*ಪಟ್ಟಿಯಲ್ಲಿ ಹೆಸರಿದ್ದರೂ ಕೊನೇ ಕ್ಷಣದಲ್ಲಿ ಕೈತಪ್ಪಿದ ಸಚಿವ ಸ್ಥಾನ: ಮಂಕಾಳು ವೈದ್ಯ ಬದಲು ಎಸ್.ಎಸ್.ಮಲ್ಲಿಕಾರ್ಜುನಗೆ ಮಂತ್ರಿ ಪಟ್ಟ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆ ಸಂಬಂಧ 20 ನೂತನ ಮಂತ್ರಿಗಳ ಹೆಸರನ್ನು ಎಐಸಿಸಿ ಪ್ರಕಟಿಸಿದೆ. ಎಐಸಿಸಿಯಿಂದ ಪಟ್ಟಿ ಪ್ರಕಟವಾದ ಬಳಿಕವೂ ಲಿಸ್ಟ್ ನಲ್ಲಿ ಬದಲಾವಣೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಹೈಕಮಾಂಡ್ ಕಳುಹಿಸಿದ ಪಟ್ಟಿಯಲ್ಲಿ ಹೆಸರಿದ್ದ ಹೊರತಾಗಿಯೂ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಈ ವಿಚಾರವಾಗಿ ಎಐಸಿಸಿ ಸ್ಪಷ್ಟನೆ ನೀಡಿದ್ದು, ನೂತನ ಸಚಿವರ ಪಟ್ಟಿಯಲ್ಲಿ ಮಂಕಾಳು ವೈದ್ಯ ಹೆಸರಿರಲಿಲ್ಲ. ಇದು ಕೇವಲ ಟೈಪಿಂಗ್ ಮಿಸ್ಟೇಕ್ ಆಗಿ ಪ್ರಮಾದವಾಗಿತ್ತು ಎಂದು ತಿಳಿಸಿದೆ. ಮಂಕಾಳು ವೈದ್ಯ ಅವರ ಹೆಸರಿದ್ದ ಜಾಗದಲ್ಲಿ ಈಗ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿರುವ ಎಸ್.ಎಸ್.ಮಲ್ಲಿಕಾರ್ಜುನ ಅವರ ಹೆಸರನ್ನು ಪ್ರಕಟಿಸಲಾಗಿದೆ.
ಮಂಕಾಳು ವೈದ್ಯಗೆ ಕೊಕ್ ನೀಡಿ ಎಸ್.ಎಸ್.ಮಲ್ಲಿಕಾರ್ಜುನಗೆ ಮಂತ್ರಿ ಸ್ಥಾನ ನೀಡಲಾಗಿದೆ. ಪಟ್ಟಿಯಲ್ಲಿ ಒಮ್ಮೆ ಹೆಸರು ಪ್ರಕಟಿಸಿ ಬಳಿಕ ಡಿಲಿಟ್ ಮಾಡಿ ಮಲ್ಲಿಕಾರ್ಜುನ ವರಿಗೆ ಸ್ಥಾನ ನೀಡಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಗಿದೆ.
ಈ ನಡುವೆ ಎಐಸಿಸಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ್ದನ್ನು ಗಮನಿಸಿದ ಎಸ್.ಎಸ್.ಮಲ್ಲಿಕಾರ್ಜುನ್, ತನಗೆ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಇಡೀ ಕುಟುಂಬ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಶಾಸಕ ಸ್ಥಾನಕ್ಕೆ ನಾನು, ನನ್ನ ಪತ್ನಿ ಪ್ರಭಾ ಹಾಗೂ ಪುತ್ರ ಸಮರ್ಥ್ ಮೂವರೂ ರಾಜೀನಾಮೆ ಕೊಟ್ಟು ಹೊರ ನಡೆಯುವುದಾಗಿ ಹೇಳಿದ್ದಾರೆ. ಇದೇ ಕಾರಣಕ್ಕೆ ಕೊನೇ ಕ್ಷಣದಲ್ಲಿ ಮಂಕಾಳು ವೈದ್ಯ ಬದಲಾಗಿ ಎಸ್.ಎಸ್.ಮಲ್ಲಿಕಾರ್ಜುನಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.




