
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಹೆಸರನ್ನು ‘ಕೆಡಿ ಶಿವಕುಮಾರ್’ ಎಂದು ಬದಲಾಯಿಸಿಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿ ಎಂದು ಕರೆ ನೀಡುತ್ತಿದ್ದಾರೆ. ಇವರಿಗಿಂತ ಬೇರೆ ಜಾತಿವಾದಿಗಳು ಇದ್ದಾರಾ?” ಎಂದು ಪ್ರಶ್ನಿಸಿದರಲ್ಲದೆ, “ಡಿ.ಕೆ. ಶಿವಕುಮಾರ್ ಹೆಸರು ಯಾಕೆ ಬೇಕು. ಕೆಡಿ ಶಿವಕುಮಾರ್ ಅಂತಾ ಬದಲಾಯಿಸಿಕೊಳ್ಳಲಿ. ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಜಾತಿ ಹೆಸರಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ವೀರಪ್ಪ ಮೊಯ್ಲಿ ಅವರ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಧರ್ಮ ಹಾಗೂ ದೇಶದ ವಿರೋಧಿ ಪಕ್ಷ. ಕೂಡಲೆ ಕಾಂಗ್ರೆಸ್ನವರು ತಮ್ಮ ಪ್ರಣಾಳಿಕೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
ಮೋದಿ ಆನೆ ಗಾತ್ರ; ಪ್ರಿಯಾಂಕ್ ತಿಗಣೆ ಗಾತ್ರ: “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಮೋದಿಯವರನ್ನು ‘ವಿಷಸರ್ಪ’ಕ್ಕೆ ಹೋಲಿಸಿದ ದಿನವೇ ಅವರ ಜೀವನದ ಸಾಧನೆಗಳೆಲ್ಲ ಮಣ್ಣುಪಾಲಾಗಿವೆ” ಎಂದು ಹೇಳಿದ ಈಶ್ವರಪ್ಪ, ತಿಗಣೆ ಗಾತ್ರದ ಶಾಸಕ ಪ್ರಯಾಂಕ್ ಖರ್ಗೆ ಅವರು ಆನೆ ಗಾತ್ರದ ಮೋದಿಯವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
“ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸುವುದೇ ಅವರ ಮುಖ್ಯ ಗುರಿಯಾಗಿದೆ. ಪಿಎಫ್ ಐ ಸಂಘಟನೆಯೊಂದಿಗೆ ಬಜರಂಗದಳವನ್ನು ಹೋಲಿಸಿರುವುದು ದುರಂತ. ಬಜರಂಗದಳವನ್ನು ನಿಷೇಧಿಸುವ ವಿಚಾರದಲ್ಲಿ ಅವರಲ್ಲೇ ಗೊಂದಲಗಳಿವೆ. ಒಟ್ಟಾರೆಯಾಗಿ ಹಿಂದೂಗಳನ್ನು ದಮನ ಮಾಡುವುದೇ ಅವರ ಮುಖ್ಯ ಗುರಿಯಾಗಿದೆ” ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶೆಟ್ಟರ್ ಅಯ್ಯೋ ಪಾಪ!
ಕಾಂಗ್ರೆಸ್ ಪಕ್ಷ ಸೇರಿರುವ ಜಗದೀಶ್ ಶೆಟ್ಟರ್ ಅವರ ಪರಿಸ್ಥಿತಿ ನೋಡಿ ಅಯ್ಯೋ ಪಾಪ ಎನಿಸುತ್ತಿದೆ. ಆರ್ಎಸ್ಎಸ್, ಹಿಂದುತ್ವದ ಬಗ್ಗೆ ವಿಧಾಸನಭೆಯಲ್ಲಿ ಮಾತನಾಡಿದ್ದ ಜಗದೀಶ್ ಶೆಟ್ಟರ್ ಸ್ವಾಭಿಮಾನವನ್ನು ನಾನು ನಿರೀಕ್ಷಿಸಿದ್ದೆ. ಆದರೆ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದಾರೆ. ಜಗದೀಶ್ ಶೆಟ್ಟರ್ ಬಹಿರಂಗವಾಗಿ ಕಾಂಗ್ರೆಸ್ ನಿಲುವನ್ನು ಖಂಡಿಸಲಿ. ಒಂದುವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಬಜರಂಗದಳ ನಿಷೇಧ ಮಾಡಿದರೇ, ಜಗದೀಶ್ ಶೆಟ್ಟರ್ ಏನು ಮಾಡಲಿದ್ದಾರೆ ಎಂಬುದನ್ನು ತಿಳಿಸಲಿ” ಎಂದು ಶೆಟ್ಟರ್ ಗೆ ಸವಾಲೆಸೆದರು.