Latest

ಜನರು ಜಲೋತ್ಸವದಲ್ಲಿ ನರಳಿದ್ದಾರೆ, ಸರ್ಕಾರದವರು ಜನೋತ್ಸವದಲ್ಲಿ ಮುಳುಗಿದ್ದಾರೆ; ಕಿಡಿಕಾರಿದ ಕಾಂಗ್ರೆಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅತಿವೃಷ್ಟಿಯಿಂದ ರಾಜ್ಯದ ಜನತೆ ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದಾರೆ ಇಂತಹ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮಾಡಲು ಹೊರಟಿರುವ ಜನೋತ್ಸವ ಸಮಾವೇಶದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ ‘ಜನಸ್ಪಂದನ’ಎಂದು ಹೆಸರು ಬದಲಿಸಿದೆಯಂತೆ! ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ? ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೆ ಇನ್ನೆಲ್ಲೋ ಬಸ್ಸು ಲಾರಿಗಳಲ್ಲಿ ಜನರನ್ನು ಕರೆತಂದು “ಜನಸ್ಪಂದನೆ” ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದೆಯೇ? ಎಂದು ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಸಹಜಸ್ಥಿತಿಗೆ ಬರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಬಿಬಿಎಂಪಿಯ ನಿರ್ಲಕ್ಷ್ಯದಿಂದ ಬೆಂಗಳೂರು ದ್ವೀಪವಾಗಿ ಮಾರ್ಪಟ್ಟಿದೆ.ಮಳೆ ಕಡಿಮೆಯಾದರೂ ನೆರೆಇನ್ನೂ ಹಾಗೆಯೇ ಇದೆ. ತ್ವರಿತ ಗತಿಯ ಪರಿಹಾರ ಕಾರ್ಯಾಚರಣೆ ಕೈಗೊಳ್ಳದ ಸಿಎಂ ಬೊಮ್ಮಾಯಿ ಅವರ ಬೇಜವಾಬ್ದಾರಿ ಸರ್ಕಾರವೇ ಈ ಅನಾಹುತಗಳಿಗೆ ನೇರ ಹೊಣೆ ಎಂದು ಕಿಡಿಕಾರಿದೆ.

ನಾಪತ್ತೆಯಾಗಿದ್ದವರು ಹೇಳಿಕೆ ಕೊಡಲಷ್ಟೇ ಹೊರಬಂದಿರುವ ಸಚಿವ ಮುನಿರತ್ನರವರೇ, ತಾವೂ ಬೆಂಗಳೂರಿಗೆ ವಲಸೆ ಬಂದವರಲ್ಲವೇ? ಜನತೆ ಬಯ್ಯುತ್ತಿರುವುದು ಬೆಂಗಳೂರನ್ನಲ್ಲ, ನಿಮ್ಮ ಸರ್ಕಾರದ ದುರಾಡಳಿತವನ್ನ, ನಿಮ್ಮ ನಿರ್ಲಕ್ಷ್ಯವನ್ನ. ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಎದುರು ನಿಂತು ಇದೇ ಮಾತುಗಳನ್ನು ಹೇಳಿ ‘ಶೌರ್ಯ ಪ್ರದರ್ಶನ’ ಮಾಡಬಲ್ಲಿರಾ? ಎಂದು ಪ್ರಶ್ನಿಸಿದೆ.

ಜನರು ಜಲೋತ್ಸವದಲ್ಲಿ ನರಳಿದ್ದಾರೆ, ಸರ್ಕಾರದವರು ಜನೋತ್ಸವದಲ್ಲಿ ಮುಳುಗಿದ್ದಾರೆ! ಜನರ ಬದುಕಿನ ಸಮಾಧಿ ಮೇಲೆ ಉತ್ಸವ ಮಾಡಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರ ಬಗ್ಗೆ ಕನಿಷ್ಠ ಕಾಳಜಿ, ಕಳಕಳಿ ಇಲ್ಲದಾಗಿದೆ. ಸಿಎಂ ಬೊಮ್ಮಾಯಿ ಅವರೇ, ತಾವು ಜನಸ್ಪಂದನೆ ಮಾಡಬೇಕಿರುವುದು ನೆರೆಪೀಡಿತ ಪ್ರದೇಶದಲ್ಲಿ ಹೊರತು ಅದ್ದೂರಿ ಆಚರಣೆಯಲ್ಲಲ್ಲ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

Home add -Advt

ಮುರುಘಾಶ್ರೀ ಪ್ರಕರಣ; ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನಕ್ಕೆ

https://pragati.taskdun.com/latest/murughashree-casewarden-rashmijudicial-custody/

Related Articles

Back to top button