
ಪ್ರಗತಿವಾಹಿನಿ ಸುದ್ದಿ : ಜನವರಿ 27ರಂದು ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವೇಳೆ ವರನ ಕಾರು ಅಡ್ಡಗಟ್ಟಿ ನೀನು ಮದುವೆ ಮನೆಗೆ ಅಲ್ಲ ಸ್ಮಶಾನಕ್ಕೆ ಹೋಗಬೇಕು ಎಂದು ಬೆದರಿಕೆ ಹಾಕಿ ಚಾಕು ಮತ್ತು ಡ್ಯಾಗರ್ನಿಂದ ಹಲ್ಲೆ ನಡೆಸಿ ಗ್ಯಾಂಗ್ ಒಂದು ಪರಾರಿಯಾಗಿತ್ತು. ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕೊಳ್ಳೇಗಾಲದ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವೇಳೆ ವರ ರವೀಶ್ ಎಂಬಾತನ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರವೀಶ್ನ ಮದುವೆಯಾಗಬೇಕಿದ್ದ ವಧು ನಯನಾ, ಆಕೆಯ ಪ್ರಿಯಕರ ದರ್ಶನ್ ಹಾಗೂ ಒಬ್ಬ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಯ ವೇಳೆ ಅಸಲಿ ಕಾರಣ ಬಯಲಾಗಿದೆ. ಪೊಲೀಸ್ ತನಿಖೆಯ ಪ್ರಕಾರ, ಮದುವೆ ನಿಲ್ಲಿಸುವ ಉದ್ದೇಶದಿಂದಲೇ ವಧು ನಯನಾ ತನ್ನ ಪ್ರಿಯಕರ ದರ್ಶನ್ ಜೊತೆ ಸೇರಿ ಈ ದಾಳಿ ಪ್ಲಾನ್ ಮಾಡಿದ್ದಾಳೆ ಎನ್ನುವುದು ದೃಢಪಟ್ಟಿದೆ.
ವೃತ್ತಿಯಲ್ಲಿ ತಮಟೆ ಹೊಡೆಯುವ ಕೆಲಸ ಮಾಡುತ್ತಿದ್ದ ದರ್ಶನ್ ನನ್ನು ನಯನಾ ಪ್ರೀತಿಸುತ್ತಿದ್ದಳು, ಆದರೆ ಆತನ ಕೆಲಸದ ಬಗ್ಗೆ ಮನೆಯವರ ಬಳಿ ಹೇಳಲು ಭಯಪತ್ತಿದ್ದಳು. ಹೀಗಾಗಿ ಮನೆಯವರು ರವೀಶ್ ಜೊತೆ ನಯನಾಗೆ ಮದುವೆ ನಿಶ್ಚಯಿಸಿದರು.
ಇತ್ತ ನಯನಾ ಮಾತ್ರ ರವೀಶ್ ಜೊತೆ ಮದುವೆಯಾಗಲು ಒಪ್ಪಿರಲಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಈ ಮದುವೆ ನಡೆಯಬಾರದು, ಹೇಗಾದರೂ ಮಾಡಿ ಮದುವೆ ನಿಲ್ಲಿಸುವಂತೆ ಪ್ರಿಯಕರ ದರ್ಶನ್ ಗೆ ತಿಳಿಸಿದ್ದಳು
ಘಟನೆಯ ನಂತರ ಆಸ್ಪತ್ರೆಗೂ ಬಂದ ನಯನಾ, ಮದುವೆಯಾಗಲು ಒತ್ತಾಯಿಸುವ ನಾಟಕವಾಡಿದ್ದಾಳೆ. ಆದರೆ ಈ ವೇಳೆ ರವೀಶ್ಗೆ ನಯನಾಳ ವರ್ತನೆ ಬಗ್ಗೆ ಅನುಮಾನ ಮೂಡಿದ್ದು, ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿದ್ದಾನೆ. ಇದೀಗ ಪೊಲೀಸರ ತನಿಖೆಯಿಂದ ನಯನಾಳ ಅಸಲಿ ಮುಖವಾಡ ಬಯಲಾಗಿದೆ.




