
ಪ್ರಗತಿವಾಹಿನಿ ಸುದ್ದಿ : ಮಗುವಿನ ಗಲ್ಲಕ್ಕೆ ಅಂಗನವಾಡಿ ಕಾರ್ಯಕರ್ತೆ ಬರೆ ಎಳೆದು ವಿಕೃತಿ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮಕ್ಕಳ ಜಗಳವನ್ನು ಬಿಡಿಸಲು ಹೋಗಿ ಅಂಗನವಾಡಿ ಸಹಾಯಕಿ ಹೇಮಮ್ಮ ಎಂಬುವರು ಬೆಂಕಿಯಲ್ಲಿ ಕಾಸಿದ ಚಾಕುವಿನಿಂದ ಮಗುವಿನ ಗಲ್ಲಕ್ಕೆ ಬರೆ ಎಳೆದಿದ್ದಾರೆ.
ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಮಗು ಯೋಧಮೂರ್ತಿ ಬರೆಗೆ ತುತ್ತಾಗಿದ್ದಾನೆ.
ಯೋಧಮೂರ್ತಿ ಇನ್ನೊಬ್ಬ ಮಗುವಿಗೆ ಕಚ್ಚಿದ್ದಾನೆ. ಪರಸ್ಪರ ಜಗಳವಾಡುತ್ತಿರುವುದನ್ನು ಗಮನಿಸಿದ ಸಹಾಯಕಿ ಚಾಕುವನ್ನು ಬೆಂಕಿಯಲ್ಲಿ ಕಾಯಿಸಿ ಯೋಧಮೂರ್ತಿಯ ಗಲ್ಲಕ್ಕೆ ಬರೆ ಎಳೆದಿದ್ದಾರೆ.
ಉರಿಯಿಂದ ಅಳತೊಡಗಿದ ಮಗು ಅಸ್ವಸ್ಥಗೊಂಡಿದ್ದು, ಸೊರಬ ಸಾರ್ವಜನಿಕ ಆಸತ್ರೆಗೆ ದಾಖಲಿಸಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಹೇಮಮ್ಮ ವಿರುದ್ಧ ದೂರು ದಾಖಲಾಗಿದೆ.
 
					 
				 
					 
					 
					 
					
 
					 
					 
					


