದು ಈಗ ನಡೆದಿದೆ ಮತ್ತು ನಿರಂತರವಾಗಿದೆ. ಸಮುದ್ರ ಮಟ್ಟ ಏರಿಕೆ, ಆಮ್ಲ ಮಳೆ, ಜಾಗತಿಕ ತಾಪಮಾನ, ಚಂಡಮಾರುತಗಳು,  ಅತಿವೃಷ್ಟಿ ಹಾಗೂ ಅನಾವೃಷ್ಟಿ ಮತ್ತು ಕಾಡ್ಗಿಚ್ಚುಗಳು ಅದರ ಪರಿಣಾಮಗಳು ಅಂದರೆ ತಪ್ಪಾಗಲಾರದು. ಈ ಬದಲಾವಣೆಗಳು ನಮ್ಮ ಪರಿಸರ ವ್ಯವಸ್ಥೆ, ಆಹಾರ ಉತ್ಪಾದನೆ, ನೀರಿನ ಲಭ್ಯತೆ ಮತ್ತು ನೇರವಾಗಿ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಆದ್ದರಿಂದ, ಈ ಸಮ್ಮೇಳನದ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಸುಸ್ಥಿರ ಪರಿಹಾರಗಳನ್ನು ತರಲು ನಾವು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ವಿ ಟಿ ಯು ಕುಲಸಚಿವ ಪ್ರೊ ಬಿ ಈ ರಂಗಸ್ವಾಮಿ ಸ್ವಾಗತಿಸಿದರು, ಪ್ರೊ. ಚಂದ್ರಶೇಖರ ಹಿರೇಮಠ್ ಅತಿಥಿಗಳನ್ನು ಪರಿಚಯಿಸಿದರು, ಸಮ್ಮೇಳನದ ಸಂಯೋಜಕ ಹಾಗೂ ಸಿವಿಲ್ ವಿಭಾಗದ ಚೇರ್ಮನ್ ಪ್ರೊ ನಾಗರಾಜ್ ಪಾಟೀಲ್ ವಂದಿಸಿದರು.

ಎರಡು ದಿನಗಳು ನಡೆಯುವ ಈ  ಸಮ್ಮೇಳನದಲ್ಲಿ ೬೮ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಲಿದ್ದಾರೆ.  ಇದರಲ್ಲಿ  ಅಂತರಾಷ್ಟ್ರೀಯ ವಿಷಯ ತಜ್ಞರು ಸೇರಿ ಸುಮಾರು 100  ಕ್ಕಿಂತ ಹೆಚ್ಚು ತಜ್ಞರು, ಸಂಶೋಧನಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದಾರೆ.  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button