Kannada NewsKarnataka NewsLatest

ಸತತ 4 ತಾಸು ಕುಸ್ತಿ ಪಂದ್ಯಾವಳಿ ವೀಕ್ಷಣೆ ಮಾಡಿದ ಬಾಲಚಂದ್ರ ಜಾರಕಿಹೊಳಿ

 ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಬಬಲಾದಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಮಠದ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ. ಪೀಠಾಧಿಪತಿಯಾಗಿರುವ ಶಿವಯ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದಾರೆಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಅರಭಾವಿ ಮತ್ತು ಶಿಂಧಿಕುರಬೇಟ ಗ್ರಾಮಗಳ ಗುಡ್ಡದ ಮಧ್ಯದಲ್ಲಿರುವ ಬಬಲಾದಿ ಮಠದ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಬಲಾದಿ ಮಠ ನಮ್ಮ ಅರಭಾವಿ ಕ್ಷೇತ್ರದಲ್ಲಿ ಇರುವುದರಿಂದ ನಾವೆಲ್ಲರೂ ಪಾವನರಾಗಿದ್ದೇವೆಂದು ಹೇಳಿದರು.

ಬಬಲಾದಿ ಮಠದ ಪೂಜ್ಯರು ನುಡಿಯುವ ಮಾತುಗಳು ಸತ್ಯದ ಪ್ರತೀಕವಾಗಿವೆ. ಮಠದ ಇತಿಹಾಸ ಹಾಗೂ ಸಂಸ್ಕೃತಿ ಬಹಳ ದೊಡ್ಡದಿದೆ. ಅದರಲ್ಲೂ ನಮ್ಮ ಬಬಲಾದಿ ಮಠದ ಶಿವಯ್ಯ ಸ್ವಾಮಿಗಳು ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ. ಲಕ್ಷಾಂತರ ಭಕ್ತರನ್ನು ಸಂಪಾದಿಸಿದ್ದಾರೆ. ಇಲ್ಲಿ ಪ್ರತಿವರ್ಷ ಬನದ ಹುಣ್ಣಿಮೆಗೆ ನಡೆಯುವ ಜಾತ್ರೆಗೆ ಸಾಕಷ್ಟು ಜನರು ಆಗಮಿಸಿ ಶ್ರೀಗಳ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಧಾರ್ಮಿಕತೆಗೆ ಮತ್ತೊಂದು ಹೆಸರೇ ಬಬಲಾದಿ ಮಠ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಬಬಲಾದಿ ಮಠದ ಶಿವಯ್ಯ ಮಹಾಸ್ವಾಮಿಗಳು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಆಶೀರ್ವದಿಸಿದರು.

ಜನಮನಸೂರೆಗೊಂಡ ಕುಸ್ತಿ 

ಜಾತ್ರೆ ನಿಮಿತ್ಯವಾಗಿ ಮಠದಲ್ಲಿ ಅಂತರಾಷ್ಟ್ರೀಯ ಜಂಗಿ ನಿಕಾಲಿ ಕುಸ್ತಿಗಳು ಜರುಗಿ ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸಿದವು. ಅದರಲ್ಲೂ ಅಂತರಾಷ್ಟ್ರೀಯ ಕುಸ್ತಿ ಪಟುಗಳಾದ ಹರಿಯಾಣಾದ ಭಾರತ ಕೇಸರಿ ಮಂಜೀತಸಿಂಗ್ ಖತ್ರಿ ಹಾಗೂ ಇರಾನ್ ದೇಶದ ಸೈಯ್ಯದ ಮಹ್ಮದ ಪೈಲವಾನ್ ಕುಸ್ತಿ ರೋಚಕತೆಯಿಂದ ಕೂಡಿತ್ತು. ಸತತ ಮೂರನೇ ಬಾರಿಗೆ ಜಮಖಂಡಿ ತಾಲೂಕಿನ ಕಂಕಣವಾಡಿಯ ಶಿವಯ್ಯ ಪೂಜೇರಿ ಬೆಳ್ಳಿ ಗಧೆ ಪಡೆದುಕೊಂಡರು. ಕರ್ನಾಟಕ ಕೇಸರಿ ದಾವಣಗೆರೆಯ ಕಾರ್ತಿಕ ಕಾಟೆ ಅವರ ಕುಸ್ತಿಯಂತೂ ಕ್ರೀಡಾ ಪ್ರೇಮಿಗಳಿಗೆ ಹಬ್ಬವಾಗಿ ಪರಿಣಮಿಸಿತು.

ಪ್ರಸಿದ್ಧ ಬಬಲಾದಿ ಮಠದಲ್ಲಿ ನಡೆಯುತ್ತಿದ್ದ ಜಂಗೀ ನಿಕಾಲಿ ಕುಸ್ತಿಯನ್ನು ಬಾಲಚಂದ್ರ ಜಾರಕಿಹೊಳಿ ಅವರು ಸತತ 4 ಗಂಟೆಗಳ ಕಾಲ ವೀಕ್ಷಕರೊಂದಿಗೆ ಕುಳಿತುಕೊಂಡು ವೀಕ್ಷಿಸಿರುವುದು ಅಭಿಮಾನಿಗಳಲ್ಲಿ ಹರ್ಷವನ್ನುಂಟು ಮಾಡಿತು. ಕುಸ್ತಿಯಲ್ಲಿ ಗೆದ್ದ ಕ್ರೀಡಾ ಪೈಲವಾನರಿಗೆ ನಗದು ರೂಪದಲ್ಲಿ ಬಹುಮಾನ ನೀಡಿ ಅವರನ್ನು ಹುರಿದುಂಬಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button