
ಶ್ರೀನಗರ: ಪವಿತ್ರ ಯಾತ್ರಾ ಸ್ಥಳ ಅಮರನಾಥ ಯಾತ್ರೆಗೆ ಮುಹೂರ್ತ ಫಿಕ್ಸ್ ಆಗಿದೆ. ಜುಲೈ 3ರಿಂದ ಯಾತ್ರೆ ಆರಂಭವಾಗಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.
ಅಮರನಾಥ ದೇವಾಲಯ ಮಂಡಳಿಯ ಅಧ್ಯಕ್ಷರೂ ಆಗಿರುವ ಮನೋಜ್ ಸಿನ್ಹಾ, ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, 57 ದಿನಗಳ ನಂತರ ಸಂಪನ್ನಗೊಳ್ಳಲಿದೆ. ಆಗಸ್ಟ್ 28 ಯಾತ್ರೆ ಮುಕ್ತಾಅಯವಾಗಲಿದೆ ಎಂದಿದ್ದಾರೆ.
ಜೂನ್ 29 ಜ್ಯೇಷ್ಠ ಪೂರ್ಣಿಮೆಯಂದು ಶಿವನಿಗೆ ಪ್ರಥಮ ಪೂಜೆ ನೆರವೇರಿಸಲಾಗುವುದು. ಯಾತ್ರೆಗೆ ಮುಂಗಡ ನೋಂದಣಿ ಏಪ್ರಿಲ್ 15 ರಂದು ಆಫ್ಲೈನ್ ಮತ್ತು ಆನ್ಲೈನ್ ವಿಧಾನಗಳ ಮೂಲಕ ಪ್ರಾರಂಭವಾಗಲಿದೆ. ಈ ಸೌಲಭ್ಯವು ದೇಶಾದ್ಯಂತ J&K ಬ್ಯಾಂಕ್, PNB, SBI ಮತ್ತು Yes ಬ್ಯಾಂಕ್ನ 554 ಶಾಖೆಗಳಲ್ಲಿ ಲಭ್ಯವಿರುತ್ತದೆ.
ಈ ಬಾರಿ ಅಮರನಾಥ ಯಾತ್ರೆಗೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಗೆ ತೀರ್ಥಯಾತ್ರೆಗೆ ನೋಂದಾಯಿಸಲು ಅನುಮತಿಸಿಲ್ಲ. ಇದಲ್ಲದೆ, ಆರು ವಾರಗಳಿಗಿಂತ ಹೆಚ್ಚಿನ ಗರ್ಭಿಣಿಯರಿಗೂ ಕೂಡ ತೀರ್ಥಯಾತ್ರೆಯನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ. ಯಾತ್ರೆಗೆ ನೋಂದಾಯಿಸುವ ಮೊದಲು ಯಾತ್ರಿಕರು ಮತ್ತು ವೈದ್ಯರು ಭರ್ತಿ ಮಾಡಬೇಕಾದ ವಿವರವಾದ ವೈದ್ಯಕೀಯ ಮಾರ್ಗಸೂಚಿಗಳನ್ನೂ ಸಹ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಹಾಗೂ ಸಂಪೂರ್ಣ ದಾಖಲೆ, ಮಾಹಿತಿಗಳನ್ನು ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

