Kannada NewsLatest

ಬೆಳಗಾವಿಯಿಂದಲೇ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದಹೊಸ ಇತಿಹಾಸ ಸೃಷ್ಟಿಯಾಗಲಿ; ರಾಜಕುಮಾರ ಟೋಪಣ್ಣವರ ಕರೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಬೆಳಗಾವಿ 18 ವಿಧಾನಸಭಾ ಕ್ಷೇತ್ರ ಹೊಂದಿದ ಜಿಲ್ಲೆಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಇಲ್ಲಿಂದಲೇ ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವ ಹಾಗೆ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕೆಂದು ಎಎಪಿ ಉತ್ತರ ವಲಯದ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಕರೆ ನೀಡಿದರು.

ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಭಾನುವಾರ ಬೆಳಗಾವಿ ನಗರದ ಆಮ್ ಆದ್ಮಿ ಕಚೇರಿಯಲ್ಲಿ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದ ಬಳಿಕ ಮಾತನಾಡಿದರು.

ಬೆಳಗಾವಿ ಜಿಲ್ಲೆಯಿಂದ ಆಮ್ ಆದ್ಮಿ ಪಕ್ಷ ಇತಿಹಾಸ ಸೃಷ್ಟಿಸಬೇಕು. ಈಗಾಗಲೇ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಸರಕಾರ ರಚನೆಯಾದ ಬಳಿಕ ನಡೆದಿರುವ ಭ್ರಷ್ಟಾಚಾರ, ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿಯ ಬಗ್ಗ ಜನರಿಗೆ ಮನವರಿಕೆ ಮಾಡುವ ಕೆಲವನ್ನು ಆಪ್ ಕಾರ್ಯಕರ್ತರು ಮಾಡಬೇಕು ಎಂದರು.

ವಿಧಾನಸಭೆಯ ಚುನಾವಣೆಗೂ ಮುನ್ನ ಜಿಪಂ, ತಾಪಂ ಚುನಾವಣೆ ಎದುರಾಗಲಿದ್ದು, ಅದಕ್ಕೆ ಪೂರ್ವ ತಯಾರಿ ನಡೆಸಿ ನಗರ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿ ಆಮ್ ಆದ್ಮಿ ಪಕ್ಷ ಸಂಘಟನೆ ಮಾಡಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ, ಜನಪರ ಸೇವೆ ಮಾಡುವ ವ್ಯಕ್ತಿಯನ್ನು ಗುರುತಿಸಿ ಅವರನ್ನು ಗೆಲ್ಲಿಸಿ ತರುವ ಪ್ರಯತ್ನ ಮಾಡೋಣ ಎಂದು ಹೇಳಿದರು.

ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಿ ಸೋಲು ಕಂಡಿದ್ದರೂ ಪಕ್ಷದ ತಾಕತ್ತು ತೋರಿಸಿದೆ. ಸ್ಥಳೀಯವಾಗಿ ನಡೆದ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಹೋರಾಟ ಮಾಡಿರುವ ಆಪ್ ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯ ಜತೆ ಜತೆಗೆ ಜಿಲ್ಲೆಯಲ್ಲಿನ ಭ್ರಷ್ಟಾಚಾರದ ಬಗ್ಗ ಧ್ವನಿ ಎತ್ತಿ. ಜನಪರ ಕೆಲಸ ಮಾಡುವ ಸಂಕಲ್ಪ ತೋಡೊಣ ಎಂದರು.

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಶಂಕರ ಹೆಗಡೆ, ಅನೀಶ ಸೌದಾಗರ, ಬಷೀರ್ ಅಹ್ಮದ ಜಮಾದಾರ, ಇಮ್ರಾನ್ ಸೈಯದ, ಸುದರ್ಶನ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮೂಡಲಗಿ ವಲಯದ 197 ಅತಿಥಿ ಶಿಕ್ಷಕರಿಗೆ 34.82 ಲಕ್ಷ ರೂ.ಗಳ ವೈಯಕ್ತಿಕ ಗೌರವ ವೇತನ ವಿತರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button