Kannada NewsLatest

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಪ್ರಸ್ತಾಪ: ಬಸವರಾಜ ಹೊರಟ್ಟಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಶಾಸಕರ ಭವನ ಮತ್ತು ಸಚಿವಾಲಯ ನಿರ್ಮಾಣದ ಪ್ರಸ್ತಾವವನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಅವರು ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇನ್ನು ಮುಂದೆ ಬೆಳಗಾವಿಯಲ್ಲಿ ವರ್ಷದಲ್ಲಿ ಎರಡು ಬಾರಿ ವಿಧಾನ ಮಂಡಲದ ಕಲಾಪವನ್ನು ನಡೆಸುವ ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ವಿಧಾನ ಪರಿಷತ್‌ನ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದ್ದು, ದೇಶದಲ್ಲೇ ಮಾದರಿ ವಿಧಾನ ಪರಿಷತ್ ಆಗಿ ರೂಪಿಸಲಾಗುವುದು ಎಂದರು.

ಈ ಬಾರಿ ವಿಧಾನ ಮಂಡಲದ ಕಲಾಪಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ಸಾಧ್ಯವಾಗಿದೆ. ಒಟ್ಟು 11ಗಂಟೆ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಎಲ್ಲಾ ಸದಸ್ಯರು ಸಕ್ರಿಯವಾಗಿ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.

ಈ ಬಾರಿ 10ದಿನಗಳ ಅಧಿವೇಶನದಲ್ಲಿ 1384 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಈ ಪೈಕಿ 134 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 792 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಮಂಡಿಸಲಾಗಿದೆ. ನಿಯಮ 72ರಡಿಯಲ್ಲಿ 160 ಸೂಚನೆಗಳನ್ನು ಸ್ವೀಕರಿಸಿದ್ದು, ಈ ಪೈಕಿ 8 ಸೂಚನೆಗಳಿಗೆ ಉತ್ತರಿಸಲಾಗಿದೆ. 330ರಡಿ 111 ಸೂಚನೆಗಳ ಪೈಕಿ 13 ಪ್ರಸ್ತಾವನೆಗಳನ್ನು ಚರ್ಚಿಸಿ ಉತ್ತರಿಸಲಾಗಿದೆ. ನಿಯಮ 59ರಡಿ 4 ಸೂಚನೆಗಳ ಪೈಕಿ 3ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚಿಸಿ ಉತ್ತರಿಸಲಾಗಿದೆ.

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ 9 ವಿಧೇಯಕಗಳಿಗೆ ವಿಧಾನಪರಿಷತ್ ತಮ್ಮ ಸಹಮತಿ ನೀಡಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಶತಮಾನೋತ್ಸವ ಸಮ್ಮೇಳನದಲ್ಲಿ ಭಾಗವಹಿಸಿ ಕೈಗೊಂಡ ನಿರ್ಣಯಗಳಿಗೆ ಸದನ ಸಂಪೂರ್ಣ ಸಹಮತಿ ನೀಡಿದೆ.

ಸದನದ ಕಲಾಪಗಳಲ್ಲಿ ಎಲ್ಲಾ 74 ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ಸದನದ ಗಾಂಭೀರ್ಯತೆಯನ್ನು ಹೆಚ್ಚಿಸಿದ್ದಾರೆ. ಕಲಾಪಗಳಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸಿದ ಅತ್ಯುತ್ತಮ ಸದಸ್ಯರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಿಧಾನಸಭೆ ಅಧಿವೇಶನ ಯಶಸ್ವಿ ಕಾರ್ಯಕಲಾಪ ತೃಪ್ತಿಕರ: ಅಚ್ಟುಕಟ್ಟು ವ್ಯವಸ್ಥೆಗೆ ಸಭಾಧ್ಯಕ್ಷ ಕಾಗೇರಿ ಹರ್ಷ

ಬೆಳಗಾವಿಯ ಸುವರ್ಣ ಸೌಧದಲ್ಲಿ ಕಳೆದ ಡಿಸೆಂಬರ್ ೧೩ ರಿಂದ ಇಂದಿಯವರೆಗೆ ೧೦ ದಿನಗಳ ಕಾಲ ನಡೆದ ೧೫ನೇ ವಿಧಾನಸಭೆಯ ೧೧ನೇ ಅಧಿವೇಶನವು ಯಶಸ್ವಿಯಾಗಿದೆ. ಕಾರ್ಯಕಲಾಪಗಳು ತೃಪ್ತಿಕರವಾಗಿ ನಡೆದಿವೆ. ಅಧಿವೇಶನಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಕೈಗೊಂಡ ವ್ಯವಸ್ಥೆ ಅಚ್ಟುಕಟ್ಟಾಗಿ ನಿರ್ವಹಣೆಯಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅಧಿವೇಶನದ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ೧೦ ದಿನಗಳ ಕಾಲ ಸುಮಾರು ೫೨ ಗಂಟೆಗಳ ಕಾರ್ಯಕಲಾಪಗಳು ಜರುಗಿದೆ. ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಸೇರಿದಂತೆ ಸದನದ ಎಲ್ಲಾ ಸದಸ್ಯರು ಯಶಸ್ವಿಗೆ ಕಾರಣರಾಗಿದ್ದಾರೆ. ೧೫೦ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ೧೪೯ ಉತ್ತರವನ್ನು ಸರ್ಕಾರವು ಒದಗಿಸಿದೆ. ೨೦೩೨ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ೧೯೨೧ ಲಿಖಿತ ಉತ್ತರಗಳನ್ನು ನೀಡಲಾಗಿದೆ. ಅತಿವೃಷ್ಟಿ ಕುರಿತ ಚರ್ಚೆಯಲ್ಲಿ ೩೭ ಸದಸ್ಯರು ಭಾಗವಹಿಸಿ ಸುಮಾರು ೯ ಗಂಟೆಗಳ ಕಾಲ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಯಲ್ಲಿ ೧೩ ಸದಸ್ಯರು ಭಾಗವಹಿಸಿ ಸುಮಾರು ೬ ಗಂಟೆಗಳ ಕಾಲ ಚರ್ಚಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ೨೪ ಸೂಚನೆಗಳನ್ನು ಚರ್ಚಿಸಲಾಗಿದೆ. ೩೫೦ ಗಮನ ಸೆಳೆಯುವ ಸೂಚನೆಗಳ ಪೈಕಿ ೨೧೩ ಉತ್ತರಗಳನ್ನು ಸ್ವೀಕರಿಸಲಾಗಿದೆ. ಧನವಿನಿಯೋಗ ವಿಧೇಯಕ ಸೇರಿದಂತೆ ೧೦ ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಒಂದು ಹಕ್ಕು ಚ್ಯುತಿ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿ, ಚರ್ಚಿಸಿ ತೀರ್ಮಾನಿಸಲಾಗಿದೆ. ಪೂರಕ ಅಂದಾಜುಗಳ ಎರಡನೇ ಕಂತು ಹಾಗೂ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಗೆ ಅಂಗೀಕಾರ ದೊರೆತಿದೆ. ೨೦೧೮ನೇ ಸಾಲಿನ ಕರ್ನಾಟಕ ಎಸ್.ಸಿ., ಎಸ್.ಟಿ. ಹಾಗೂ ಇತರೆ ಹಿಂದುಳಿದ ವರ್ಗಗಳ ನೇಮಕಾತಿ, ಮೀಸಲಾತಿ ತಿದ್ದುಪಡೆ ವಿಧೇಯಕ ಹಿಂಪಡೆಯಲಾಗಿದೆ. ಕನ್ನಡ ಬಾವುಟ, ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗಳಿಗೆ ಕಿಡಿಗೇಡಿಗಳು ಅಪಮಾನ ಮಾಡಿದ ಕೃತ್ಯವನ್ನು ಖಂಡಿಸಿ ಸದನವು ನಿರ್ಣಯ ಕೈಗೊಂಡಿದೆ ಎಂದರು.

ಈ ವರ್ಷ ಒಟ್ಟು ೪೦ ದಿನಗಳ ಕಾಲ ಅಧಿವೇಶನ ನಡೆದಿದೆ. ಆಡಳಿತ ಹಾಗೂ ಪ್ರತಿ ಪಕ್ಷಗಳ ನಡುವೆ ಅಭಿಪ್ರಾಯ ಬೇಧಗಳು ಬಂದಾಗ ಅವರ ನಡುವೆ ಸಹಮತ ಮೂಡಿಸಿ ಸದನ ನಿರ್ವಹಿಸಲಾಗಿದೆ. ಅಧಿವೇಶನದಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಹೆಚ್ಚು ದಿನಗಳ ಕಾಲ ಅಧಿವೇಶನ ನಡೆಯಬೇಕು ಎಂಬುವುದು ಸದಸ್ಯರ ಹಾಗೂ ಸರ್ಕಾರದ ಅಪೇಕ್ಷೆಯಾಗಿದೆ. ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆ ಸದಸ್ಯರ ಸರಾಸರಿ ಹಾಜರಾತಿ ಶೇ. ೭೫ ರಷ್ಟು ಇತ್ತು. ಸುಮಾರು ೫೦೦೦ ಜನರು ಗ್ಯಾಲರಿ ಮೂಲಕ ಕಲಾಪಗಳನ್ನು ಆಸಕ್ತಿಯಿಂದ ವೀಕ್ಷಣೆ ಮಾಡಿದ್ದಾರೆ.

ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ: ಅಧಿವೇಶನದ ಯಶಸ್ವಿಗೆ ಉತ್ತಮ ವಸತಿ, ಸಾರಿಗೆ, ಆಹಾರ, ಆರೋಗ್ಯ ಮತ್ತಿತರ ಸೌಕರ್ಯಗಳನ್ನು ಜಿಲ್ಲಾಡಳಿತ ಅತ್ಯುತ್ತಮವಾಗಿ ನಿರ್ವಹಿಸಿದೆ. ಬೆಳಗಾವಿ ಜನರು ಆದರದ ಅತಿಥ್ಯ ನೀಡಿದ್ದಾರೆ. ಬೆಳಗಾವಿಯಲ್ಲಿ ಶಾಶ್ವತವಾಗಿ ಶಾಸಕರ ಭವನ ನಿರ್ಮಿಸುವ ಕುರಿತು ಮುಖ್ಯಮಂತ್ರಿಗಳು ನಿರ್ಣಯ ಕೈಗೊಳ್ಳುವರು.

ಸಾರಿಗೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿ ಪರಿಶೀಲನೆ

ರಾಜ್ಯ ಸಾರಿಗೆ ಇಲಾಖೆಯಲ್ಲಿ ೧೫೬೫ ಹುದ್ದೆಗಳು ಖಾಲಿ ಉಳಿದಿವೆ. ಬಡ್ತಿ ಹಾಗೂ ನೇರ ನೇಮಕಾತಿ ಮೂಲಕ ತುಂಬಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಪ್ರಕಾಶ ಕೆ. ರಾಠೋಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ನೇರ ನೇಮಕಾತಿ ಮೂಲಕ ೧೫೦ ವಾಹನ ನಿರೀಕ್ಷಕರ ಪಟ್ಟಿಯನ್ನು ಲೋಕಸೇವಾ ಆಯೋಗದಿಂದ ನಿರೀಕ್ಷಿಸಲಾಗುತ್ತಿದೆ. ಉಳಿದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೆ ಪರಿಶೀಲನೆ ನಡೆಸಲಾಗುತ್ತಿದೆ. ಅನುಕಂಪ ಆಧಾರಿತ ಹುದ್ದೆಗಳನ್ನು ನೇರ ನೇಮಕಾತಿ ಅಡಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಡ್ತಿ ಮೀಸಲಿರುವ ಹುದ್ದೆಗಳ ಪೈಕಿ ಆಯಾ ವೃಂದದಲ್ಲಿ ಅರ್ಹತೆಯಿರುವವರನ್ನು ಪರಿಗಣಿಸಿ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೃಷಿ ವಿಶ್ವವಿದ್ಯಾಲಯಗಳ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ: ಸಚಿವ ಪ್ರಭು ಚವ್ಹಾಣ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button