Latest

*ಪೌರ ಕಾರ್ಮಿಕರ ದಿನಾಚರಣೆ ಬಹಿಷ್ಕರಿಸಿ ಧರಣಿ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸೇವೆ ಖಾಯಂಗೊಳಿಸುವುದು, ಬೆಳಗಿನ‌ ತಿಂಡಿ ಸೇರಿ‌ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಪೌರ ಕಾರ್ಮಿಕರ ದಿನಾಚರಣೆಯನ್ನು ಬಹಿಷ್ಕರಿಸುವ ಮೂಲಕ ಪೌರ ಕಾರ್ಮಿಕರು ಧರಣಿ ನಡೆಸಿದರು. 

ಇಂದು ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಧರಣಿ ಕುಳಿತ ಪೌರ ಕಾರ್ಮಿಕರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಪೌರ ಕಾರ್ಮಿಕರ ದಿನ ಆಚರಿಸಿದರೆ ಸಾಲದು. ನಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಆಮೇಲೆ ಕಾರ್ಯಕ್ರಮ ಮಾಡುವಂತೆ ಆಡಳಿತಕ್ಕೆ ಒತ್ತಾಯಿಸಿದರು.

ಕಳೆದ ಒಂದೂವರೆ ವರ್ಷದಿಂದ ಖಾಯಂ ನೇಮಕಾತಿ ಮಾಡದೇ ಇರುವ 100 ಜನ ಪೌರಕಾರ್ಮಿಕರಿಗೆ ತಕ್ಷಣವೇ ಖಾಯಂ ನೇಮಕಾತಿ ಆದೇಶ ಪತ್ರ ನೀಡಬೇಕು. ಅದೇ ರೀತಿ 134 ಸಂಖ್ಯಾತಿರಿಕ್ತ  ಪೌರಕಾರ್ಮಿಕರಿಗೆ ಖಾಯಂ ಆದೇಶ ನೀಡಬೇಕೆಂದು 2023ರ ಅಕ್ಟೋಬರ್ 27 ರಂದು ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಭಿವೃದ್ಧಿ ಬೆಂಗಳೂರು ಇವರಿಂದ ಸೇರ್ಪಡೆ ಆದೇಶ ನೀಡಿ ಒಂದು ವರ್ಷ ಆಗುತ್ತಾ ಬಂದರೂ ಇನ್ನು ಯಾವುದೇ ಕ್ರಮ ಜರುಗಿಸಿಲ್ಲ. ಈ ಸಂಬಂಧ ನೇಮಕಾತಿ ಪ್ರಕಟಣೆ ಹೊರಡಿಸಬೇಕು.

ಇದೇ ಆಗಸ್ಟ್ 21ರಂದು ನಡೆದ ಸಭೆಯಲ್ಲಿ ಒಪ್ಪಿಕೊಂಡಂತೆ ಎಲ್ಲ 253 ಪೌರಕಾರ್ಮಿಕ ವಸತಿ ಗೃಹಕ್ಕೆ ಐಚ್ಛಿಕ ಪತ್ರ ನೀಡುವ ಬಗ್ಗೆ ಸೂಚನಾ ಪತ್ರಗಳನ್ನು ಜಾರಿ ಮಾಡಬೇಕು. ಇನ್ನು ಆನಂದವಾಡಿಯ ರಮಾಬಾಯಿ ಅಂಬೇಡ್ಕರ ಹಾಲ್‌ನಲ್ಲಿ ಆಧುನಿಕ ಜಿಮ್ ಮತ್ತು ಗ್ರಂಥಾಲಯಕ್ಕೆ 2023-24ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡ 38 ಲಕ್ಷ ರೂಪಾಯಿ ಮಿಸಲಿಟ್ಟ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಬೇಕು. ಅಲ್ಲದೇ 154 ಮಂದಿ ಖಾಯಂ ಪೌರಕಾರ್ಮಿಕರಿಗೆ ಕಳೆದ 7 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಸಂಬಳ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button