Kannada NewsLatest

ರಣಾಂಗಣವಾದ ಹಿರೇಬಾಗೆವಾಡಿ ರಸ್ತೆ; ಮಹಾರಾಷ್ಟ್ರ ವಾಹನಗಳ ಮೇಲೆ ಕರವೇ ಕಲ್ಲುತೂರಾಟ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕ್ಲಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರೇಬಾಗೇವಾಡಿ ಬಳಿ ಹೆದ್ದಾರಿಯಲ್ಲಿ ಕನ್ನಡ ಬಾವುಟ ಹಿಡಿದು ಪ್ರತಿಭಟನೆ ನಡೆಸಿರುವ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ನಡುರಸ್ತೆಗಳಲ್ಲೇ ಮಲಗಿ ರಸ್ತೆ ತಡೆ ನಡೆಸಿದ್ದಾರೆ. ಮತ್ತೊಂದೆಡೆ ಮಹಾರಾಷ್ಟ್ರದ ಲಾರಿಗಳನ್ನು ತಡೆದು ಮಸಿ ಬಳಿದ ಕಾರ್ಯಕರ್ತರು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಅಲ್ಲದೇ ಲಾರಿಗಳ ಮೇಲೆ ಹತ್ತಿ ಧರಣಿ ನಡೆಸಿದ್ದಾರೆ. ಹಿರೇಬಾಗೆವಾಡಿ ರಸ್ತೆ ರಣಾಂಗಣವಾಗಿ ಮಾರ್ಪಟ್ಟಿದೆ.

ಕರವೇ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲಿಸರು ಹರಸಾಹಸ ಪಟ್ಟಿದ್ದಾರೆ. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

 

ವಶಕ್ಕೆ:

ಮಹಾರಾಷ್ಟ್ರದ ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋಧಿಸಿ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಸಾವಿರಾರು ಕನ್ನಡದ ಧ್ವಜ ಹಾರಿಸಲು ಮಂಗಳವಾರ ಆಗಮಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎನಾರಾಯಣ ಗೌಡ ಹಾಗೂ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಹಿರೇಬಾಗೇವಾಡಿ ಟೋಲ್ ಗೆಟ್ ಬಳಿ ಬಂಧಿಸಿದರು.

ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರಕ್ಕೆ ಪಾಠ ಕಲಿಸಲು ನಗರದ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಕನ್ನಡದ ಧ್ವಜವನ್ನು ಹಾರಾಡಿಸಬೇಕೇನ್ನುವ ಉದ್ದೇಶದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಕರವೇ ಕಾರ್ಯಕರ್ತರನ್ನು ಹಿರೇಬಾಗೇವಾಡಿಯಲ್ಲಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ನಾನು ಬೆಳಗಾವಿಗೆ ಬರುವಾಗ ಬಿಡುವುದಿಲ್ಲ ಎಂದರೆ ಇದು ಪೊಲೀಸ್ ರಾಜ್ಯನಾ ? ನಾವೇನಾದರೂ ಬೇರೆ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತೇವೆ ಎನ್ನುವ ಭಯ ಇದೆಯಾ ಎಂದು ಪ್ರಶ್ನಿಸಿದರು.

ಬೆಳಗಾವಿ ಪೊಲೀಸರು ಕನ್ನಡಿಗರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಕರವೇ ಕಾರ್ಯಕರ್ತರನ್ನು ಬೆಳಗಾವಿ ಪ್ರವೇಶ ಮಾಡದಂತೆ ತಡೆ ಹಿಡಿದಿರುವ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಚರ್ಚೆ ನಡೆಸುವೆ. ನಾವು ಮಹಾರಾಷ್ಟ್ರಕ್ಕೆ ‌ಹೊಗುತ್ತಿಲ್ಲ ಸ್ವಾಮಿ. ನಾನು ಕರ್ನಾಟಕದ ಬೆಳಗಾವಿಗೆ ಹೊಗುತ್ತಿರುವುದು. ನಮ್ಮನ್ನು ನಡುರಸ್ತೆಯಲ್ಲಿಯೇ ತಡೆಯುವ ಪೊಲೀಸರ ನಡೆ ಸರಿಯಾದುದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಗಟೆ ಕಾಲೇಜಿನಲ್ಲಿ ನಡೆದ ಗಲಾಟೆಯಲ್ಲಿ ಪೊಲೀಸರು ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕನ್ನಡದ‌ ಬಾವುಟದ ಬಗ್ಗೆ ಅವಹೇಳನ ಮಾಡಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರು ಕನ್ನಡದ ಬಾವುಟದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವುದು ತಪ್ಪು. ಈ‌ ಕುರಿತು ನಾನು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕಕುಮಾರ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಇದನ್ನು‌ ತ‌ನಿಖೆ ನಡೆಸುತ್ತಿದ್ದಾರೆ ಅಂತೆ ತನಿಖೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಮಹಾರಾಷ್ಟ್ರದ ಉಪಟಳಕ್ಕೆ ಪಾಠ ಕಲಿಸಲು ಸಾವಿರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುವ ಸಂದರ್ಭದಲ್ಲಿ ಪೊಲೀಸರು ಹಿರೇಬಾಗೇವಾಡಿಯಲ್ಲಿ ಬಂಧಿಸಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ‌ಪೊಲೀಸರನ್ನು ಮುಂದೆ ಬಿಟ್ಟು ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ. ಮಹಾರಾಷ್ಟ್ರದ ಮುಖಂಡರಿಗೆ ಬೆಳಗಾವಿಯಲ್ಲಿ ಮಹಾಮೇಳಾವ್, ಎಂಇಎಸ್ ಗೆ ಸಾರ್ವಜನಿಕ ಸಭೆ ಮಾಡಲು ಅವಕಾಶ ಕೊಡುತ್ತದೆ ಸರಕಾರ. ಆದರೆ ಕರ್ನಾಟಕದಲ್ಲಿದ್ದು ನಾಡು, ನುಡಿಯ ಬಗ್ಗೆ ಹೋರಾಟ ಮಾಡುವ ಕರವೇ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸದೆ ಇರುವುದು ದುರಂತದ ಸಂಗತಿ ಎಂದರು.

ಗಣೇಶ ರೋಕಡೆ, ರುದ್ರಗೌಡ ಪಾಟೀಲ, ಮಹೇಶ ಹಟ್ಟಿಹೊಳಿ, ರಮೇಶ ತಳವಾರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ

ಬೆಳಗಾವಿಯಲ್ಲಿ ಬಹಿರಂಗ ಸಭೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದತ್ತ ಮುನ್ನುಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿತ್ತಿರುವ ಮಹಾರಾಷ್ಟ್ರ ನೋಂದಣಿ ಯ 5ಕ್ಕೂ ಹೆಚ್ಚು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದರು.

ಪುಣೆಯಿಂದ  ಬೆಂಗಳೂರು ಕಡೆಗೆ ಹೊರಟಿದ್ದ ಮಹಾರಾಷ್ಟ್ರ ನೋಂದಣಿ ವಾಹನದ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದರು. ಈ ವೇಳೆ ಲಾರಿ ಗಾಜು ಪುಡಿಪುಡಿಯಾಗಿದೆ.

ಮಹಾರಾಷ್ಟ್ರ ನೋಂದಣಿಯ ಅನೇಕ ವಾಹನಗಳನ್ನು ತೊಡೆದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಮಹಾರಾಷ್ಟ್ರ ನೋಂದಣಿ ಇರುವ ಫಲಕದ ಮೇಲು ಕಪ್ಪುಮಸಿ ಬಳಿದು ಆಕ್ರೋಶ ಹೊರಹಾಕಿದರು.

 

100 ವಾಹನಗಳಲ್ಲಿ ಕರವೇ ಬೆಳಗಾವಿಗೆ; 1000 ಕನ್ನಡ ಬಾವುಟ ಹಾರಾಟ

https://pragati.taskdun.com/belagavi1000-kannada-flagkaravavenarayanagowda/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button