ಬಿಜೆಪಿ ನಾಯಕರು ರಾವಣನ ಮಕ್ಕಳು ಎಂದ ಕಾಂಗ್ರೆಸ್ ನಾಯಕ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನಡೆಸಿದ್ದ ಸ್ವಾತಂತ್ರ್ಯ ಚಳುವಳಿ ಒಂದು ನಾಟಕ ಎಂದು ಹೊಸ ವಿವಾದ ಸೃಷ್ಟಿಸಿದ್ದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಸಂಸತ್ ನಲ್ಲಿ ಪ್ರತಿಧ್ವನಿಸಿದೆ. ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಅನಂತ ಕುಮಾರ್​ ಹೆಗಡೆ ಕ್ಷಮೆಯಾಚಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ.

ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಅಧೀರ್​ ರಂಜನ್​ ಚೌಧರಿ, ರಾಮ ಭಕ್ತ ಗಾಂಧೀಜಿಯನ್ನು ಅವಮಾನಿಸುವ ಬಿಜೆಪಿ ನಾಯಕರು ರಾವಣನ ಮಕ್ಕಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಂಸದ ಹೆಗಡೆ ಬೇಷರತ್ ಆಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಬಿಜೆಪಿ ಸಂಸದರು ಪದೇ ಪದೇ ಗೋಡ್ಸೆ ಪರವಾಗಿ ಹೇಳಿಕೆ ನೀಡುತ್ತಾರೆ. ಬಿಜೆಪಿ ನಾಯಕರು ಗಾಂಧಿಜೀ ಪರವಾಗಿದ್ದೀರಾ ಅಥವಾ ಗೋಡ್ಸೆ ಜೊತೆಗಿದ್ದೀರಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಂಸದ ಕಮಲ್​ನಾಥ್ ಒತ್ತಾಯಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಷಿ, ಬಿಜೆಪಿಯವರಾದ ನಾವು ನಿಜವಾದ ರಾಮಭಕ್ತರು. ನಾವು ಮಹಾತ್ಮ ಗಾಂಧಿಜೀಯ ನಿಜವಾದ ಅನುಯಾಯಿಗಳು. ಇವರೆಲ್ಲಾ ನಕಲಿ ಗಾಂಧಿಗಳಾದ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಭಕ್ತರು ಎಂದು ಟೀಕಿಸಿದರು.

ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಗದ್ದಲ-ಕೋಲಾಹಲದ ವಾತಾವರಣ ಉಂಟಾಯಿತು. ಜೋಷಿ ಹೇಳಿಕೆಗೆ ಆಕ್ರೋಶಗೊಂಡ ಕಾಂಗ್ರೆಸ್​ ನಾಯಕರು, ಮಹಾತ್ಮ ಗಾಂಧಿ ಅಮರರಾಗಿರಲಿ ಎಂದು ಘೋಷಣೆ ಕೂಗುವ ಮೂಲಕ ಸದನದಿಂದ ಹೊರ ನಡೆದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button