
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಜನ ಸೇವಕ ಸಮಾವೇಶ ನಡೆಸುತ್ತಿದ್ದು, ಅದರ ಸಮಾರೊಪ ಸಮಾರಂಭ ಇದೇ 17ರಂದು ಬೆಳಗಾವಿಯಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಷಾ ಭಾಗವಹಿಸಲಿದ್ದಾರೆ.
ಬೆಳಗಾವಿ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಬೃಹತ್ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಗ್ರಾಮ ಪಂಚಾಯತಿ ಸದಸ್ಯರು ಆಯ್ಕೆಯಾಗಿದ್ದರಿಂದ ರಾಜ್ಯದಲ್ಲಿ ಜ 11 ರಿಂದ ನಡೆಯುವ ಜನ ಸೇವಕ ಸಮಾವೇಶ ಬೆಳಗಾವಿ ಜಿಲ್ಲೆಯಲ್ಲಿ ಜ17ರಂದು ಸಮಾರೊಪವಾಗಲಿದ್ದು ಲಕ್ಷಾಂತರ ಕಾರ್ಯಕರ್ತರು ಹಾಗೂ ಗ್ರಾಮಪಂಚಾಯತಿ ಸದಸ್ಯರು ಆಗಮಿಸಲಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಬಿಜೆಪಿ ಪಕ್ಷ ಗೆಲವು ಸಾಧಿಸಿದರೂ ನೆಮ್ಮದಿಯಿಂದ ನಿದ್ರಿಸುವ ಜಯಮಾನ ನಮ್ಮದಲ್ಲ. ಸದಾ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುವುದರಿಂದ 2 ಸ್ಥಾನದಿಂದ ಇಂದು ಬಿಜೆಪಿಯ 303 ಸಂಸದರು ಆಯ್ಕೆಯಾಗಿ ಸುಭದ್ರ ಸರ್ಕಾರದೊಂದಿಗೆ ಉತ್ತಮ ಆಡಳಿತ ನೀಡುತ್ತಿದೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತನಾಡಿ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಮ್ಮ ನೀರಿಕ್ಷೆಗೆ ಮೀರಿ ವಿಜಯ ಸಾಧಿಸಿದ್ದೇವೆ ಹಾಗಂತ ಮೈ ಮರೆಯುವಂತಿಲ್ಲ. ಮುಂಬರುವ ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ ಮತ್ತು ಬೆಳಗಾವಿ ಲೊಕಸಭೆಯ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸನ್ನದ್ಧರನ್ನಾಗಿಸುವುದೆ ಮುಖ್ಯ ಉದ್ದೇಶ. ಜ17 ರಂದು ಮಧ್ಯಾಹ್ನ 3 ಘಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯಲ್ಲಿ ನೂತನ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಸದಸ್ಯರಿಗೆ ಕೇಂದ್ರ ಗೃಹ ಸಚಿವ ಅಮಿತ ಷಾ ಅವರಿಂದ ಅಭಿನಂದನೆ ಸಮಾರಂಭ ನಡೆಯಲಿದೆ. ಇದರ ಯಶಸ್ಸಿಗೆ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಹಾಗೂ ಪಕ್ಷದ ಪದಾಧಿಕಾರಿಗಳು , ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದರು. ರಾಜ್ಯಸಭಾ ಸದಸ್ಯ ಈರಣ್ಣ ಕಾಡಾಡಿ ಮಾತನಾಡಿದರು.
ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಸಂಸದ ಅಣ್ಣಾಸಹೇಬ ಜೊಲ್ಲೆ, ಕೊಳಚೆ ನಿಗಮದ ಅಧ್ಯಕ್ಷ ಮಹೇಶ ಕುಮಟೊಳ್ಳಿ, ಮಾಜಿ ಸಚಿವ ಉಮೇಶ ಕತ್ತಿ, ಮಾಜಿ ಸಂಸದ ಪ್ರಭಾಕರ ಕೋರೆ, ಶಾಸಕರಾದ ಪಿ.ರಾಜೀವ, ಅಭಯ ಪಾಟೀಲ, ಅನೀಲ ಬೆನಕೆ, ಮಹಾಂತೇಶ ದೊಡಗೌಡ್ರ, ಮಾಜಿ ಶಾಸಕರಾದ ಜಗದೀಶ್ ಮೆಟಗುಡ್, ವಿಶ್ವನಾಥ್ ಪಾಟೀಲ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವಣಾಚೆ, ಚಂದ್ರಶೇಖರ ಕವಟಗಿ, ಬಸವರಾಜ ಯಕ್ಕಂಚಿ, ಪ್ರಕಾಶ ಅಕ್ಕಲಕೊಟ್, ಎಮ್.ಬಿ.ಝಿರಲಿ, ಜಿಪಂ ಸದಸ್ಯ ರಮೇಶ ದೇಶಪಾಂಡೆ ಮೊದಲಾದವರು ಇದ್ದರು. ನಗರ ಅಧ್ಯಕ್ಷ ಶಶಿ ಪಾಟೀಲ ವಂದಿಸಿದರು. ಚಿಕ್ಕೊಡಿ ಅಧ್ಯಕ್ಷ ಡಾ. ರಾಜೇಶ ನೆರ್ಲಿ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ