Kannada NewsKarnataka NewsNational

*ಆಸ್ತಿ ವಿಚಾರವಾಗಿ ವೃದ್ಧ ದಂಪತಿ ಮೇಲೆ ದೌರ್ಜನ್ಯ*

ಪ್ರಗತಿವಾಹಿನಿ ಸುದ್ದಿ: ಆಸ್ತಿ ವಿಚಾರಕ್ಕೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಮಹಿಳೆ ಮೇಲೆ ಅಮಾನವೀಯ ರೀತಿಯಲ್ಲಿ ದೌರ್ಜನ್ಯ ನಡೆಸಿದ್ದು, ವೃದ್ಧನ ಮೇಲೆ ಕುಳಿತು ಮನಬಂದಂತೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ನಾಲತವಾಡ- ನಾರಾಯಣಪುರ ಬಳಿಯ ವೀರೇಶನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ದೇವಮ್ಮ ಲೊಟಗೇರಿ ಹಾಗೂ ಸಣ್ಣಹನುಮಂತ ಲೊಟಗೇರಿ ಎಂಬುವವರ ಮೇಲೆ ಅಮಾನವೀಯ ರೀತಿಯಲ್ಲಿ ಸಂಬಂಧಿಗಳೇ ಹಲ್ಲೆ ಮಾಡಿದ್ದಾರೆ.

ಮಹಿಳೆ ಹಾಗೂ ವೃದ್ಧನ ಸಂಬಂಧಿಕರಾದ ಅಮರಪ್ಪ ಕೋರಿ, ಈರಪ್ಪ ಕೋರಿ ಎಂಬುವವರೇ ಹಲ್ಲೆ ಮಾಡಿದ್ದಾರೆ. ದೇವಮ್ಮ ಅವರ ತಲೆಗೂದಲು ಹಿಡಿದು ಕಾಲಿನಿಂದ ತುಳಿದು ಹಲ್ಲೆ ನಡೆಸಿದರೆ, ಸಣ್ಣಹನುಮಂತನ ಎದೆ ಮೇಲೆ ಕುಳಿತು ಹೊಡೆದು ಹಲ್ಲೆ ಮಾಡಲಾಗಿದೆ.

ತೀವ್ರವಾಗಿ ಹಲ್ಲೆಗೊಳಗಾದ ದೇವಮ್ಮ ಹಾಗೂ ಸಣ್ಣಹನುಮಂತ ಬಾಗಲಕೋಟೆಯ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಣ್ಣಹನುಮಂತ ಹಾಗೂ ಕೋರಿ ಕುಟುಂಬಗಳ ಮಧ್ಯೆ ಆಸ್ತಿ ವಿಷಯವಾಗಿ ವಿವಾದವಿದ್ದು, ಇದೇ ವಿಷಯವಾಗಿ ಉಂಟಾದ ಜಗಳದಲ್ಲಿ ಕೋರಿ ಕುಟುಂಬದವರು ಲೊಟಗೇರಿ ಕುಟುಂಬದ ವೃದ್ಧರ ಮೇಲೆ ಅಮಾನವೀಯ ರೀತಿಯಲ್ಲಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button