ಭಜರಂಗಿ –2 ಚಿತ್ರತಂಡಕ್ಕೆ ಮತ್ತೊಂದು ಆಘಾತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇತ್ತೀಚೆಗಷ್ಟೇ ‘ಭಜರಂಗಿ –2’ ಚಿತ್ರದ ಶೂಟಿಂಗ್ ಸೆಟ್ ಗೆ ಬೆಂಕಿ ಹೊತ್ತಿಕೊಂಡು ಅಪಾರ ನಷ್ಟ ಸಂಭವಿಸಿತ್ತು. ಇದರ ಬೆನ್ನಲ್ಲೇ ಚಿತ್ರತಂಡಕ್ಕೆ ಮತ್ತೊಂದು ಆಘಾತವುಂಟಾಗಿದೆ. ಶೂಟಿಂಗ್ ಗಾಗಿ ಸಿನಿಮಾ ಕಲಾವಿದರು ಪ್ರಯಾಣಿಸುತ್ತಿದ್ದ  ಬಸ್ ಅಪಘಾತಕ್ಕೀಡಾಗಿದೆ.

ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಮೋಹನ್ ಬಿ.ಕೆರೆ ಸ್ಟುಡಿಯೋ ಬಳಿ ‘ಭಜರಂಗಿ -2’ ಸಿನಿಮಾ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಅಪಘಾತವಾಗಿದೆ. ಬಸ್ಸಿನಲ್ಲಿ ಸುಮಾರು 60ಕ್ಕೂ ಹೆಚ್ಚು ಕಲಾವಿದರಿದ್ದರು ಎನ್ನಲಾಗಿದೆ.

ಎಂದಿನಂತೆ ಬಸ್ ಶೂಟಿಂಗ್ ತೆರಳುತ್ತಿತ್ತು. ಮೋಹನ್ ಬಿ.ಕೆರೆ ಸ್ಟುಡಿಯೋದತ್ತ ಬಸ್ ಹೋಗುತ್ತಿದ್ದಾಗ ಮೊದಲು ಕಾರಿಗೆ ಡಿಕ್ಕಿಹೊಡೆದಿದ್ದು,  ನಂತರ ರಸ್ತೆಯ ಪಕ್ಕದಲ್ಲಿದ್ದ ಹೆವಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಸ್ ಮೇಲೆಯೇ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button