Kannada NewsKarnataka News

ಹಿರಿಯ ಸಾಹಿತಿಗಳಿಗೆ ಬೆಳಗಾವಿಯಲ್ಲಿ ಶೃದ್ಧಾಂಜಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚೆಗೆ ಅಗಲಿದ ಹಿರಿಯ ಸಾಹಿಗಳಾದ ಚನ್ನಣ್ಣ ವಾಲೀಕಾರ್ ಹಾಗೂ ರಂ.ಶಾ.ಲೋಕಾಪುರ ಅವರಿಗೆ ಬೆಳಗಾವಿಯಲ್ಲಿ ಸಾಹಿತಿಗಳು ಶೃದ್ಧಾಂಜಲಿ ಸಲ್ಲಿಸಿದರು.

ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯಿಂದ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಿ ಅಗಲಿದ ಸಿಹಿತಿಗಳಿಗೆ ನಮನ ಸಲ್ಲಿಸಲಾಯಿತು.

ಚನ್ನಣ್ಣ ವಾಲೀಕಾರ್ ಸಾಹಿತ್ಯಕ್ಕೆ ಸಾವಿಲ್ಲ 

ಎಲ್ಲ ಸರ್ವಾಧಿಕಾರಿಗಳಿಗಿಂತ ದೊಡ್ಡ ಸರ್ವಾಧಿಕಾರಿ ಸಾವು. ಬೇರೆ ಸರ್ವಾಧಿಕಾರಿಗಳನ್ನು ಸೋಲಿಸ್ತೀವಿ. ಆದರೆ ಸಾವನ್ನು ಸೋಲಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಸಾಯಿಸುವಂತ ಸಾವಿಗೆ ಸಾವಿಲ್ಲ. ಹೀಗಾಗಿ ಚೆನ್ನಣ್ಣ ವಾಲೀಕಾರರಿಗೆ ಸಾವಿದೆ. ಚೆನ್ನಣ್ಣನ ಸಾಹಿತ್ಯಕ್ಕೆ ಸಾವಿಲ್ಲ ಎಂದು ಮಾತನಾಡುತ್ತಲೇ ಚೆನ್ನಣ್ಣನ್ನು ನೆನೆದು ನಾಡೋಜ ಬರಗೂರು ರಾಮಚಂದ್ರಪ್ಪ ಕಣ್ಣೀರಿಟ್ಟರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಬಂಡಾಯ ಸಾಹಿತ್ಯ ಸಂಘಟನೆಯಿಂದ ಆಯೋಜಿಸಲಾಗಿದ್ದ, ಚೆನ್ನಣ್ಣ ವಾಲೀಕಾರ್ ಅವರ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ಚೆನ್ನಣ್ಣ ವಾಲೀಕಾರ್ ಅವರು ಸಾಹಿತ್ಯ ರಚನೆಯಲ್ಲಿ ಅನೇಕ ಹೊಸಬಗೆಯ ಪ್ರಯೋಗಗಳನ್ನು ಮಾಡಿದರೂ ಮನುಷ್ಯ ಸಂಬಂಧವನ್ನೇ ಪ್ರತಿಪಾದಿಸುತಿದ್ದರು.

ಸಾಹಿತ್ಯ ಮತ್ತು ಸಮಾಜದಲ್ಲಿ ಮನುಷ್ಯ ಸಂಬಂಧದ ಸಂವೇದನೆ ಬಹಳ ಮುಖ್ಯ. ಬಹಳಷ್ಟು ಲೇಖಕರು ಸಿದ್ದಾಂತವನ್ನು ಸೆರೆಮನೆ ಮಾಡಿಕೊಂಡಿದ್ದರೂ ಅವರು ತಾವು ನಂಬಿದ ಸಿದ್ದಾಂತದ ಸೆರೆಮನೆಯಲ್ಲಿರಲಿಲ್ಲ, ಸಿದ್ದಾಂತದ ವಿಷಯದಲ್ಲಿ ಮೀರುವಿಕೆಯಿತ್ತು, ಜಡವಾಗದ ಸಂವೇದನೆಯಿತ್ತು.
ಟೀಕೆಗಳನ್ನು ಸ್ವಾಗತಿಸಿ ಆನಂದಿಸುತ್ತಿದ್ದ ಚೆನ್ನಣ್ಣ ಬರವಣಿಗೆಯನ್ನು ತಪಸ್ಸಿನಂತೆ ಮಾಡುತ್ತಿದ್ದರು. ಅವರು ಚಳುವಳಿ ಮತ್ತು ಮನುಷ್ಯ ಸಂಬಂಧಕ್ಕಿರಬೇಕಾದ ಸಂಬಂಧವನ್ನು ತೋರಿಸಿಕೊಟ್ಟಂತ ರೂಪಕವಾಗಿದ್ದರು ಎಂದು ಅವರ ವ್ಯಕ್ತಿತ್ವವದ ಹಲವು ನಿದರ್ಶನಗಳನ್ನು ವಿವರಿಸಿದರು.

ಬಂಡಾಯ ಸಾಹಿತಿಗಳಾದ ಸರಜೂ ಕಾಟ್ಕರ್, ಸತೀಶ್ ಕುಲಕರ್ಣಿ, ಟಿ. ಆರ್. ಚಂದ್ರಶೇಖರ್ ಅಗಲಿದ ವಾಲೀಕಾರ್ ಅವರ ಸಾಹಿತ್ಯ ಮತ್ತು ಮಾನವೀಯ ಅಂತಃಕರಣದ ಕುರಿತು ಮಾತನಾಡಿದರು. ಹಿರಿಯ ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಡಿ. ಎಸ್. ಚೌಗಲೆ, ರಾಮಕೃಷ್ಣ ಮರಾಠೆ, ಸಿ. ಕೆ ನಾವಲಗಿ, ಎಸ್. ಎಸ್. ಅಂಗಡಿ, ಎ. ಎ. ಸನದಿ, ಸಿದ್ದಗಂಗಮ್ಮಾ, ಆಶಾ ಕಡಪಟ್ಟಿ, ನದೀಮ್ ಸನದಿ ಕಾರ್ಮಿಕ ಚಳುವಳಿಯ ಮುಖಂಡರಾದ ಜಿ. ವಿ. ಕುಲಕರ್ಣಿ, ಎಲ್. ಎಸ್. ನಾಯಕ್ ಅಧ್ಯಾಪಕರುಗಳಾದ ಪಿ. ನಾಗರಾಜ್, ಶೋಭಾ ನಾಯಕ, ಶಂಕರ್ ಬಾಗೇವಾಡಿ,ಅಡಿವೆಪ್ಪ ಇಟಗಿ, ಮಲ್ಲಿಕಾರ್ಜುನ ಲೋಕಳೆ, ಮಹೇಶ್ ಢಾಲೆ, ಬಿ. ಎನ್ ಕಸಾಳೆ, ಅತೀಶ್ ಢಾಲೆ, ಸಂತೋಷ ನಾಯಕ ವಿದ್ಯಾರ್ಥಿ ಮುಖಂಡರಾದ ಬಾಲಕೃಷ್ಣ ನಾಯಕ, ಮಂಜುನಾಥ ಪಾಟೀಲ, ಅನೀಲ್ ನಡೂವಿನಕೇರಿ, ಸೈದಪ್ಪ ಹಿರೇಮನಿ, ಹನುಮಂತ ಯರಗಟ್ಟಿ, ಸುನೀಲ್ ನಾಟೀಕಾರ್, ಸಚಿನ್ ಮಾಳಗೆ, ಧರ್ಮಣ್ಣ ಮಾದರ, ನಿಂಗಪ್ಪ ಮಸ್ತಿ, ಶಿವರಾಜ್ ಗಸ್ತಿ, ಸಾಗರ್ ನಾಯಕ, ನಕುಶಾ, ನಿಖಿತಾ ಭೈರಣ್ಣವರ, ಗೋಪಿಕಾ ಹೇರಗೆ, ಬೇಬಿ ಕುತಿಜಾ, ಬಾಳವ್ವ ಶಿವನಾಯಕರ, ಭೀಮಾರತಿ ಕುಂದರಗಿ ಮುಂತಾದವರು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಚೆನ್ನಣ್ಣ ವಾಲೀಕಾರ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮೌನ ಆಚರಿಸಲಾಯಿತು. ಹೋರಾಟದ ಹಾಡುಗಾರ್ತಿ ಕಾವೇರಿ ಬುಕ್ಯಾಳಕರ ಅವರು ಚೆನ್ನಣ್ಣ ವಾಲೀಕಾರ್ ಅವರು ಬರೆದ ’ ನೀ ಹೋದ ಮರುದಿನ’ ಹಾಡು ಹಾಡಿ ಚಾಲನೆ ನೀಡಿದರು. ಸಂಘಟಕ, ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ದಿಂದ ಶ್ರದ್ಧಾಂಜಲಿ 

ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಕಚೇರಿಯಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿಗಳಾದ ಕೆ.ಬಿ. ಸಿದ್ಧಯ್ಯ, ಅಬ್ದುಲ್ ಮಜೀದ್ ಖಾನ್, ರಂ. ಶಾ. ಲೋಕಾಪುರ ಮತ್ತು ಡಾ. ಚೆನ್ನಣ್ಣ ವಾಲೀಕಾರ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೆ.ಬಿ. ಸಿದ್ಧಯ್ಯ ಮತ್ತು ಚೆನ್ನಣ್ಣ ವಾಲೀಕಾರ ಅವರು ಕನ್ನಡದಲ್ಲಿ ನವ್ಯ ಮತ್ತು ದಲಿತ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾದುದು. ಡಾ.ಅಂಬೇಡ್ಕರ್ ಅವರ ಸಾಹಿತ್ಯ ಕುರಿತು ಕೆ.ಬಿ. ಸಿದ್ಧಯ್ಯ ಅವರು ಅಧಿಕೃತವಾಗಿ ಮಾತನಾಡುವ ಮಹಾ ವಿದ್ವಾಂಸರಾಗಿದ್ದರು. ಡಾ. ಚೆನ್ನಣ್ಣ ವಾಲೀಕಾರ ಅವರು ವ್ಯೋಮಾವ್ಯೋಮ, ಅಂಬೇಡ್ಕರ್ ಗಾಥಾ ಮೊದಲಾದ ಪ್ರಯೋಗ ಶೀಲ ಮಹಾಕಾವ್ಯಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆಯನ್ನು ನೀಡಿದವರು.

ಬೆಳಗಾವಿಯಲ್ಲಿ ವಾಸವಾಗಿದ್ದ ರಂ.ಶಾ.ಲೋಕಾಪುರ ಅವರು ಜ್ಞಾನೇಶ್ವರಿಯನ್ನು ಕನ್ನಡಕ್ಕೆ ಅನುವಾದಿಸಿ ಅನನ್ಯವಾದ ಕಾರ್ಯ ಮಾಡಿದವರು. ಅಬ್ದುಲ್ ಮಜೀದ್ ಖಾನ್ ಅವರು ಹಿಂದೀ ಮತ್ತು ಉರ್ದು ಸಾಹಿತ್ಯದಲ್ಲಿದ್ದ ಅನೇಕ ಉತ್ತಮೋತ್ತಮ ಕೃತಿಗಳನ್ನು ಕನ್ನಡಕ್ಕೆ ತಂದಿದ್ದರು. ಹೀಗೆ ಮಹತ್ವದ ಸಾಹಿತ್ಯ ಕೃತಿಗಳ ಮೂಲಕ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಈ ಎಲ್ಲ ಮಹನೀಯರನ್ನು ನೆನಪಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಟ್ರಸ್ಟ್ ಅಧ್ಯಕ್ಷರಾದ ಪ್ರೊ. ರಾಘವೇಂದ್ರ ಪಾಟೀಲ ಅವರು ಹೇಳಿದರು.
ಡಾ. ಸರಜೂ ಕಾಟ್ಕರ್ ಅವರು ಈ ವಿದ್ವಾಂಸರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ಸಭೆಯಲ್ಲಿ ಸತೀಶ ಕುಲಕರ್ಣಿ, ಆಶಾ ಕಡಪಟ್ಟಿ, ಡಾ. ಸಿ. ಕೆ. ನಾವಲಗಿ, ಪ್ರೊ. ಚಂದ್ರಶೇಖರ ವಸ್ತ್ರದ ಮೊದಲಾದವರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button