Karnataka NewsPolitics

*ಕೇರಳ ಸಚಿವರ ನೇತೃತ್ವದಲ್ಲಿ ಕ್ಯಾಂಪಾ ಹಣಕ್ಕಾಗಿ ಕೇಂದ್ರಕ್ಕೆ ನಿಯೋಗ*

ಈಶ್ವರ ಖಂಡ್ರೆ ನೇತೃತ್ವದ ಸಚಿವರ ಮಟ್ಟದ ಸಭೆಯಲ್ಲಿ ನಿರ್ಣಯ

ಪ್ರಗತಿವಾಹಿನಿ ಸುದ್ದಿ: ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಉತ್ತಮ ಸಾಧನವಾಗಿದ್ದು, ಇದರ ನಿರ್ಮಾಣಕ್ಕೆ ಹೆಚ್ಚಿನ ಹಣಕಾಸಿನ ಅಗತ್ಯವಿದೆ. ಆದರೆ, ಕೇಂದ್ರ ಸರ್ಕಾರ ನಮ್ಮ ಕ್ಯಾಂಪಾ ನಿಧಿಯನ್ನೇ ಇದಕ್ಕೆ ನೀಡುತ್ತಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ.


ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಸಚಿವರ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕ್ಯಾಂಪಾ ಹಣವನ್ನು ರೈಲ್ವೆ ಬ್ಯಾರಿಕೇಡ್ ಗೆ ಬಿಡುಗಡೆ ಮಾಡುವ ಕುರಿತಂತೆ ಇಂದು ಇಲ್ಲಿ ಪಾಲ್ಗೊಂಡಿರುವ ಎಲ್ಲ ಸಚಿವರೂ ಕೇಂದ್ರ ಹವಾಮಾನ ಬದಲಾವಣೆ, ಪರಿಸರ ಮತ್ತು ಅರಣ್ಯ ಸಚಿವರಿಗೆ ಮನವಿ ಸಲ್ಲಿಸೋಣ ಎಂಬ ಸಲಹೆ ನೀಡಿದರು.


ಕೇರಳದ ಅರಣ್ಯ ಸಚಿವ ಎ.ಕೆ. ಸಸೀಂದ್ರನ್ ಈ ಉಪಕ್ರಮದ ನೇತೃತ್ವವನ್ನು ತಾವು ವಹಿಸುವುದಾಗಿ ಸ್ವಯಂ ಪ್ರೇರಿತವಾಗಿ ಪ್ರಕಟಿಸಿದರು. ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ಅರಣ್ಯ ಸಚಿವರನ್ನೂ ಕರೆದುಕೊಂಡು ದೆಹಲಿಗೆ ನಿಯೋಗ ತೆರಳುವ ಮೂಲಕ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ದಿನಾಂಕ ನಿಗದಿ ಮಾಡುವಂತೆ ಈಶ್ವರ ಖಂಡ್ರೆ ತಿಳಿಸಿದರು. ಸಭೆ ಸಮ್ಮತಿಸಿತು.


ಲಾಂಟನಾ ಮತ್ತು ಸನ್ನಾ ಸಮಸ್ಯೆ ಪರಿಹಾರಕ್ಕೆ ಬೇರೆ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತ ಚರ್ಚೆಯ ವೇಳೆ, ನಿರಂತರವಾಗಿ ಲಾಂಟನಾವನ್ನು ಮೂಲೋತ್ಪಾಟನೆ ಮಾಡುವುದೇ ಪರಿಹಾರ ಎಂಬ ಅಭಿಪ್ರಾಯ ವ್ಯಕ್ತವಾಯಿತು.


ಕೆಲವು ಆದಿವಾಸಿಗಳು ಲಾಂಟನಾದಿಂದ ಅಲಂಕಾರಿಕ ವಸ್ತು ಮತ್ತು ವನ್ಯಮೃಗಗಳ ಪ್ರತಿಕೃತಿ ನಿರ್ಮಾಣ ಮಾಡುತ್ತಿದ್ದು, ಅವರೇ ಸ್ವತಃ ಮುಂದೆ ಬಂದು ಲಾಂಟನಾ ಕಳೆ ತೆಗೆಯುವುದಾದರೆ ಅವರಿಗೆ ಅವಕಾಶ ಕೊಡುವ ಬಗ್ಗೆಯೂ ಚರ್ಚಿಸಲಾಯಿತು.


ಆನೆ-ಮಾನವ ಸಂಘರ್ಷದಲ್ಲಿ ಮೃತಪಟ್ಟವರಿಗೆ ಮತ್ತು ಬೆಳೆ ನಷ್ಟಕ್ಕೊಳಗಾದವರಿಗೆ ನೀಡಲಾಗುತ್ತಿರುವ ಪರಿಹಾರ, ಆನೆಗಳು ನಾಡಿಗೆ ಬಾರದಂತೆ ತಡೆಯಲು ಯಾವ ಯಾವ ರಾಜ್ಯದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಈಶ್ವರ ಖಂಡ್ರೆ ಅವರು ಇತರ ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆದರು.


ಜಾರ್ಖಂಡ್ ನ ಅರಣ್ಯ ಸಚಿವ ಬೈದ್ಯನಾಥ್ ರಾಮ್, ತಮಿಳುನಾಡು ಅರಣ್ಯ ಸಚಿವ ಎಂ. ಮಥಿವೆಂಥನ್, ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button