
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ 130-135 ಸೀಟು ಗೆದ್ದು ತೋರಿಸುತ್ತೇನೆ. ಸಿದ್ದರಾಮಯ್ಯ ಅವರನ್ನು ಮುಂದಿನ ಬಾರಿಯೂ ಪ್ರತಿಪಕ್ಷದಲ್ಲಿ ಕೂರಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ತೊಡೆತಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಯಾರೀಗೂ ಹೊರೆಯಾಗದ ಜನಸ್ನೇಹಿ ಬಜೆಟ್ ಮಂಡಿಸಿದ್ದೇನೆ. ಸಂಕಷ್ಟದ ಪರಿಸ್ಥಿಯಲ್ಲಿ ಕೂಡ ಮಂಡಿಸಿದ ರಾಜ್ಯದ ಐತಿಹಾಸಿಕ ಬಜೆಟ್ ಇದಾಗಿದೆ. ಎಲ್ಲಾ ವಲಯಗಳಿಗೂ, ಸಮುದಾಯಗಳಿಗೂ ಅನುದಾನ ನೀಡಿದ್ದೇನೆ. ಒಂದು ರೂಪಾಯಿ ತೆರಿಗೆ ಹಾಕಿಲ್ಲ ಎಂದರು.
ಬಜೆಟ್ ಮಂಡನೆ ವೇಳೆ ವಿಪಕ್ಷಗಳು ಹೊರ ನಡೆದ ಘಟನೆ ಕೇಂದ್ರ ಅಥವಾ ರಾಜ್ಯದಲ್ಲಿ ನಡೆದಿದೆಯಾ? ಬಜೆಟ್ ಮಂಡನೆ ಮುಗಿದ ಬಳಿಕ ಸದನದಲ್ಲಿ ಚರ್ಚೆ ಮಾಡಬೇಕಿತ್ತು. ಹಾಗೆ ಮಾಡಲು ಅವರಿಗೆ ನೈತಿಕತೆಯಿಲ್ಲ. ವಿಪಕ್ಷವಾಗಿ ಬಜೆಟ್ ಮಂಡನೆ ವೇಳೆ ಸದನದಲ್ಲಿ ಇರಬೇಕಿತ್ತು. ಅದನ್ನು ಬಿಟ್ಟು ವಾಕೌಟ್ ಮಾಡಿದ್ದು ಸರಿಯಲ್ಲ. ಸಿದ್ದರಾಮಯ್ಯ ಶಾಶ್ವತವಾಗಿ ವಿರೋಧ ಪಕ್ಷದಲ್ಲೇ ಉಳಿಯುವಂತೆ ಮಾಡುತ್ತೇನೆ ಎಂದು ಗುಡುಗಿದರು.