Kannada NewsKarnataka News

ಯಡಿಯೂರಪ್ಪ ಜನರ ಏಳ್ಗೆಗಾಗಿ ಶ್ರಮಿಸುತ್ತಿರುವ ಕಾಯಕಯೋಗಿ -ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕಾಂಗ್ರೇಸ್ ಪಕ್ಷದ ವಿರುದ್ಧ ನಾನಾ ಕಾರಣಗಳಿಂದಾಗಿ ಬಂಡೆದ್ದಿದ್ದರಿಂದ ಸ್ಥಿರ ಆಡಳಿತಕ್ಕಾಗಿ ಬಿಜೆಪಿ ಸೇರಬೇಕಾಯಿತು. ನಾನು ತೆಗೆದುಕೊಂಡ ರಾಜಕೀಯ ನಿರ್ಣಯದಿಂದ ಕ್ಷೇತ್ರದ ಮತದಾರರು ಸರ್ವಾನುಮತದಿಂದ ಒಪ್ಪಿ ಬಿಜೆಪಿಗೆ ಎಲ್ಲ ಕಡೆಗಳಲ್ಲೂ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ತಿಳಿಸಿದರು.

ಬುಧವಾರ  ತಾಲೂಕಿನ ಮೇಲ್ಮಟ್ಟಿ, ಕುಂದರಗಿ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೇಸ್ಸಿನ ಸರ್ವಾಧಿಕಾರತ್ವಕ್ಕೆ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದೆ. ಸ್ಪೀಕರ್ ಅವರು ಕಾನೂನು ಬಾಹಿರವಾಗಿ ನಮ್ಮನ್ನು ಅನರ್ಹಗೊಳಿಸಿದ್ದರಿಂದ ಕಾನೂನು ಹೋರಾಟಕ್ಕೆ ಇಳಿಯಬೇಕಾಯಿತು. ಇದರಿಂದ ಕ್ಷೇತ್ರದಲ್ಲಿರುವ ನಮ್ಮ ವಿರೋಧಿಗಳು ಇನ್ನೇನು ರಮೇಶ ಜಾರಕಿಹೊಳಿ ಅವರ ರಾಜಕೀಯ ಮುಗಿಯಿತು ಎಂದು ಹೇಳಿಕೊಳ್ಳುತ್ತಾ ಜನರಿಗೆ ತಪ್ಪು ಸಂದೇಶ ನೀಡಿ ಅಪಪ್ರಚಾರ ಮಾಡಲಾರಂಭಿಸಿದರೆಂದು ಅವರು ಹೇಳಿದರು.

ದೇವರ ಹಾಗೂ ಜನರ ಆಶೀರ್ವಾದದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು. ಯಾವಾಗ ಆದೇಶವು ನಮ್ಮ ಪರವಾಗಿ ಬಂದಿತೋ ಅವಾಗಲೇ ನಮ್ಮ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಇದರಿಂದ ವಿರೋಧಿಗಳ ಪಾಳೆಯದಲ್ಲಿ ನಡುಕ ಹುಟ್ಟಿತು ಎಂದು ಹೇಳಿದರು.

ಪ್ರತಿ ಬಾರಿ ಕಾಂಗ್ರೇಸ್ಸಿನ ಹಸ್ತದ ಚಿನ್ಹೆಯಡಿ ಸ್ಪರ್ಧಿಸುತ್ತಾ ಬರುತ್ತಿದ್ದೆ. ಆದರೀಗ ಕ್ಷೇತ್ರದ ಜನರ ಇಚ್ಚಾನುಸಾರ ಬಿಜೆಪಿಯಿಂದ ಸ್ಪರ್ಧಿಸಿದ್ದು, ಕಮಲ ಹೂವಿನ ಚಿನ್ಹೆಗೆ ಅಮೂಲ್ಯ ಮತ ನೀಡಿ ಮತ್ತೊಮ್ಮೆ ಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಮುಂದುವರೆಯಬೇಕು. ಅವರ ಕೈಗಳನ್ನು ಬಲಪಡಿಸಲು ಹಾಗೂ ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ಬಿಜೆಪಿಗೆ ಆಶೀರ್ವಾದ ಮಾಡಬೇಕು. ಯಡಿಯೂರಪ್ಪನವರು ಮಾತಿಗೆ ತಪ್ಪದ ವ್ಯಕ್ತಿಯಾಗಿದ್ದು, ಇಳಿ ವಯಸ್ಸಿನಲ್ಲೂ ರಾಜ್ಯದ ವಿಕಾಸಕ್ಕೆ ಮತ್ತು ಜನರ ಏಳ್ಗೆಗಾಗಿ ಶ್ರಮಿಸುತ್ತಿರುವ ಕಾಯಕಯೋಗಿ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ಭೀಮಗೌಡ ಪೋಲಿಸ ಪಾಟೀಲ, ಅಡಿವೆಪ್ಪ ನಾವಲಗಟ್ಟಿ, ಶಿವಾನಂದ ತೋಟಗೇರ, ರಾಜು ತಳವಾರ, ಬೋರಪ್ಪ ತಳವಾರ, ನಾಗಪ್ಪ ತಳವಾರ, ಯಲ್ಲಪ್ಪ ಪೂಜೇರಿ, ಅಮೀರಸಾಬ ದೇಸಾಯಿ, ದಸ್ತಗೀರಸಾಬ ದೇಸಾಯಿ, ಇಸ್ಮಾಯಿಲ ಅರಳಿಕಟ್ಟಿ, ಮಹ್ಮದಸಾಬ ದೇಸಾಯಿ, ಬಸವಣ್ಣಿ ದಾಸಗೋಳ, ಪರಸಪ್ಪ ದಾಸಗೋಳ ಮುಂತಾದವರು ಉಪಸ್ಥಿತರಿದ್ದರು.

ರಮೇಶ ಜಾರಕಿಹೊಳಿ ನಂತರ ದಾಸನಟ್ಟಿ, ಗಡ್ಡಿಹೊಳಿ, ಶೀಗಿಹೊಳಿ, ಉರುಬಿನಹಟ್ಟಿ, ಬೆಣಚಿನಮರಡಿ(ಉ), ಕನಸಗೇರಿ, ಮಲೆಬೈಲ ಹಾಗೂ ಕಡಬಗಟ್ಟಿ ಗ್ರಾಮಗಳಿಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚಿಸಿದರು. ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯದ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಯಾರ ಭಯಕ್ಕೂ ಒಳಗಾಗದೇ ಬಿಜೆಪಿಗೆ ಮತ ನೀಡುವಂತೆ ರಮೇಶ ಜಾರಕಿಹೊಳಿ ಕೋರಿದರು.

ಶ್ರೀಗಳ ಭೇಟಿ: ರಮೇಶ ಜಾರಕಿಹೊಳಿ ಅವರು ಕುಂದರಗಿಯ ಅಡವಿಸಿದ್ದೇಶ್ವರಮಠದ ಅಮರೇಶ್ವರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button