*ರಾಜ್ಯದಲ್ಲಿ ಗಢಗಢ ನಡಗಿಸುವ ಚಳಿ: ಅಲರ್ಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ : ಕಳೆದೆರೆಡು ದಿನಗಳಿಂದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನ 2ರಿಂದ 4 ಡಿಗ್ರಿ ಕುಸಿತವಾಗಿದ್ದು ಮೈನಡುಗಿಸುವ ಚಳಿಗೆ ಸಾರ್ವಜನಿಕರು ತತ್ತರಿಸಿದ್ದಾರೆ. ಡಿ. 16 ರ ಬಳಿಕ ಚಳಿ ಇನ್ನಷ್ಟು ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇವತ್ತು ಹಾಗೂ ನಾಳೆ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗದಲ್ಲಿ ಚಳಿ ಇರಲಿದ್ದು ಅರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಜೋರಿದೆ. ರಾಜ್ಯದ ಮುಕುಟಮಣಿ ಬೀದರ್ 9 ಡಿಗ್ರಿ, ಧಾರವಾಡ 9.6 ಡಿಗ್ರಿ ವಿಜಯಪುರ 10 ಡಿಗ್ರಿ ರಾಯಚೂರು 10 ಡಿಗ್ರಿ ಮತ್ತು ಹಾಸನ ಜಿಲ್ಲೆಯಲ್ಲಿ 11.2 ಡಿಗ್ರಿ ತಾಪಮಾನ ದಾಖಲಾಗಿದೆ ಅಲ್ಲದೆ ಬಾಗಲಕೋಟೆ 11.1 ಡಿಗ್ರಿ ದಾಖಲಾಗಿದೆ.
ಬೆಳಗಾವಿ 10.4 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಗ್ರಾಮಾಂತರ 11.8 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರ 12.8 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ದಕ್ಷಿಣ 14.2 ಡಿಗ್ರಿ ಸೆಲ್ಸಿಯಸ್, ಬೀದರ್ 9.3 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ 13.2 ಡಿಗ್ರಿ ಸೆಲ್ಸಿಯಸ್, ಚಿಕ್ಕಬಳ್ಳಾಪುರ 11.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ರಾಯಚೂರು, ಕಲಬುರಗಿ ಕೆಲವು ಪ್ರದೇಶಗಳಲ್ಲಿ ಉಷ್ಣಾಂಶ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಈಶಾನ್ಯ ಮಾರುತಗಳು ದಕ್ಷಿಣದ ಕಡೆಗೆ ಶೀತ, ಶುಷ್ಕ ಗಾಳಿಯನ್ನು ಒಯ್ಯುತ್ತಿವೆ. ಇದು ರಾತ್ರಿಯ ಚಳಿ ಮತ್ತು ಬೆಳಗಿನ ಅವಧಿಯಲ್ಲಿ ಮಂಜು ಬೀಳುವುದಕ್ಕೆ ಕಾರಣವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.



