
ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ ಚರ್ಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಿಎಂ ಬದಲಾಗುತ್ತಾರೆ ಎಂದು ಹೇಳಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ರಣ್ದೀಪ್ ಸಿಂಗ್ ಸುರ್ಜೇವಾಲಾ ಅವರು 3-4 ದಿನಗಳ ಕಾಲ ರಾಜ್ಯದಲ್ಲಿದ್ದರು. ಎಲ್ಲಾ ಶಾಸಕರು, ಸಚಿವರ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ್ದಾರೆ. ಹಲವರೊಂದಿಗೆ ನೇರವಾಗಿ ಚರ್ಚಿಸಿದ್ದಾರೆ. ಆದರೆ ಸಿಎಂ ಬದಲಾವಣೆಯ ಮಾತು ಎಲ್ಲೂ ಬಂದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಅಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಬಂದಿಲ್ಲ ಎಂದಾಗ ಮಾಧ್ಯಮಗಳು ಸುಖಾ ಸುಮ್ಮನೆ ಸಿಎಂ ಬದಲಾವಣೆಯ ಕುರಿತು ಚರ್ಚೆ ಮಾಡುವುದು ಸರಿಯಲ್ಲ ಎಂದು ನುಡಿದ ಪ್ರಿಯಾಂಕ್ ಖರ್ಗೆ, ಇಂಥಾ ವಿಷಯಗಳನ್ನು ಪಕ್ಷದ ಹೈಕಮ್ಯಾಂಡ್ ನಿರ್ಧರಿಸುತ್ತದೆ. ಸಿಎಂ ಮತ್ತು ಡಿಸಿಎಂ ಕೂಡ ಇದನ್ನೇ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಸಿಎಂ ಮತ್ತು ಡಿಸಿಎಂ ದೆಹಲಿ ಭೇಟಿಯ ಬಳಿಕ ನಾನೇ ಐದು ವರ್ಷ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಅವರ ಅನುಯಾಯಿಗಳು, ಕೆಲವು ಸ್ವಾಮೀಜಿಗಳು ಡಿಕೆಶಿ ಸಿಎಂ ಆಗಬೇಕೆಂದು ಆಗ್ರಹಿಸಿದ್ದರು.