Kannada NewsLatest

ಜಿಲ್ಲೆಯಲ್ಲಿ ಅಥಣಿ, ಸವದತ್ತಿ, ರಾಮದುರ್ಗ ಬ್ಲಾಕ್ ಆಯ್ಕೆ, ನೀರು ಸಂರಕ್ಷಣೆಗೆ ಜಲಶಕ್ತಿ ಅಭಿಯಾನ – ಗಿರೀಶ್ ಹೊಸೂರ

ಜಿಲ್ಲೆಯಲ್ಲಿ ಅಥಣಿ, ಸವದತ್ತಿ, ರಾಮದುರ್ಗ ಬ್ಲಾಕ್ ಆಯ್ಕೆ, ನೀರು ಸಂರಕ್ಷಣೆಗೆ ಜಲಶಕ್ತಿ ಅಭಿಯಾನ – ಗಿರೀಶ್ ಹೊಸೂರ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಮೂರು ಬ್ಲಾಕ್‌ಗಳಲ್ಲಿ ಜಲಸಂರಕ್ಷಣೆ; ಮಳೆನೀರು ಕೊಯ್ಲು, ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ ಮತ್ತು ನದಿಗಳ ರಕ್ಷಿಸುವುದು; ಜಲಮರುಪೂರಣ ಮತ್ತು ನೀರು ಮರುಬಳಕೆ ಮತ್ತು ಅರಣ್ಣಿಕರ ಮಾಡುವುದು ಜಲಶಕ್ತಿ ಅಭಿಯಾನದ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಉಚ್ಛ ಶಿಕ್ಷಣ ವಿಭಾಗದ ಜಂಟಿ ಕಾರ್ಯದರ್ಶಿ ಗಿರೀಶ್ ಹೊಸೂರ ತಿಳಿಸಿದರು.

ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.12) ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜುಲೈ 1ರಿಂದ ದೇಶದಾದ್ಯಂತ ಜಲಶಕ್ತಿ ಅಭಿಯಾನ ಜಾರಿಯಾಗಿದೆ. ಅಂತರ್ಜಲ ಕೊರತೆ, ನೀರಿನ ಅಭಾವದ ಆಧಾರದ ಮೇಲೆ 1590 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಅಥಣಿ, ಸವದತ್ತಿ ಹಾಗೂ ರಾಮದುರ್ಗ ಬ್ಲಾಕ್‌ಗಳನ್ನು ಗುರುತಿಸಲಾಗಿದೆ.

ಈ ಮೂರೂ ಬ್ಲಾಕ್‌ಗಳಲ್ಲಿ ಜಲಶಕ್ತಿ ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ ಜತೆಗೆ ಜಲ ಮರುಪೂರಣ, ಪಾರಂಪರಿಕ ಕೆರೆ, ಬಾವಿಗಳ ಪುನರುಜ್ಜೀವನ, ಅರಣ್ಯಿಕರ ಮತ್ತಿತರ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಅಭಿಯಾನದ ಅನುಷ್ಠಾನಕ್ಕಾಗಿ ಜಿಲ್ಲೆಗೆ ಕೇಂದ್ರ ಸರ್ಕಾರ ನಿಯೋಜಿಸಿರುವ ಮೂವರು ಅಧಿಕಾರಿಗಳ ತಂಡವು ಅಭಿಯಾನದ ನೇತೃತ್ವ ವಹಿಸಲಿದೆ ಎಂದು ತಿಳಿಸಿದರು.

ಲಶಕ್ತಿ ಸಚಿವಾಲಯದ ನೇತೃತ್ವದಲ್ಲಿ ಏಳು ಸಚಿವಾಲಗಳ ಸಹಭಾಗಿತ್ವದಲ್ಲಿ ಅಭಿಯಾನ ನಡೆಯಲಿದೆ. ನರೇಗಾ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲಾಗುವುದು.

ಜಲಸಂರಕ್ಷಣೆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಸ್ಥಳೀಯವಾಗಿ ಉತ್ತಮ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜಲಶಕ್ತಿ ಅಭಿಯಾನದ ಯಶಸ್ಸಿಗೆ ಶ್ರಮಿಸಲಾಗುವುದು.

ಅಭಿಯಾನ ಅನುಷ್ಠಾನದ ಪ್ರತಿ ಹಂತವನ್ನು ರಾಷ್ಟ್ರಮಟ್ಟದಲ್ಲಿಯೇ ನಿರಂತರ ನಿಗಾ ವಹಿಸಲಾಗುತ್ತದೆ. ಪ್ರತಿ ಬ್ಲಾಕ್‌ಗಳಲ್ಲಿನ ಸಾಧನೆಯನ್ನು ಗುರುತಿಸಿ, ಪುರಸ್ಕರಿಸುವ ಬಗ್ಗೆಯೂ ಚಿಂತನೆಯಿದೆ.

ಬೆಳಗಾವಿಯಲ್ಲಿ ಜಲಶಕ್ತಿ ಅಭಿಯಾನವನ್ನು ಇಡೀ ದೇಶಕ್ಕೆ ಮಾದರಿಯಾಗಿ ರೂಪಿಸಲು ಎಲ್ಲರೂ ಸಮನ್ವಯದಿಂದ ಕೆಲಸ ಮಾಡೋಣ ಎಂದು ಗಿರೀಶ್ ಹೊಸೂರ ಹೇಳಿದರು.

ಇದಕ್ಕೂ ಮುಂಚೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಜಲಶಕ್ತಿ ಅಭಿಯಾನವು ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಆಂದೋಲನವಾಗಿದೆ ಎಂದು ತಿಳಿಸಿದರು.

ನೀರಿನ ಅತಿಯಾದ ಬಳಕೆ, ಕುಡಿಯುವ ನೀರಿನ ಕೊರತೆ ಹಾಗೂ ಜಲಮೂಲಗಳ ನಾಶದಿಂದ ತಲಾವಾರು ನೀರಿನ ಲಭ್ಯತೆ ಅತ್ಯಂತ ಕಡಿಮೆಯಾಗಿದೆ. ಹೀಗೆ ಮುಂದುವರಿದರೆ ಕುಡಿಯುವ ನೀರು, ಬೆಳೆಗಳಿಗೆ ನೀರು ಕೊರತೆ ಮತ್ತು ಪರಿಸರ ನಾಶ ಆಗಬಹುದು. ಆದ್ದರಿಂದ ಜಲಮೂಲ ರಕ್ಷಣೆ ನಿಟ್ಟಿನಲ್ಲಿ ಜಲಶಕ್ತಿ ಅಭಿಯಾನ ಪ್ರಧಾನ ಮಂತ್ರಿ ಕನಸು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಜಲಸಂರಕ್ಷಣೆ ನಿಟ್ಟಿನಲ್ಲಿ ಪ್ರತಿ ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ಸಿಸಿ ನೀಡುವಾಗ ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿರುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಟ್ಟಡ ಪರವಾನಗಿ ನೀಡುವುದಕ್ಕೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಬೈಲಾದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ನರೇಗಾ ಕಾಮಗಾರಿಗಳಲ್ಲಿ ಜಲಸಂರಕ್ಷಣೆಗೆ ಆದ್ಯತೆಯನ್ನು ನೀಡುವಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.Campaign for Water Conservation says Girish Hosura

ಜಿಲ್ಲೆಯಲ್ಲಿ 3 ಬ್ಲಾಕ್ ಗಳ ಆಯ್ಕೆ :

ರಾಜ್ಯದ 53 ತಾಲ್ಲೂಕಿನಲ್ಲಿ ಜಲಮೂಲ ಕ್ಷೀಣವಾಗಿದೆ. ಅದನ್ನು ಪಾರಂಪರಿಕ ರೀತಿಯಲ್ಲಿ ಪುನಶ್ಚೇತನ ಗೊಳಿಸುವುದು ಅಭಿಯಾನ ಮೂಲ ಉದ್ದೇಶವಾಗಿದೆ.

ಬೆಳಗಾವಿಯಲ್ಲಿ ಅಥಣಿ, ರಾಮದುರ್ಗ ಹಾಗೂ ಸವದತ್ತಿ ತಾಲ್ಲೂಕಿನಲ್ಲಿ ಜಲಶಕ್ತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೇಂದ್ರದ ಮೂರು ಅಧಿಕಾರಿಗಳ ತಂಡವನ್ನು ಕೇಂದ್ರ ಸರ್ಕಾರವು ನಿಯೋಜಿಸಿದೆ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಗಿರೀಶ್ ಹೊಸೂರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರವಿ ಹಾಗೂ ನಾಯ್ಡು ಅವರು ಅಭಿಯಾನದ ನೇತೃತ್ವ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಲಮೂಲಗಳ ಸಂರಕ್ಷಣೆಗಾಗಿ ಬೆಳಗಾವಿ ಜಿಲ್ಲೆಯಲ್ಲಿ ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾಗಿರುವ ಅನೇಕ ಕಾಮಗಾರಿಗಳ ಬಗ್ಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸಭೆಯಲ್ಲಿ ವಿವರಿಸಿದರು.

ಜಿಲ್ಲೆಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿರುವುದರಿಂದ ಜನರಿಗೂ ಜಲಸಂರಕ್ಷಣೆಯ ಮಹತ್ವದ ಬಗ್ಗೆ ಇದೀಗ ಅರಿವಾಗಿದೆ. ಆದ್ದರಿಂದ ಜಲಶಕ್ತಿ ಅಭಿಯಾನವನ್ನು ಒಂದು ಜನಾಂದೋಲನವಾಗಿ ರೂಪಿಸಬೇಕಿದೆ ಎಂದು ಹೇಳಿದರು.

ನೀರಿನ ಕೊರತೆ ನೀಗಿಸಲು ಜಿಲ್ಲೆಯಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗೆ ಆದ್ಯತೆ ನೀಡುವ ಕೆಲಸವಾಗಬೇಕಿದೆ ಎಂದು ಡಾ.ರಾಜೇಂದ್ರ ಪ್ರತಿಪಾದಿಸಿದರು.

ನದಿ, ನಾಲಾಗಳ ಪುನಶ್ಚೇತನಕ್ಕೆ ಜಿಲ್ಲಾ ಪಂಚಾಯತ ವತಿಯಿಂದ ಕೈಗೊಳ್ಳಲಾಗಿರುವ ಕೆಲಸಗಳ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಲಾನಿ ಮೊಖಾಶಿ ಅವರು, ಬೆಳಗಾವಿ ಜಿಲ್ಲೆಯ ಮಳೆ-ಬೆಳೆ, ಹವಾಮಾನ, ಜಲ ಸಂರಕ್ಷಣಾ ಕೆಲಸಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಕೃಷಿಹೊಂಡ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಕೃಷಿಹೊಂಡಗಳನ್ನು ನಿರ್ಮಿಸಲಾಗಿದ್ದು, ಬೇಸಿಗೆಯಲ್ಲಿ ಸ್ಪಿಕ್ಲರ್ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಬಹುದು ಎಂದು ಮೊಖಾಶಿ ತಿಳಿಸಿದರು.

ಅರಣ್ಯ ಉಪ ಸಂರಕ್ಷಣಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಉಪಸ್ಥಿತರಿದ್ದರು.

ಕೃಷಿ, ತೋಟಗಾರಿಕೆ, ನೀರಾವರಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಜಲಸಂರಕ್ಷಣೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವಿವಿಧ-ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜತೆ ಜಲಶಕ್ತಿ ಅಭಿಯಾನ ಅನುಷ್ಠಾನ ಕುರಿತು ಚರ್ಚೆ ನಡೆಸಿದರು.

ಪ್ಯಾಸ್ ಫೌಂಡೇಶನ್ ಚೇರಮನ್ ಡಾ.ಮಾಧವ ಪ್ರಭು ಅವರು, ಅಭಿಯಾನದ ಪರಿಣಾಮಕಾರಿ ಅನುಷ್ಠಾನ ಬಗ್ಗೆ ಸಲಹೆಗಳನ್ನು ನೀಡಿದರು.

ಜಲ ಶಕ್ತಿ ಅಭಿಯಾನ ಅನುಷ್ಠಾನ

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲ ಶಕ್ತಿ ಅಭಿಯಾನವನ್ನು ಜುಲೈ 1 ರಂದು ಪ್ರಾರಭಿಸಲಾಗಿದೆ. ಜಲ ಶಕ್ತಿ ಅಭಿಯಾನದ ಮುಖ್ಯ ಉದ್ದೇಶ ನೀರಿನ ಸಂರಕ್ಷಣೆ ಹಾಗೂ ಭೌಗೊಳಿಕ ಕ್ಷೇತ್ರದ ಅನುಗುಣವಾಗಿ ನಿರ್ವಹಿಸಬೇಕಾದ ಕಾರ್ಯಕ್ರಮ ಕುರಿತಾಗಿ ನೀರಿನ ಸಂರಕ್ಷಣೆಗೆ ನೆಹರು ಯುವ ಕೇಂದ್ರ ಬೆಳಗಾವಿಯಲ್ಲಿ ನೊಂದಣಿಯಾದ ಯುವಕ ಸಂಘಗಳು ಕಾರ್ಯನಿರ್ವಸಬೇಕಾಗಿದೆ.

ಈ ಅಭಿಯಾನದಲ್ಲಿ ಮಾಡಬೇಕಾದ ಕಾರ್ಯಗಳು :

ಬಾವಿಗಳಲ್ಲಿ ಇದ್ದ ಕೆಸರು, ಕಲ್ಲುಗಳನ್ನು ತೆಗೆಯುವುದು, ಸ್ವಚ್ಚಗೊಳಿಸುವುದು. ಅಥವಾ ಹೊಸ ಬಾವಿಗಳನ್ನು ನಿರ್ಮಾಣ ಮಾಡುವುದು, ಜಲ ಸಂರಕ್ಷಣೆಗಳ ಬಗ್ಗೆ ಜಾಗೃತಿ ಜಾಥಾ ಮತ್ತು ಬೀದಿನಾಟಕ ಮುಖಾಂತರ ಜಾಗೃತಿ ಮೂಡಿಸುವುದು, ಪಾರಂಪರಿಕ ಕೆರೆಗಳನ್ನು ಹೊಳತೆಗೆಯುವುದು, ಮಳೆ ಬರಲು ಗಿಡಗಳನ್ನು ಹಚ್ಚವುದು ಹಾಗೂ ಅವುಗಳನ್ನು ಸಂರಕ್ಷಣೆಮಾಡುವುದು, ಹಳ್ಳ, ಕೊಳ್ಳಗಳಿಗೆ ಚೆಕ್‌ಡ್ಯಾಮ ನಿರ್ಮಾಣ ಮಾಡಿ ನೀರನ್ನು ಸಂರಕ್ಷಣೆ ಮಾಡುವುದು.

ಜುಲೈ 1, ರಿಂದ ನವೆಂಬರ 30, 2019ರ ವರೆಗೆ ಯುವಕ, ಯುವತಿ ಮಂಡಳಗಳು ತಮ್ಮ ಗ್ರಾಮದಲ್ಲಿ ಜಲ ಶಕ್ತಿ ಅಭಿಯಾನದ ಯಾವ ಕೆಲಸಗಳು ಆಗುತ್ತವೆ ಅವುಗಳನ್ನು ಮಾಡಿ (ಮೊದಲು ಸ್ಥಳ ಹೇಗೆ ಇತ್ತು ಅದರ ಪೋಟೋ ಕೆಲಸ ಆದ ನಂತರದ ಪೋಟೋ) ಪೋಟೋ ಹಾಗೂ ವರದಿಗಳನ್ನು ಪ್ರತಿವಾರ ಕಛೇರಿಗೆ ಸಲ್ಲಿಸಬೇಕು.

ಹಾಗೂ ಈ ಮೇಲಿನ ಕೆಲಸಗಳಿಗೆ ಗ್ರಾಮ ಪಂಚಾಯತ, ತಾಲೂಕಾ ಮಟ್ಟದ ಸಂಬಂಧಿಸಿದ ಇಲಾಖೆಗಳಿಗೆ ಸಂಪರ್ಕ ಮಾಡಿ ಕಾರ್ಯವನ್ನು ಕೈಗೊಳ್ಳಬಹುದು ಎಂದು ಬೆಳಗಾವಿ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ಮತ್ತು ನೆಹರು ಯುವ ಕೇಂದ್ರ ಉಪನಿರ್ದೇಶಕರಾದ ಡಿ.ದಯಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button