*ಮೂರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಮೂಲದ ಮಹಿಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬರದನಹಳ್ಳಿ ಗ್ರಾಮದಲ್ಲಿ ತನ್ನ ಮೂರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕುಲಕುವ ಘಟನೆ ನಡೆದಿದೆ.
ಮೃತರನ್ನು ತಾಯಿ ಸಿದ್ದಮ್ಮ (30), ಮಕ್ಕಳಾದ ಅಭಿಗ್ನ (8), ಅವಣಿ (6) ಹಾಗೂ ಆರ್ಯ (4) ಎಂದು ಗುರುತಿಸಲಾಗಿದೆ. ಇವರ ಆತ್ಮಹತ್ಯೆಗೆ ಕೌಟುಂಬಿಕ ಕಲಹವೆ ಕಾರಣ ಎಂದು ಹೇಳಲಾಗುತ್ತಿದೆ
ಬೆಳಗಾವಿ ಮೂಲದ ಸಿದ್ದಮ್ಮ ಪತಿ ಕುಮಾರ್ ಹಾಗೂ ಮೂವರು ಮಕ್ಕಳೊಂದಿಗೆ ಕುರಿ ಮೇಯಿಸಲು ಬಳ್ಳಾರಿಗೆ ಬಂದಿದ್ದರು. ಪ್ರತಿವರ್ಷ ಸಿದ್ದಮ್ಮ ಬರದನಹಳ್ಳಿಯ ರಾಘವೇಂದ್ರ ಎನ್ನುವವರ ಜಮೀನಿನಲ್ಲೇ ಕುರಿ ಕಟ್ಟಿ ಹಾಕುತ್ತಿದ್ದರು. ಇವರು ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಬಂದು, 3-4 ತಿಂಗಳು ಇಲ್ಲೇ ಇದ್ದು, ಮಳೆಗಾಲ ಆರಂಭದ ಸಮಯಕ್ಕೆ ವಾಪಸ್ ಊರಿಗೆ ಹೋಗುತ್ತಿದ್ದರು.
ಆದರೆ ಪತಿ ಕುಮಾರ್ ಜೊತೆ ಯಾವುದೋ ವಿಚಾರಕ್ಕೆ ಗಲಾಟೆಯಾಗಿದೆ. ಬಳಿಕ ಎಂದಿನಂತೆ ಸಿದ್ದಮ್ಮ ಮೂವರು ಮಕ್ಕಳ ಸಮೇತ ಕುರಿ ಮೇಯಿಸಲು ಹೋಗಿದ್ದಾರೆ. ಈ ವೇಳೆ ಮೊದಲು ಮೂವರು ಮಕ್ಕಳನ್ನು ಕೃಷಿಹೊಂಡಕ್ಕೆ ತಳ್ಳಿ ಬಳಿಕ ತಾನು ಕೂಡ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಂಜೆಯಾಗುತ್ತಿದ್ದಂತೆ ಕುರಿಗಳು ಹಟ್ಟಿಗೆ ಬಾರದೆ ಇರುವುದನ್ನು ನೋಡಿ ಆತಂಕಗೊಂಡ ಪತಿ ಕುಮಾರ್ ಹಾಗೆಯೇ ಹುಡುಕಿಕೊಂಡು ಹೋಗಿದ್ದಾನೆ ಈ ವೇಳೆ ಕುರಿಗಳು ಕೃಷಿಹೊಂಡದ ಬಳಿ ಇರುವುದನ್ನು ನೋಡಿ, ಬಂದು ನೋಡಿದಾಗ ನಾಲ್ವರೂ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ.