
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಮೃತ ಯುವಕನನ್ನು ಸುತಗಟ್ಟಿ ಗ್ರಾಮದ ವೆಂಕಟೇಶ ಸುರೇಶ ದಳವಾಯಿ (18) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಬಸವರಾಜ ಸೋಮಲಿಂಗಪ್ಪ ಪೆಂಟೆದ (20), ಆತನ ಸಹೋದರ ರಾಘವೇಂದ್ರ ಪೆಂಟೆದ ಬಂಧಿತ ಆರೋಪಿಗಳು.
ವೆಂಕಟೇಶ ಹಾಗೂ ಬಸವರಾಜ ಅವರು ಗ್ರಾಮದ ಒಂದೇ ಓಣಿಯವರಾಗಿದ್ದು, ಕೆಲ ದಿನಗಳಿಂದ ಕ್ಷುಲ್ಲಕ ಕಾರಣಗಳಿಂದ ಇಬ್ಬರ ನಡುವೆ ವಾಗ್ವಾದವಾಗಿತ್ತು. ಇದೇ ಕಾರಣಕ್ಕೆ ಗ್ರಾಮದ ಹೂಲಿ ಅಜ್ಜನ ಮಠದ ಆವರಣದಲ್ಲಿ ನಡೆದ ಜಗಳ ವಿಕೋಪಕ್ಕೆ ಹೋಗಿ ಕೊಲೆಯಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದ ವೆಂಕಟೇಶನನ್ನು ಸವದತ್ತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.