
ಪ್ರಗತಿವಾಹಿನಿ ಸುದ್ದಿ: 2000 ರೂಪಾಯಿ ಹಣಕ್ಕಾಗಿ ಗಂಡ-ಹೆಂಡತಿ ನಡುವೆ ಜಗಳ ಆರಂಭವಾಗಿ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸುಮಾ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಎಂಟು ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ಸುಮಾ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಸ್ವಸಹಾಯ ಸಂಘದ ಕಂತು ಕಟ್ಟಲೆಂದು ಸುಮಾ 2000 ಹಣವನ್ನು ಮನೆಯಲ್ಲಿ ಎತ್ತಿಟ್ಟಿದ್ದರು. ಈ ಹಣವನ್ನು ಪತಿ ಚಂದ್ರಶೇಖರ್ ಯಾವುದೋ ಸಬೂಬು ಹೇಳಿ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ.
ಕಂತು ಕಟ್ಟಲೆಂದು ಇಟ್ಟಿದ್ದ ಹಣವನ್ನೂ ಪತಿ ಬಳಸಿಕೊಂಡಿದ್ದಕ್ಕೆ ಪತ್ನಿ ಸುಮಾ ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಜಗಳವಾಡಿ ಪತಿ ತನ್ನಪಾಡಿಗೆ ತಾನು ಕೆಲಸಕ್ಕೆ ಹೋಗಿದ್ದಾನೆ. ಪತಿಯ ಬೈಗುಳ, ಗಲಾಟೆಗೆ ತೀವ್ರವಾಗಿ ಮನನೊಂದ ಸುಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲಸದಿಂದ ಮನೆಗೆ ಬಂದು ನೋಡಿದ ಪತಿ ಶಾಕ್ ಆಗಿದ್ದಾನೆ. ಪತ್ನಿ ನೇಣಿಗೆ ಕೊರಳೊಡ್ಡಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾಳೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




