Kannada NewsKarnataka News

ಬೆಳಗಾವಿ: ಕಂಠ ಪೂರ್ತಿ ಕುಡಿಸಿ ಪತಿಯ ಕಂಠ ಕೊಯ್ದ ಪತ್ನಿ ; ಮೂರನೇ ಪತ್ನಿಯಿಂದ ಪತಿರಾಯನ ಬರ್ಬರ ಕೊಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಮೂರನೇ ಪತ್ನಿಯಿಂದ ಪತಿರಾಯ ಬರ್ಬರವಾಗಿ ಕೊಲೆಯಾದ ಪ್ರಕರಣ ಕುಂದಾನಗರಿಯಲ್ಲಿ ನಡೆದಿದೆ. ಕಳೆದವಾರ ಇಷ್ಟ ಪಟ್ಟು ಮದುವೆಯಾದ ಮೂರನೇ ಪತ್ನಿಯಿಂದ ಪತಿರಾಯ( ಗಜಾನನ ) ಕೊಲೆಯಾಗಿದ್ದಾರೆ.
ಘಟನೆಯ ವಿವರ; 
ಗಜಾನನ ಅವರು  ಎರಡು ಮದುವೆಯಾಗಿದ್ದರು. ಆದರೆ ಇಬ್ಬರೂ ಪತ್ನಿಯರೂ ಆತನನ್ನು ಬಿಟ್ಟು ಹೋಗಿದ್ದರು. ಬಳಿಕ ಎರಡನೇ ಪತ್ನಿಯ ಮಗನೊಂದಿಗೆ ಗಜಾನನ ಬೆಳಗಾವಿಯ ಬೆಳಗುಂದಿಯಲ್ಲಿ ಬೇಕರಿ ನಡೆಸುತ್ತಿದ್ದರು. ಈ ಸಮಯದಲ್ಲಿ ವಿಧವೆಯಾದ ವಿದ್ಯಾ ಪಾಟೀಲ್​​ ಜತೆಗೆ ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.ಈಕೆ ತನ್ನ ಇಬ್ಬರು ಮಕ್ಕಳ ಜೊತೆ ಗಜಾನನ ಜೊತೆಗೆ ವಾಸವಿದ್ದಳು.
ನಂತರ ಗಜಾನನ ಸಾಲ ಮಾಡಿ ಮೂರನೇ ಪತ್ನಿಗೆ ಮನೆ ಕಟ್ಟಿಸಿ ಕೊಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಮುಚ್ಚಿ ಆರ್ಥಿಕ ನಷ್ಟದ ಹಿನ್ನೆಲೆ ಮನೆ ಮಾರಾಟ ಮಾಡಲು ಗಜಾನನ ವಿದ್ಯಾ ಪಾಟೀಲ್‌ಗೆ ಒತ್ತಾಯಿಸುತ್ತಿದ್ದರಂತೆ. ಇಲ್ಲವಾದರೆ ತನ್ನ ಜೊತೆ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರಂತೆ. ಹೀಗಾಗಿ ಗಜಾನನ ನಾಯ್ಕ್ ಹತ್ಯೆಗೆ ವಿದ್ಯಾ ಪಾಟೀಲ್​​ ಸಂಚು ರೂಪಿಸಿದ್ದಾರೆ.
ಫೆ.26ರ ರಾತ್ರಿ ಮನೆಗೆ ಬರುತ್ತೇನೆ, ನಿನ್ನ ಮಗನನ್ನು ಊರಿಗೆ ಕಳುಹಿಸು ಎಂದು ವಿದ್ಯಾ ಗಜಾನನ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಪತ್ನಿಯ ಮಾತು ಕೇಳಿ ಗಜಾನನ ಅವರು ಮಗನ‌ನ್ನು ಬಸೂರ್ತೆ ಗ್ರಾಮಕ್ಕೆ ಬಿಟ್ಟು ಬಂದಿದ್ದರು. ಅಂದು ರಾತ್ರಿ ಗಜಾನನ ನಾಯ್ಕ್ ಮನೆಗೆ ಬಂದಿದ್ದ ವಿದ್ಯಾ ಪಾಟೀಲ್ ಪತಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿ, ಪುತ್ರ ಹೃತಿಕ್, ತನ್ನ ಸ್ನೇಹಿತ ಪರಶುರಾಮ ಗೋಂದಳಿ ಯನ್ನು ಗಜಾನನ ಮನೆಗೆ ಮಧ್ಯರಾತ್ರಿ ಕರೆಸಿದ್ದಾಳೆ. ಈ ವೇಳೆ ಹರಿತವಾದ ಆಯುಧದಿಂದ ಕತ್ತು ಸೀಳಿ ಗಜಾನನ ನಾಯ್ಕ್ ಹತ್ಯೆ ಮಾಡಿ, ಮೂವರು ಪರಾರಿಯಾಗಿದ್ದಾರೆ.
ಫೆ.27 ರಂದು ಗಜಾನ‌ನ ಮಗ ಅವಧೂತ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾ ಪಾಟೀಲ್ ಮೇಲೆ ಅವಧೂತ್​ ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆ ಪೋಲಿಸರು ಈ ಹತ್ಯೆ ಪ್ರಕರಣ ಸಂಬಂಧ ಮೃತನ ಪತ್ನಿ ವಿದ್ಯಾ ಪಾಟೀಲ್​​, ಆಕೆಯ ಪುತ್ರ ಹೃತಿಕ್​​ ಹಾಗೂ ಸ್ನೇಹಿತ‌ ಪರಶುರಾಮ ಗೋಂದಳಿಯನ್ನು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button