
ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ: ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1200ಕ್ಕೂ ಹೆಚ್ಚು ಪಿಕೆಪಿಎಸ್ಗಳ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗೆ 2 ಲಕ್ಷ ರೂ. ಆರೋಗ್ಯ ವಿಮೆ, 10 ಲಕ್ಷ ರೂ. ಸಹಜ ಸಾವು ವಿಮೆ, 20 ಲಕ್ಷ ರೂ.ಅಪಘಾತ ವಿಮೆ ಮಾಡಿಸುವುದಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿ ಪ್ರೇರಣಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಡಿಸಿಸಿ ಬ್ಯಾಂಕಿನಲ್ಲಿ ಕಳೆದ ಎರಡು ತಿಂಗಳಲ್ಲಿ 100 ಕೋಟಿ ರೂ. ಠೇವಣಿ ಹೆಚ್ಚಿದ್ದು, 2026ರ ಮಾರ್ಚ್ ಅಂತ್ಯದಲ್ಲಿ ಠೇವಣಿ ₹600 ರೂ. ಕೋಟಿಗೂ ಹೆಚ್ಚು ಸಂಗ್ರಹವಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿಯೇ ಬೆಳಗಾವಿ ಡಿಸಿಸಿ ಬ್ಯಾಂಕ್ ನ್ನು ನಂಬರ್ ಒನ್ ಸ್ಥಾನಕ್ಕೆ ತರಬೇಕೆಂಬುವುದು ತಮ್ಮ ಗುರಿಯಾಗಿದೆ” ಎಂದರು.
“ರೈತ ಸ್ನೇಹಿಯಾಗಿರುವ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ಸಹಕಾರದಿಂದ ನಿಪ್ಪಾಣಿಯ ಹಾಲಸಿದ್ದನಾಥ ಶುಗರ್ಸ್, ಸಂಕೇಶ್ವರದ ಹೀರಾ ಶುಗರ್ಸ್ ಹಾಗೂ ಹಿಡಕಲ್ ಡ್ಯಾಂ ಬಳಿಯ ಸಂಗಮ ಸಕ್ಕರೆ ಕಾರ್ಖಾನೆ ನಮ್ಮೊಂದಿಗಿವೆ. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ರೀತಿಯಲ್ಲಿಯೇ ಹೀರಾ ಹಾಗೂ ಸಂಗಮ ಸಕ್ಕರೆ ಕಾರ್ಖಾನೆಗಳನ್ನು 10 ವರ್ಷಗಳಲ್ಲಿ ಅಭಿವೃದ್ಧಿ ಮಾಡಿ ತೋರಿಸುವದಾಗಿ ಹೇಳಿದರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, “ಸಂಸಾರದಲ್ಲಿ ಗಂಡು ಹೆಣ್ಣು ಬೇಧ ಭಾವ ತಾಳದೇ ಒಂದಾಗಿ ನಡೆಯಬೇಕು. ಒಬ್ಬರು ಮಾಡುವ ಕಾರ್ಯ ಮತ್ತೊಬ್ಬರಿಗೆ ಅರಿವಾಗಬೇಕು. ಪತ್ನಿಯನ್ನು ಜೊತೆಗೆ ಕರೆದುಕೊಂಡು ಪುರುಷರು ಕೆಲಸ ಮಾಡಿದಲ್ಲಿ ಗಂಡನ ಕಷ್ಟ ಕಾರ್ಪಣ್ಯಗಳು ಆಕೆಗೆ ಅರ್ಥವಾಗುತ್ತವೆ. ಸತಿ ಪತಿ ಒಂದಾಗಿದ್ದರೆ ಭಗವಂತನಿಗೆ ಪ್ರಿಯರಾಗುತ್ತಾರೆ ಎಂದು ಹೇಳಿದ ಅವರು, ಭಕ್ತಿಗೀತೆಯೊಂದನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಇಚಲಕರಂಜಿ-ಹಂಚಿನಾಳದ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಮಾತಾನಾಡಿ, “ಜೊಲ್ಲೆ ದಂಪತಿ ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಹಕಾರ, ಶಿಕ್ಷಣ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ್ದು ನಮ್ಮೆಲ್ಲರ ಹೆಮ್ಮಯಾಗಿದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜ್ಯೋತಿಬಾ ಪಲ್ಲಕ್ಕಿ ಮೆರವಣಿಗೆ, ಸಾಮೂಹಿಕ ಗುಗ್ಗುಳೋತ್ಸವ, ವ್ಯಾಪಾರ ಮಳಿಗೆ ಉದ್ಘಾಟನೆ ಹಾಗೂ ದಂಪತಿ ಸಮೇತವಾಗಿ ಆಗಮಿಸಿದ ಬೀರೇಶ್ವರ ಹಾಗೂ ಜ್ಯೋತಿ ಕೋ ಅಪ್ ಕ್ರೆಡಿಟ್ ಸೊಸೈಟಿಯ ವ್ಯವಸ್ಥಾಪಕರು ಹಾಗೂ ನಿರ್ದೇಶಕರಿಗೆ ಸತ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಸದಲಗಾದ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ, ಹುಕ್ಕೇರಿಯ ವಿರಕ್ತಮಠದ ಶಿವಬಸವ ಸ್ವಾಮೀಜಿ, ಅಥಣಿಯ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಎಂ ಪಿ ಪಾಟೀಲ, ಬಸವರಾಜ ಕರ್ಲಟ್ಟಿ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಬಾಬುರಾವ ಮಾಳಿ, ಲಕ್ಷ್ಮಣ ಕಬಾಡೆ, ಸಿದ್ದು ನರಾಟೆ, ಬಸವಪ್ರಸಾದ ಜೊಲ್ಲೆ, ಯಶಸ್ವಿನಿ ಜೊಲ್ಲೆ, ರಾಜು ಕಾನಡೆ, ಬಾಳಾಸಾಹೇಬ ಜೋರಾಪೂರೆ, ಮೀನಾ ಪೋದ್ದಾರ, ಬಸಗೌಡ ಪಾಟೀಲ ಮುಂತಾದವರು ಇದ್ದರು.


