*ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ದಿಗೆ ರೂ.215 ಕೋಟಿ ಯೋಜನೆ: ಎಚ್.ಕೆ.ಪಾಟೀಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಶ್ರೀ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ರಾಜ್ಯ ಸಚಿವ ಸಂಪುಟವು 215 ಕೋಟಿ ರೂ. ಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಇದೇ ಸೆಪ್ಟೆಂಬರ್ 15 ರೊಳಗೆ ಎಲ್ಲ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ(ಜು.26) ಜರುಗಿದ ಪತ್ರಿಕಾಗೊಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ದಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದ್ದು, ಸದರಿ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟದಲ್ಲಿ 215 ಕೋಟಿ ರೂಗಳ ಯೋಜನೆಗಳ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಜಿಲ್ಲಾಧಿಕಾರಿಗಳನ್ನು ಅನುಷ್ಠಾನಾಧಿಕಾರಿಗಳನ್ನಾಗಿ ನೇಮಿಸಿ ಅನುಮೋದನೆ ನೀಡಲಾಗಿದ್ದು, ರೂ. 215 ಕೋಟಿ ರೂ ಗಳ ಅನುದಾನದಡಿ ವಿವಿಧ ಕಾಮಗಾರಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಅಂದಾಜು ರೂ. 215 ಕೋಟಿ ರೂ.ಗಳ ಅನುದಾನದ ಕಾಮಗಾರಿಗಳನ್ನು ಸರಕಾರದ ಅಪೇಕ್ಷಯಂತೆ ಶೀಘ್ರ ಪ್ರಾರಂಭಿಸಬೇಕು. ಈ ಕುರಿತು ಟೆಂಡರ ಕರೆದು ಹಾಗೂ ಕಾರ್ಯಾದೇಶವನ್ನು ನೀಡುವ ಕಾರ್ಯ ಸೆ.15 ರೊಳಗಾಗಿ ಪೂರ್ಣಗೊಳಿಸಬೇಕು. ಡಿ.25 ರೊಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಯಲ್ಲಮ್ಮಗುಡ್ಡದಲ್ಲಿ ವಸತಿಗೃಹ, ಅತಿಥಿಗೃಹ ನಿರ್ಮಿಸಿಕೊಡಲು ಅನೇಕ ದಾನಿಗಳು ಮುಂದೆ ಬರುತ್ತಿದ್ದು, ಅವರಿಗೆ ಅಗತ್ಯ ಜಾಗೆಯನ್ನು ನೀಡಲಾಗುವುದು. ಅಲ್ಲಿ ನಿರ್ಮಿಸಲಾಗುವ ಕಟ್ಟಡವು ದೇವಸ್ಥಾನಕ್ಕೆ ಸೇರಲಿದೆ.
ದಾನಿಗಳ ಜತೆ ಒಡಂಬಡಿಕೆ ಮಾಡಿಕೊಂಡು ಅತಿಥಿಗೃಹ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ದೇವಸ್ಥಾನದ ವತಿಯಿಂದಲೇ ವಿನ್ಯಾಸ ಒದಗಿಸಲಾಗುವುದು.
ಆಗಸ್ಟ್ 26, 2025 ಕ್ಕೆ ದಾನಿಗಳ ಸಭೆ ಕರೆದು ಯೋಜನೆಯನ್ನು ವಿವರಿಸಲಾಗುವುದು. ನಂತರ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ರೂ. 215 ಕೋಟಿ ವೆಚ್ಚದಲ್ಲಿ 97 ಕೋಟಿ ರೂಪಾಯಿ ದೇವಸ್ಥಾನ ಅಭಿವೃದ್ದಿ ಮಂಡಳಿಯಿಂದ ನೀಡಲಾಗುತ್ತದೆ. ಎಸ್.ಎ.ಎಸ್.ಸಿ.ಐ. ಸಾಲ ಯೋಜನೆಯಡಿ ಕೇಂದ್ರ ಸರಕಾರ 100 ಕೋಟಿ ರೂಪಾಯಿ ಸಾಲ ಒದಗಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿಶ್ವಾಸ ವೈದ್ಯ, ಜಿಲ್ಲಾಧಿಕಾರಿ ಮೊಹಮ್ಮದ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ. ಸಿ.ಇ.ಓ. ರಾಹುಲ್ ಶಿಂಧೆ ಉಪಸ್ಥಿತರಿದ್ದರು.