*ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು: ಡಾ. ಶಶಿಧರ ನರೇಂದ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೇಖಕ ತಾನು ಬರೆದುದನ್ನೇ ಮತ್ತೆ ಮತ್ತೆ ಓದಿ ತಿದ್ದುಪಡಿ ಮಾಡಿಕೊಳ್ಳಬೇಕು. ಸ್ವವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ತಾನು ಬರೆದುದು ಪ್ರಕಟಣೆಗೆ ಯೋಗ್ಯವಾಗಿದೆಯಾ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಕಟಣೆಗೆ ಅವಸರ ಪಡಬಾರದು. ಅಂದಾಗ ಮಾತ್ರ ಮೌಲ್ಯಯುತ ಕೃತಿಗಳು ಆತನಿಂದ ಹೊರಬರಲು ಸಾಧ್ಯ ಎಂದು ರಂಗಕರ್ಮಿ
ಲೇಖಕ ಧಾರವಾಡದ ಡಾ. ಶಶಿಧರ ನರೇಂದ್ರ ಹೇಳಿದರು.
ನಗರದ ಹಿಂದವಾಡಿಯಲ್ಲಿರುವ ಐಎಂಇಆರ್ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು 2025 ರ ಸಿರಿಗನ್ನಡ ಗೌರವ ಪ್ರಶಸ್ತಿ, 2024 ರ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಮತ್ತು ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಡಾ.ಶಶಿಧರ ನರೇಂದ್ರ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮೌಲ್ಯಮಾಪಕರ ಪರವಾಗಿ ಮಾತನಾಡಿದ ಕಾದಂಬರಿಕಾರ ಉಜಿರೆಯ ಡಾ. ಹಳೆಮನಿ ರಾಜಶೇಖರ ಅವರು ಮಾತನಾಡುತ್ತ, ಲೇಖಕನಿಗೆ ಓದುಗರು, ನಾಟಕಕಾರರಿಗೆ ಪ್ರೇಕ್ಷಕರು ದೇವರಿದ್ದಂತೆ. ಅವರನ್ನು ತೃಪ್ತಿ ಪಡಿಸುವ, ಮನಸ್ಸನ್ನು, ಸಂವೇದನೆಯನ್ನು ಅರಳಿಸಲು ಚಡಪಡಿಸದ ಲೇಖಕ ಹೊಸದನ್ನೇನೂ ಸೃಷ್ಟಿಸಲಾರ. ಓದುಗರು ಓದಲಿ ಬಿಟ್ಟರೆ ಬಿಡಲಿ ಎಂದು ಬರೆಯುವ ಬರೆಹಗಾರ ಆತ್ಮವಂಚನೆ ಮಾಡಿಕೊಂಡಂತೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಬಿ. ದೇಶಪಾಂಡೆಯವರು ಮಾತನಾಡತ್ತಾ ಸಂಸ್ಥೆಗಳನ್ನು ಮುಂದೊರಿಸಿಕೊಂಡು ಹೋಗಲು ಯುವಕರ ಅವಶ್ಯಕತೆಯಿದ್ದು ಪಠ್ಯೇತರ ಚಟುಗಳಲ್ಲಿಯೂ ಮಕ್ಕಳು ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ರಂಗಭೂಮಿಯಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಡಾ. ಅರವಿಂದ ಕುಲಕರ್ಣಿ ಮತ್ತು ಅನುವಾದ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿರುವ ಪ್ರೊ. ಚಂದ್ರಕಾಂತ ಪೋಕಳೆಯವರಿಗೆ 2025ನೇ ವರ್ಷದ ಸಿರಿಗನ್ನಡ ಗೌರವ ಪ್ರಶಸ್ತಿ ಹಾಗೂ ಪಾರ್ವತಿ ಪಿಟಗಿಯವರು ರಚಿಸಿರುವ ‘ಪುನರುತ್ಥಾನ’ (ಕಾದಂಬರಿ) ಮತ್ತು ನಾಗೇಶ ನಾಯಕ ರಚನೆಯ ‘ಮನುಷ್ಯರಿಲ್ಲದ ನೆಲ'(ಕವನ ಸಂಕಲನ) ಕೃತಿಗಳಿಗೆ 2024ನೇ ವರ್ಷದ ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಸಮಾರಂಭದಲ್ಲಿ ದತ್ತಿನಿಧಿ ಪುಸ್ತಕ ಪ್ರಶಸ್ತಿ ವಿಜೇತರಾದ ರೀಟಾ ಬಣಗಾರ ‘ಮೊದಲ ಧ್ವನಿ’ ಎಲ್.ಎಸ್. ಶಾಸ್ತ್ರಿ ‘ಎಂಥ ಮರುಳಯ್ಯ ಇದು ಎಂಥಾ ಮರಳೋ’ ರಾಜೇಂದ್ರಸ್ವಾಮಿ ಹಿರೇಮಠ ‘ಚಿಣ್ಣರ ಚಿಗುಳಿ’ ಮಂಜುನಾಥ ಕಳಸಣ್ಣವರ (ಗಂಡು ಮೆಟ್ಟಿನ ರಾಣಿ), ಡಾ. ವಾಯ್. ಎಂ. ಯಾಕೊಳ್ಳಿ ‘ಅಮೃತದ ತೊಟ್ಟು’ ಮಧುರಾ ಕರ್ಣಂ ‘ಬೌದ್ಧಾವತಾರ’ ಎಂ. ಬಿ. ಹೂಗಾರ ‘ಭವಕೆ ಬಂದ ಬೆಳಕು’ ಸುರೇಶ ದೇಸಾಯಿ ‘ಸಾಹಿತ್ಯ ಸರಸ್ವತಿಯರು’ ಡಾ. ಪ್ರಭಾ ಬೋರಗಾಂವಕರ ‘ಹೆಣ್ಣು ಹುಣ್ಣಲ್ಲ ಹೂವು’ ಲೇಖಕರನ್ನು ವೇದಿಕೆ ಮೇಲೆ ಶಾಲು ಹೊದಿಸಿ, ನಗದು ಹಣ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಾಧನೆ ಮತ್ತು ಸೇವೆಗಾಗಿ ನೀಡುವ ದತ್ತಿನಿದಿ ಪ್ರಶಸ್ತಿಗಳಿಗೆ ಭಾಜನರಾದ ಡಾ. ದಯಾನಂದ ನೂಲಿ (ಜೀವಮಾನ ಸಾಧನೆ), ವಿಜಯಲಕ್ಷ್ಮೀ ವೆಂಕಟೇಶ ಕುಲಕರ್ಣಿ (ಸಾಮಾಜಿಕ ಸೇವೆ), ಹಮೀದಾ ಬೇಗಂ ದೇಸಾಯಿ (ಜೀವಮಾನ ಸಾಧನೆಗಾಗಿ ಮಹಿಳೆ), ನಿರಜಾ ಗಣಾಚಾರಿ (ಶ್ರೇಷ್ಠ ಶಿಕ್ಷಕ ಸಾಹಿತಿ), ಡಾ. ವಿ. ಎಸ್. ಮಾಳಿ (ವೈಚಾರಿಕ ಸಂಪನ್ಮೂಲ ವ್ಯಕ್ತಿ), ಡಾ. ಜ್ಯೋತಿರ್ಲಿಂಗ ಹೊನಕಟ್ಟಿ (ಜನಪದ ಕಲಾವಿದ) ಇವರನ್ನು ವೇದಿಕೆ ಮೇಲೆ ಶಾಲು ಹೊದಿಸಿ, ನಗದು ಹಣ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

