Belagavi NewsBelgaum NewsKannada NewsKarnataka News

*ಉನ್ನತ ಅಧಿಕಾರ ಜನಸೇವೆಯ ಸಾಧನವೆಂದಿದ್ದಾರೆ ಬಸವಣ್ಣ-ವಿಜಯಲಕ್ಷ್ಮಿ ಪುಟ್ಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಉನ್ನತ ಸ್ಥಾನದಲ್ಲಿದ್ದ ಬಸವಣ್ಣನವರು ತಮಗೆ ದೊರೆತ ಅಧಿಕಾರವನ್ನು ಜನಸೇವೆಯ ಸಾಧನವೆಂದು ಪರಿಗಣಿಸಿದವರು ಹೀಗಾಗಿ ಇಂದಿನ ಅಧಿಕಾರಸ್ತರಿಗೆ ಬಸವಣ್ಣನವರು ಮಾದರಿಯಾಗುತ್ತಾರೆ ಎಂದು ಪ್ರೊ. ವಿಜಯಲಕ್ಷ್ಮಿ ಪುಟ್ಟಿ ಹೇಳಿದರು. 

ಅವರು  ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ಮಾಸಿಕ ಅನುಭವ ಸತ್ಸಂಗದಲ್ಲಿ “ಬಸವಣ್ಣ ನಮಗೆ ಏಕೆ ಬೇಕು” ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.

ಉನ್ನತ ಸ್ಥಾನದಲ್ಲಿದ್ದ ಬಸವಣ್ಣನವರ ನಡೆ ಮತ್ತು ನುಡಿಗಳಲ್ಲಿ ವಿನಯತೆ ಎದ್ದು ಕಾಣುತ್ತಿತ್ತು ಮೇಲು ಕೀಳು ಎನ್ನದೆ ಎಲ್ಲರನ್ನೂ ಗೌರವಿಸುತ್ತ ಸಮಾನವಾಗಿ ಕಾಣುವ ಅವರು ಎನಗಿಂತ ಕಿರಿಯರಿಲ್ಲ ಎನ್ನುತ್ತಾ ಅಹಂಕಾರದಿಂದ ದೂರ ಇದ್ದವರು. ಇಂದಿನ ಅಧಿಕಾರಸ್ತರಲ್ಲಿ ಅದು ಕಾಣುತ್ತಿಲ್ಲ ಅಹಂಕಾರ ಹೆಚ್ಚಾಗಿದೆ, ಅಂದು ಶರಣರು ತಮ್ಮ ಮೌಲ್ಯಗಳಿಂದ ದೊಡ್ಡವರಾಗಿದ್ದರು ಇಂದು ಅಧಿಕಾರ ಮತ್ತು ಅಂತಸ್ತುಗಳಿಂದ ದೊಡ್ಡವರೇನಿಸಿಕೊಳ್ಳುತ್ತಾರೆ. 

ಜಾತಿ ವ್ಯವಸ್ಥೆಯನ್ನೇ ನಿರ್ಮೂಲನೆ ಮಾಡಲು ಪ್ರಯತ್ನಿಸಿದವರು ಬಸವಣ್ಣನವರು, ಕೆಳವರ್ಗದವರನ್ನು ಮುಟ್ಟುವುದು ಪಾಪ ಎನ್ನುವಂಥ ಪರಿಸ್ಥಿತಿಯಲ್ಲಿ ಕೇಳವರ್ಗದವರನ್ನು ಶೋಷಿತರನ್ನು ಒಪ್ಪಿಕೊಂಡರು, ಅಪ್ಪಿಕೊಂಡರು ಅವರಿಗೆ ಅನುಭವ ಮಂಟಪದಲ್ಲಿ ಸ್ಥಾನಮಾನಗಳನ್ನು ಕೊಟ್ಟು ಗೌರವಿಸಿದರು ದುರ್ದೈವದ ವಿಚಾರವೆಂದರೆ ಇಂದಿಗೂ ಜಾತಿ ವ್ಯವಸ್ಥೆ ನಿರ್ಮೂಲವಾಗಿಲ್ಲ ಎಂದವರು ವಿಷಾದ ವ್ಯಕ್ತಪಡಿಸಿದರು.

Home add -Advt

ಇಂದಿನ ಅಧಿಕಾರಸ್ಥರಲ್ಲಿ ಮೌಲ್ಯಗಳು ಇಲ್ಲ. ವಿನಯತೆ ಇಲ್ಲ, ಅಂತರಂಗ ಶುದ್ಧಿ ಇಲ್ಲ. ಈ ಎಲ್ಲವೂ ಕೇವಲ ಭಾಷಣಗಳಲ್ಲಿ ಬಳಕೆಯಾಗುತ್ತಿವೆ. ಅನಾಚಾರ, ಅತ್ಯಾಚಾರ, ದುರಾಚಾರ ಹೆಚ್ಚಾಗುತ್ತಿದೆ. ಹೀಗಾಗಿ ಬಸವಣ್ಣನವರು ನಮಗೆ ಇಂದಿಗೂ ಬೇಕು ಅವರ ಮೌಲ್ಯಗಳು ಸರ್ವಕಾಲಕ್ಕೂ ಪ್ರಸ್ತುತ ಎನಿಸುವಂಥವು ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾಗತೀಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ ಸಮಸ್ತ ಲಿಂಗಾಯತ ಸಮಾಜವು ಒಕ್ಕಟ್ಟಾಗಿ ಇರುವುದು ಈ ಕ್ಷಣದ ಅಗತ್ಯವಾಗಿದೆ ಸಮಾಜದಲ್ಲಿ ಒಗ್ಗಟ್ಟಿಲ್ಲದಿರುವದು ದೊಡ್ಡ ಹಾನಿ. ಇದೇ ಸ್ಥಿತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ನುಡಿದರು. 

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ. ಶಿವಬಸವ ದೇವರು ಆಶೀರ್ವಚನ ನೀಡಿ ಬಸವಣ್ಣನವರ ಬದುಕು ಉದಿನ ಕಡ್ಡಿಯಂತೆ ಸ್ವಂತ ಸುಟ್ಟು ಕೊಂಡು ಜಗಕ್ಕೆ ಪರಿಮಳ ಬೀರಿದವರು ಕಾಯಕ ನಿಷ್ಠೆ ಎನ್ನುವುದನ್ನು ಜೀವನದಲ್ಲಿ ರೂಡಿಸಿಕೊಂಡವರು, ಬಸವಾದಿ ಶರಣರ ಜೀವನವೇ ಒಂದು ಮಾದರಿ ಎಲ್ಲರೂ ತಮ್ಮ ಜೀವನದಲ್ಲಿ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು ಎಂದರು. 

 ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಜಿಯವರು ಮನೆಮನೆಗೆ ತಿರುಗಿ ಶರಣರ ಜಗುಲಿಯ ಮೇಲಿದ್ದ ವಚನ ಕಟ್ಟು ಮತ್ತು ತಾಡೋಲೆಗಳನ್ನು ಸಂಗ್ರಹಿಸಿ ಬಾ.ಗು. ಹಳಕಟ್ಟೆಯವರಿಗೆ ನೀಡದೇ ಇದ್ದಿದ್ದರೆ ವಚನ ಸಾಹಿತ್ಯದಂಥ ಉನ್ನತ ಮೌಲ್ಯಗಳನ್ನು ಹೊಂದಿದ ಸಾಹಿತ್ಯದಿಂದ ನಾವು ವಂಚಿತರಾಗುತ್ತಿದ್ದೆವು ಡಾ.ಶಿವಬಸವ ಶ್ರೀಗಳ ಕಾರ್ಯ ಅದ್ವಿತೀಯವಾದದ್ದು ಎಂದರು. 

ದಾಸೋಹ ಸೇವೆ ನೀಡಿದ್ದ ಎಂ.ಎ.ಕೋರಿಶೆಟ್ಟಿ ಮತ್ತು ಗೀತಾ ಕೋರಿ ಶೆಟ್ಟಿ ದಂಪತಿಗಳನ್ನು ಸತ್ಕರಿಸಲಾಯಿತು. 

ಭಾಗ್ಯಶ್ರೀ ಬೆಣಚನಮರಡಿ ಅವರು ಸ್ವಾಗತಿಸಿದರು, ಸಿ.ಎಂ. ಬೂದಿಹಾಳ ಅವರು ಅತಿಥಿಗಳ ಪರಿಚಯ ಮಾಡಿದರು. ಕಾವೇರಿ ಕಿಲಾರಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಮುರುಗೇಶ ಶಿವಪೂಜಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಾಗತೀಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಪ್ರವೀಣ್ ಚಿಕಲಿ, ಎಸ್ ಜಿ ಸಿದ್ನಾಳ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Back to top button