
ಪ್ರಗತಿವಾಹಿನಿ ಸುದ್ದಿ: ಹಿರಿಯ ರಂಗಕರ್ಮಿ, ಹಾಸ್ಯ ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಉಡುಪಿ ಜಿಲ್ಲೆಯ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜು ತಾಳಿಕೋಟೆ ಕೊನೆಯುಸಿರೆಳೆದಿದ್ದಾರೆ.
ಧಾರವಾಡ ರಂಗಾಯಣದ ನಿರ್ದೇಶಕರಾಗಿ, ರಂಗಕರ್ಮಿಯಾಗಿ, ಹಾಸ್ಯ ನಟನಾಗಿ ಜನಪ್ರಿಯರಾಗಿದ್ದ ರಾಜು ತಾಳಿಕೋಟೆ, ನಿನ್ನೆ ಭಾನುವಾರದಿಂದ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶೈನ್ ಶೆಟ್ಟಿ ನಟನೆಯ ಹೊಸ ಚಿತ್ರದಲ್ಲಿ ನಟಿಸಲೆಂದು ಶೂಟಿಂಗ್ ಗಾಗಿ ಉಡುಪಿಗೆ ಬಂದುದ್ದರು, ಚಿತ್ರೀಕರಣ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದಾಗ ರಾಜು ತಾಳಿಕೋಟೆಯವರಿಗೆ ಹೃದಯಾಘಾತವಾಗಿದೆ.
ತಕ್ಷಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆಯೂ ರಾಜು ತಾಳಿಕೋಟೆಯವರಿಗೆ ಹೃದಯಾಘಾತವಾಗಿತ್ತು, ಶಸ್ತ್ರಚಿಕಿತ್ಸೆ ಬಳಿಕ ಸ್ಟಂಟ್ ಅಳವಡಿಸಲಾಗಿತ್ತು. ಈಗ ಒತ್ತಡದಿಂದಾಗಿ ಮತ್ತೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದಲ್ಲಿ ನಾಳೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಪುತ್ರ ಮಾಹಿತಿ ನೀಡಿದ್ದಾರೆ. ಹಿರಿಯ ನಟನ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.