*ನಿಸರ್ಗದ ಮಡಿಲಲ್ಲಿ ಸಚಿವ ಸತೀಶ್ ಜಾರಕಿಹೊಳಿ ಫುಲ್ ರಿಲ್ಯಾಕ್ಸ್.!*

ಪ್ರಗತಿವಾಹಿನಿ ಸುದ್ದಿ: ಬಾಗಲಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಇದರ ಪ್ರಮುಖ ಮಾಸ್ಟರ್ ಮೈಂಡ್ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಲ್ಲಿ ಪ್ರಚಾರ ಮುಗೀತಿದ್ದಂತೆ ಇಂದು ಗೋಕಾಕ ಯೋಗಿ ಕೊಳ್ಳಕ್ಕೆ ಆಗಮಿಸಿ ವಿಶ್ರಾಂತಿ ಪಡೆದಿದ್ದಾರೆ.
ಹೌದು… ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಳೆದ ಒಂದು ತಿಂಗಳ ಕಾಲ ಬಾಗಲಕೋಟೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲಲು ಸಾಕಷ್ಟು ರಣತಂತ್ರ ಹೂಡಿದ್ದು, ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು. ʻಕೋಟೆʼ ನಾಡಿನಲ್ಲಿ ಪ್ರಚಾರ ಮುಗಿಯುತ್ತಿದ್ದಂತೆ ತಮ್ಮ ʻಕರದಂಟು ನಾಡಿʼನತ್ತ ಮುಖ ಮಾಡಿದ್ದಾರೆ. ಅಲ್ಲದೇ ಬಿಸಿಲು ನಾಡಿನಲ್ಲಿ ದಣಿವರಿಯದೆ ಸಾಕಷ್ಟು ಪ್ರಚಾರ ಸಭೆ ಸೇರಿದಂತೆ ಕೈ ಅಭ್ಯರ್ಥಿ ಪರ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸಂಚರಿಸಿದ ಗೋಕಾಕ ಸಾಹುಕಾರ್ ಇಂದು ಗೋಕಾಕ ಯೋಗಿ ಕೊಳ್ಳಕ್ಕೆ ಆಗಿಮಿಸಿ ಸ್ವಲ್ಪ ಕಾಲ ರಿಲ್ಯಾಕ್ಸ್ ಆಗಿದ್ದಾರೆ.
ನದಿ ಪಕ್ಕ ಕುಳಿತು ಮಿರ್ಚಿ ಬಜ್ಜಿ ಸವಿದ ಸಾಹುಕಾರ್: ಬಾಗಲಕೋಟೆ ವಿಧಾನಸಭಾ ಊಪಚುನಾವಣೆ ಪ್ರಚಾರ ಮುಗಿಯುತ್ತಿದ್ದಂತೆ ಸಚಿವ ಸತೀಶ್ ಜಾರಕಿಹೊಳಿ ಅವರು, ಯೋಗಿ ಕೊಳ್ಳದ ಮಾಂರ್ಕೆಂಡೇಯ ನದಿ ತಟದ ನಿಸರ್ಗದ ಮಡಿಲಲ್ಲಿ ಕುಳಿತು ಮಿರ್ಚಿ ಬಜ್ಜಿ ಸವೆಯುತ್ತಾ ಫುಲ್ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ.

ಜಾಲಿ ಮೂಡ್ ಗೆ ಜಾರಿದ ಜಾರಕಿಹೊಳಿ: ಅಂದು ಶಿಗ್ಗಾವದಲ್ಲಿ ಅಹಿಂದ ಮತಗಳನ್ನು ಒಗ್ಗೂಡಿಸುವ ಮೂಲಕ ಕ್ಷೇತ್ರವನ್ನು ಕೇಸರಿ ಪಡೆಯಿಂದ “ಕೈ” ವಶ ಮಾಡಿಕೊಂಡಿದ್ದ ಸತೀಶ್ ಜಾರಕಿಹೊಳಿಗೆ ಈಗ ಅಂತಹುದ್ದೇ ಮತ್ತೊಂದು ಜವಾಬ್ದಾರಿಯನ್ನು ಕಾಂಗ್ರೆಸ್ ಹೈ ಕಮಾಂಡ್ ಗೋಕಾಕ ಸಾಹುಕಾರ್ ಹೆಗಲಿಗೆ ಹೊರಸಿದೆ. ದಿ.ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಈಗ ಉಪಚುನಾವಣೆ ನಡೆಯುತ್ತಿದ್ದು, ಚುನಾವಣೆ ಉಸ್ತುವಾರಿಯನ್ನು ಪಕ್ಷದ ವರಿಷ್ಠರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಹಿಸಿದ್ದಾರೆ. ಅದರಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೈ ಹೈಕಮಾಂಡ್ ತಮಗೆ ಕೊಟ್ಟ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸಿ ಈಗ ಅವರು ತಮ್ಮ ತವರಿನತ್ತ ಮುಖ ಮಾಡಿ ಫುಲ್ ರಿಲ್ಯಾಕ್ಸ್ ಆಗಿದ್ದಾರೆ.
ಅಭಿಮಾನಿಗಳ ಜೊತೆ ಪೋಟೋ ಕ್ಲಿಕಿಸಿಕೊಂಡ ಸಚಿವ: ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯದಲ್ಲೇ ಅತಿ ಸಿಂಪಲ್ ಆಗಿ ಇರುವ ರಾಜಕಾರಣಿಯಾಗಿದ್ದಾರೆ. ಯಾವುದೇ ರೀತಿ ಆಡಂಬರಕ್ಕೆ ಮಾರು ಹೋಗದೇ ತಮ್ಮದೇ ಆದ ಸರಳ ವ್ಯಕ್ತಿತ್ವ ಮತ್ತು ವೈಚಾರಿಕ ನಿಲುವಿಗೆ ಹೆಸರುವಾಸಿಯಾಗಿದ್ದಾರೆ. ಇಂದು ಗೋಕಾಕದ ಯೋಗಿ ಕೊಳ್ಳಕ್ಕೆ ಆಗಮಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ನೀಡಿದ ಅವರ ಅಭಿಮಾನಿಗಳು ಅವರ ಜೊತೆ ನಿಂತು ಪೋಟೋ ಕ್ಲಿಕಿಸಿಕೊಂಡರು. ಅದರಂತೆ ಸಚಿವರು ಸಹ ಅಭಿಮಾನಿ ಜೊತೆ ಪ್ರೀತಿಯಿಂದ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ.



