*ಸರ್ವೀಸ್ ಸೆಂಟರ್ ನಲ್ಲಿ ಅಗ್ನಿ ಅವಘಡ: ಐಷಾರಾಮಿ ಕಾರುಗಳು ಸುಟ್ಟು ಭಸ್ಮ*

ಪ್ರಗತಿವಾಹಿನಿ ಸುದ್ದಿ: ಕಾರ್ ಸರ್ವೀಸ್ ಸೆಂಟರ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ಸುಮಾರು 20 ಕ್ಕೂ ಹೆಚ್ಚು ಐಷಾರಾಮಿಕಾರುಗಳು ಸುಟ್ಟು ಭಸ್ಮವಾಗಿವೆ.
ವಿಜಯಪುರ ನಗರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇರುವ ಹನಮಂತ ಕನಮಡಿ ಅವರಿಗೆ ಸೇರಿದ ಹೆಚ್ಎಂಕೆ ಸರ್ವೀಸ್ ಸೆಂಟರ್ನಲ್ಲಿ ರಿಪೇರಿ ಮತ್ತು ಸರ್ವಿಸ್ಗಾಗಿ ನಿಲ್ಲಿಸಲಾಗಿದ್ದ ವಿವಿಧ ಕಂಪನಿಗಳ ಕಾರುಗಳು ಸುಟ್ಟು ಭಸ್ಮವಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಇಡೀ ಸರ್ವಿಸ್ ಸೆಂಟರ್ ಸುಟ್ಟು ಕರಕಲಾಗಿದ್ದು, ಅಂಗಡಿಯಲ್ಲಿ ಇಟ್ಟಿದ್ದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಕಾರಿನ ಬಿಡಿಭಾಗಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಸುಟ್ಟುಹೋದ ಕಾರುಗಳ ಒಟ್ಟು ಮೌಲ್ಯ ಒಂದು ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಅದೃಷ್ಟವಶಾತ್, ಘಟನೆ ಸಮಯದಲ್ಲಿ ಸರ್ವೀಸ್ ಸೆಂಟರ್ನಲ್ಲಿ ಯಾರೂ ಇಲ್ಲದಿರುವ ಕಾರಣ ಸಾವು-ನೋವು ಸಂಭವಿಸಿಲ್ಲ. ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಸುತ್ತಮುತ್ತ ವ್ಯಾಪಿಸದಂತೆ ಹರಸಾಹಸ ಪಟ್ಟು ನಿಯಂತ್ರಣಕ್ಕೆ ತಂದರು.
ಆದರೆ ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಇನ್ನೂ ಘಟನಾ ಸ್ಥಳಕ್ಕೆ ಗೋಲಗುಂಬಜ್ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



