ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದ್ದು, ಯುವತಿಗೆ ಕೆಪಿಟಿಸಿಎಲ್ ನಲ್ಲಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಸಚಿವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.
ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯುವತಿಗೆ ಹಾಗೂ ಯುವತಿಯ ಇಡೀ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಯುವತಿ ಕುಟುಂಬದವರ ಮನವಿ ಮೇರೆಗೆ ಅವರ ಪರವಾಗಿ ನಾನು ಕಮೀಷ್ನರ್ ಅವರಿಗೆ ದೂರು ನೀಡಲು ಬಂದಿದ್ದೇನೆ ಎಂದರು.
ಉತ್ತರ ಕರ್ನಾಟಕ ಮೂಲದ ಯುವತಿ ಬೆಂಗಳೂರಿನ ಆರ್.ಟಿ.ನಗರದ ವಸತಿ ನಿಲಯದಲ್ಲಿ ವಾಸವಿದ್ದು, ಯುವತಿ ಕಿರುಚಿತ್ರ ನಿರ್ಮಾಣ ಕುರಿತು ಮಾತನಾಡಲು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಳು. ಡ್ರೋಣ್ ಕ್ಯಾಮೆರಾ ಮೂಲಕ ಡ್ಯಾಂ ಚಿತ್ರೀಕರಣಕ್ಕೆ ಅವಕಾಶ ಕೋರುತ್ತಾಳೆ. ಈ ವೇಳೆ ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡುವುದಾಗಿ ಆಮಿಷವೊಡ್ಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಕೃತ್ಯದ ಬಳಿಕ ಯುವತಿಯನ್ನು ಸೈಡ್ ಲೈನ್ ಮಾಡಿದ್ದಾರೆ. ಕೆಲದಿನಗಳಾದರೂ ಯುವತಿಗೆ ಕೆಲಸ ನೀಡದಿದ್ದಾಗ ಯುವತಿ ಕಂಗಾಲಾಗಿದ್ದಾಳೆ. ಸಚಿವರಿಗೆ ಯುವತಿ ಬಳಿ ತನ್ನ ವಿಡಿಯೋ ಇರುವ ಬಗ್ಗೆ ಗೊತ್ತಾಗಿದೆ. ಆಗ ಯುವತಿಗೆ ಹಾಗೂ ಕುಟುಂಬದವರಿಗೆ ಸಿಡಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ವಿಷಯ ಬಹಿರಂಗವಾದರೆ ಪರಿಣಾಮ ಸರಿಯಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸಚಿವರ ರಾಸಲೀಲೆ ಸಿಡಿ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಇದು ಬ್ಲಾಕ್ ಮೇಲಾ ಅಥವಾ ಸಚಿವರಿಂದ ಯುವತಿಗೆ ಮೋಸ ಮಾಡಲಾಗಿದೆಯೇ ಎಂಬುದು ಗೊತ್ತಾಗಬೇಕು. ಯುವತಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
BIG NEWS: ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆ; ದೂರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ