Latest

ರೋಗಿ ಸಾವು; ಆಂಬುಲೆನ್ಸ್ ಚಾಲಕ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕುಡಿದ ಮತ್ತಲ್ಲಿ ಆಂಬುಲೆನ್ಸ್ ಚಾಲಕ ಮಾರ್ಗ ಮಧ್ಯೆಯೇ ವಾಹನ ನಿಲ್ಲಿಸಿ ಬೇಜವಾಬ್ದಾರಿ ಮೆರೆದ ಪರಿಣಾಮ ರೋಗಿಯೊಬ್ಬ ಸಾವನ್ನಪ್ಪಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.

30 ವರ್ಷದ ತೀರ್ಥಾನಂದ ಮೃತ ರೋಗಿ. ಹಾಸನ ಜಿಲ್ಲೆ ಸಿದ್ದಾಪುರ ಗ್ರಾಮದ ನಿವಾಸಿಯಾದ ತೀರ್ಥಾನಂದಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು. ಹೀಗಾಗಿ ಆಂಬುಲೆನ್ಸ್ ಮೂಲಕ ರೋಗಿಯನ್ನು ಬೆಂಗಳೂರಿಗೆ ಕರೆತರಲಾಗುತ್ತಿತ್ತು.

ಆಂಬುಲೆನ್ಸ್ ಚಾಲಕ ಕುಡಿದು ವಾಹನ ಚಲಾಯಿಸಿದ್ದಲ್ಲದೇ ಮಾರ್ಗ ಮಧ್ಯೆ ಆಗಾಗ ನಿಲ್ಲಿಸುತ್ತಲೇ ಇದ್ದ. ಅಲ್ಲದೇ ಮೈಸೂರಿನ ಹುಣಸೂರು ಬಳಿ ಆಂಬುಲೆನ್ಸ್ ನಿಲ್ಲಿಸಿದ ಚಾಲಕ ಮುಂದೆ ಆಂಬುಲೆನ್ಸ್ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಯೇ ಆಂಬುಲೆನ್ಸ್ ನಿಲ್ಲಿಸಿದ್ದಾನೆ. ಕ್ಷಣ ಕ್ಷಣಕ್ಕೂ ರೋಗಿ ಆರೋಗ್ಯಸ್ಥಿತಿ ಗಂಭೀರವಾಗುತ್ತಿದೆ ಎಂದು ಹೇಳಿದರೂ ಆಂಬುಲೆನ್ಸ್ ಚಾಲಕ ವಾಹನ ಚಲಾಯಿಸಿಲ್ಲ. ತಕ್ಷಣ ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ರೋಗಿ ತೀರ್ಥಾನಂದ ಮೃತಪಟ್ಟಿದ್ದಾರೆ.

ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರೆ ರೋಗಿಯ ಜೀವ ಉಳಿಯುತ್ತಿತ್ತು. ಆದರೆ ಆಂಬುಲೆನ್ಸ್ ಚಾಲಕನ ಬೇಜವಾಬ್ದಾರಿಗೆ ವ್ಯಕ್ತಿ ಸಾವನ್ನಪ್ಪಿದ್ದು, ಹುಣಸೂರು ಪೊಲೀಸರು ಆಂಬುಲೆನ್ಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
578 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button