Belagavi NewsBelgaum NewsKannada NewsKarnataka News

ಸಿದ್ದರಾಮಯ್ಯನವರಿಂದ ಸಣ್ಣ ಸಮುದಾಯಕ್ಕೆ ದೊಡ್ಡ ಕೊಡುಗೆ – ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಶ್ವ ಕರ್ಮ ನಿಗಮ ಸ್ಥಾಪನೆ ಮತ್ತು ವಿಶ್ವ ಕರ್ಮ ಜಯಂತಿ ಆಚರಣೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ರವಿವಾರ (ಸೆ.17) ರಂದು ಏರ್ಪಡಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಕರ್ಮ ಸಮಾಜ ಹಿಂದುಳಿದ ಸಮಾಜ ಎನ್ನುವ ಭಾವನೆ ಯಾರಿಗೂ ಬೇಡ. ಪ್ರಪಂಚವನ್ನು ಭೂ ಪುಟದಲ್ಲಿ ದಾಖಲಿಸಿದವರೇ ವಿಶ್ವಕರ್ಮರು. ಏನನ್ನೇ ಕೊಟ್ಟರೂ ಕಸದಿಂದ ರಸ ತಯಾರಿಸುವವರು ನೀವು. ನಿಮ್ಮ ಸಮಾಜವನ್ನು ಮುನ್ನೆಲೆಗೆ ತರುವಲ್ಲಿ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಸರಕಾರವನ್ನು, ಮುಖ್ಯಮಂತ್ರಿಗಳನ್ನು ಸ್ಮರಿಸಬೇಕು. ಉಪಕಾರ ಮಾಡಿದವರ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯ ಎಂದು ಹೆಬ್ಬಾಳಕರ್ ಹೇಳಿದರು.

ಇಡೀ ವಿಶ್ವವನ್ನು ವಿಶ್ವದ ಪುಟದಲ್ಲಿ ಚಿತ್ರೀಕರಣ ಮಾಡಿದ ಬ್ರಹ್ಮ ವಿಶ್ವಕರ್ಮ ಹೀಗೇ ವಿಶ್ವ ಕರ್ಮ ಸಮುದಾಯ ಜಗತ್ತು ಸುಂದರವಾಗಿ ಕಾಣಲು ಸುಂದರ ವಸ್ತುಗಳನ್ನು ಕೊಡುವುದರ ಜೊತೆಗೆ ತಮ್ಮ ಜೀವನವನ್ನು ಸಹ ಸುಂದರವಾಗಿಸಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದರು.

ವಿಶ್ವಕರ್ಮ ಸಮಾಜ ಕಸದಿಂದ ರಸಗಳನ್ನು ಮಾಡಿ, ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಒಡವೆ ಆಭರಣ, ರೈತರ ಸಲಕರಣೆ ಕೊಡುವುದರ ಜೊತೆಗೆ ತ್ಮಮ ಜೀವನವನ್ನು ವಿವಿಧ ಕ್ಷೇತ್ರಗಳಲ್ಲಿಯೂ ಸಹ ಅಭಿವೃದ್ಧಿಗೊಳಿಸಿಕೊಳ್ಳಬೇಕು. ಪ್ರತಿ ದಿನ ಸಮಾಜ ನಿಮ್ಮನ್ನು ನೆನೆಸುವಂತಹ ರೀತಿಯಲ್ಲಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಕಾರ್ಯಕ್ಕೆ ನಾವೆಲ್ಲ ಋಣಿಯಾಗಿದ್ದೇವೆ ಎಂದು ಹೆಬ್ಬಾಳಕರ್ ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ರಾಜ್ಯದ ಜನರಿಗೆ, ಮಹಿಳೆಯರಿಗೆ ಸಾಕಷ್ಟು ಕೊಡುಗೆಗಗಳನ್ನು ನೀಡಿದೆ. ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಮೂಲಕ ಪ್ರತಿ ಮನೆ ಮನೆಗೆ ನೆರವಾಗುವ ಕೆಲಸವನ್ನು ಮಾಡಿದ್ದೇವೆ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ವಿವರಿಸಿದರು.

ಒಟ್ಟಾಗಿ ಚಿಂತನೆ ನಡೆಸೋಣ – ಸತೀಶ್ ಜಾರಕಿಹೊಳಿ

ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ವಿಶ್ವ ಕರ್ಮ ಸಮುದಾಯ ಹಿಂದಿನ ಕಾಲದಲ್ಲಿ ಯಾವುದೇ ಉಪಕರಣಗಳನ್ನು ಬಳಸದೆ ಕಲ್ಲು, ಕಟ್ಟಿಗೆ, ಕಬ್ಬಿ,ಣ ಹಾಗೂ ಬಂಗಾರದಂತಹ ವಸ್ತುಗಳಿಂದ ಸುಂದರವಾದ ಕಲಾಕೃತಿಯ ನಿರ್ಮಾಣ ಮಾಡಿ ಸಮಾಜವನ್ನು ಸುಂದರಗೊಳಿಸಿದ ಸಮುದಾಯ ಎಂದು ಹೇಳಿದರು.

ವಿಶ್ವಕರ್ಮ ಸಮುದಾಯ ರೈತರಿಗೆ ಅನುಕೂಲವಾಗುವ ಸಲಕರಣೆ, ಶಾಲೆ ನಿರ್ಮಾಣ, ದೇಗುಲಗಳ ಮೂರ್ತಿಗಳ ಕೆತ್ತನೆ, ಕಾಲುವೆ ನಿರ್ಮಾಣ, ದಿನ ಬಳಕೆ ಗೃಹ ವಸ್ತುಗಳು, ಮಹಿಳೆಯರಿಗೆ ಉಪಯೋಗವಾಗುವ ವಸ್ತುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದೆ ಎಂದು ಹೇಳಿದರು.

ಸಮುದಾಯದವರು ತಮ್ಮ ವೃತ್ತಿಯ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸಿದರೆ ಮಾತ್ರ ವಿಶ್ವಕರ್ಮ ಜಯಂತೋತ್ಸವ ಆಚರಣೆ ಅರ್ಥಪೂರ್ಣವಾಗುವುದೆಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.

ನಮ್ಮ ಸರಕಾರ ಸಾಕಷ್ಟು ಅಬಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ನೀವೆಲ್ಲ ನಮ್ಮ ಜೊತೆಗೆ ನಿಲ್ಲಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಸಮಾಜದ ಕುಂದುಕೊರತೆಗಳನ್ನು ಈಡೇರಿಸಲು ಒಟ್ಟಾಗಿ ಚಿಂತನೆ ನಡೆಸೋಣ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆಸಿಫ್ (ರಾಜು) ಸೇಠ್ ಅವರು ನಮ್ಮ ಸರಕಾರದ ಜನಪರ ಯೋಜನೆಗಳನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಇವತ್ತಿನ ಯಂತ್ರೋಪಕರಣಗಳನ್ನು ಬಳಸಿಕೊಂಡು ತಮ್ಮ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಶ್ವಕರ್ಮ ಒಂದು ವಿಶ್ವ ತನ್ನನ್ನು ತನ್ನಿಂದಲೇ ಸೃಷ್ಟಿಸಿಕೊಂಡು ದೇವತೆಗಳ ಪ್ರತಿರೂಪವಾಗಿ ವಿಶ್ವಕರ್ಮ ಎಲ್ಲರ ಸೃಷ್ಟಿಕರ್ತ ಹಾಗೂ ದೇವಾನು ದೇವತೆಗಳ ವಜ್ರ, ಆಭರಣ, ಆಯುಧಗಳನ್ನು ನಿರ್ಮಾಣ ಮಾಡಿದವನು  ಎಂದು ನಿವೃತ್ತ ಚಿತ್ರಕಲಾ ಶಿಕ್ಷಕರಾದ ಗೊಂಡೋಪಂತ ಪತ್ತಾರ ಅವರು ಉಪನ್ಯಾಸ ನೀಡಿದರು.

ವಿಶ್ವಕರ್ಮ ಒಂದು ಭಾರತೀಯ ಸಂಸ್ಕೃತಿಯ ಜೀವಾಳ, ವಿಶ್ವ ಕರ್ಮ ವಿಶ್ವವನ್ನು ವ್ಯಾಪಿಸುವಂತದ್ದು ಜಗತ್ತಿನಲ್ಲಿ ಇರುವ ಎಲ್ಲರನ್ನು ಸಮಾನರಂತೆ ಕಾಣುವುದೇ ವಿಶ್ವ ಕರ್ಮ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ವಿಜಕುಮಾರ ಎಮ್. ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಹಾವನೂರ, ಮಹಿಳಾ ಸಮಿತಿ ಅಧ್ಯಕ್ಷರಾದ ಜ್ಯೋತಿ ಸುತಾರ, ಬೆಳಗಾವಿ ಜಿಲ್ಲಾ ವಿಶ್ವಕರ್ಮ ನಿಗಮದ ನಿರ್ದೇಶಕರಾದ ಬಸವರಾಜ ಸುತಾರ, ಕೆ ಎಚ್ ಬಡಿಗೇರ, ಭರತ ಶಿರೋಳಕರ, ಉಮೇಶ್ ಪತ್ತಾರ, ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಭಾವಚಿತ್ರದ ಭವ್ಯ ಮೆರವಣಿಗೆ

ಇದಕ್ಕೂ ಮುನ್ನ ವಿಶ್ವಕರ್ಮ ಜಯಂತೋತ್ಸವ ನಿಮಿತ್ಯ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಬೆಳಗಾವಿ ತಹಶೀಲ್ದಾರ ನಾಗರಾಳ ಅವರು ಕಿಲ್ಲಾ ಕೋಟೆ, ಅಶೋಕ ವೃತ್ತದಲ್ಲಿ ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸಮುದಾಯದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಿಲ್ಲಾ ಕೋಟೆ, ಅಶೋಕ ವೃತ್ತದಿಂದ ಆರಂಭವಾದ ಶ್ರೀ ವಿಶ್ವಕರ್ಮ ಭಾವ ಚಿತ್ರದ ಭವ್ಯ ಮೆರವಣಿಗೆ  ಆರ್ ಟಿ ಓ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ  ಕಲಾ ಮಂದಿರವನ್ನು ತಲುಪಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button